Latest

ಜನಸೇವಕ, ಜನಸ್ಪಂದನದಿಂದ ಜನಸ್ನೇಹಿ ಆಡಳಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನಸೇವಕ ಹಾಗೂ ಜನಸ್ಪಂದನ ಕಾರ್ಯಕ್ರಮಗಳಿಂದ ಜನಸ್ನೇಹಿ ಆಡಳಿತ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಜನಸೇವಕ- ಮನೆಬಾಗಿಲಿಗೆ ಸರ್ಕಾರದ ಸೇವೆಗಳು ,ಜನಸ್ಪಂದನ – ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ , 1902 ಸಹಾಯವಾಣಿ, ಮೊಬೈಲ್ ಆಪ್ ಹಾಗೂ ವೆಬ್ ಪೋರ್ಟಲ್ಗಳು ಹಾಗೂ ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್ ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಕರ್ನಾಟಕದ ಆಡಳಿತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾದ ದಿನ. ನಮ್ಮ ಕರ್ತವ್ಯ, ಜವಾಬ್ದಾರಿ, ಉತ್ತರದಾಯಿತ್ವ ಎನ್ನುವ ಬಗ್ಗೆ ಆಳುವವರು ಹಾಗೂ ಆಡಳಿತ ನಡೆಸುವವರಲ್ಲಿ ಸ್ಪಷ್ಟತೆ ಇದ್ದಾಗ ಮಾತ್ರ ಜನಹಿತ, ಜನಸ್ನೇಹಿ ಆಡಳಿತ ಸಾಧ್ಯವಾಗುತ್ತದೆ. ಅಧಿಕಾರಿಶಾಹಿ, ವಿಳಂಬಧೋರಣೆಯ ಮುಖಾಂತರ ತಳಹಂತದಲ್ಲಿ ನಾಗರಿಕರ ಸೇವೆ ಮರೀಚಿಕೆಯಾಗುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಸೇವೆಯನ್ನು ಸರಳವಾಗಿ ತಲುಪಿಸಲು ಸರ್ಕಾರ ಜನರ ಬಾಗಿಲಿಗೆ ಆಡಳಿತವನ್ನು ಒಯ್ಯುವ ಕೆಲಸ ಮಾಡುತ್ತಿದೆ ಎಂದರು.

ಜನರ ಸುತ್ತಲೂ ಆಡಳಿತ ಮತ್ತು ಅಭಿವೃದ್ಧಿ:
ಜನಸೇವಕ ಕಾರ್ಯಕ್ರಮದ ಮೂಲಕ ಜನ ಹೆಚ್ಚಾಗಿ ಬಳಸುವ ಸರ್ಕಾರದ ಸೇವೆಗಳನ್ನು ಸಕಾಲ ದಡಿ ಜಾರಿಗೊಳಿಸಲಾಗಿದೆ. ಜನರ ಸುತ್ತಲೂ ಆಡಳಿತ,ಅಭಿವೃದ್ಧಿ ಆಗಬೇಕು. ಇದು ಸರ್ಕಾರದ ಧ್ಯೇಯ. ಆಡಳಿತದಲ್ಲಿ ಸುಧಾರಣೆ, ಜನಪರ , ಬಡವರಪರ ನಮ್ಮ ಆಡಳಿತ ಇರಲಿದೆ. ಆಡಳಿತ ಸುಧಾರಣೆ ಸಮಿತಿಯ ಶಿಫಾರಸ್ಸಿನ ಅನ್ವಯ ಉತ್ತಮ ಆಡಳಿತಕ್ಕಾಗಿ ಹಲವಾರು ಸೇವೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಸೇವೆಗಳಿಂದ ಜನರ ಸಮಯ ಉಳಿಯುತ್ತದೆ. ಭ್ರಷ್ಟಾಚಾರ ನಿಲ್ಲುತ್ತದೆ. ನಾಗರಿಕರು ತಮ್ಮ ಸಮಯವನ್ನು ಕ್ರಿಯಾತ್ಮಕವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ರಾಜ್ಯದ ಜನ ಶ್ರೀಮಂತರಾದರೆ, ಅವರ ಜೀವನ ಮಟ್ಟ, ಆದಾಯ ಸುಧಾರಣೆ, ಆರೋಗ್ಯ ಮಟ್ಟ ಉತ್ತಮ ಶಿಕ್ಷಣ, ಉದ್ಯೋಗ ಸೃಷ್ಟಿ ಎಲ್ಲವೂ ಸುಧಾರಿಸುತ್ತದೆ. ಆಧಿಕಾರ, ಆಡಳಿತ ಎಂದರೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಎಂದು ತಿಳಿಸಿದರು.

ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾಗಬೇಕು :
ಇಂದು ರಾಜ್ಯ ತಲಾವಾರು ಆದಾಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇವಲ 35% ಜನ ಮಾತ್ರ ರಾಜ್ಯದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾದರೆ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಈ ಚಿಂತನೆ ನಮ್ಮ ಸರ್ಕಾರದ್ದು. ಸರ್ಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಇರಬೇಕು. ಫಲಾನುಭವಿಗಳಾಗಿ ತಮ್ಮ ಕಾರ್ಯದಕ್ಷತೆದಿಂದ ಆದಾಯ ಹೆಚ್ಚಿಸಿಕೊಂಡು ಅವರು ಪಾಲುದಾರರಾಗಬೇಕು. ಆಗ ಮಾತ್ರ ಸಮುದಾಯ, ಸಮಾಜ, ಸರ್ಕಾರ, ರಾಜ್ಯ ಅಭಿವೃದ್ಧಿ ಆಗುತ್ತದೆ. ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಈ ಸೇವೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈ ಕಾರ್ಯಕ್ರಮ ಇಡೀ ವ್ಯವಸ್ಥೆಯ ಬದಲಾವಣೆಗೆ ಭದ್ರ ಬುನಾದಿಯಾಗುತ್ತದೆ ಎಂದರು.

ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್ಲೈನ್ ಸೇವೆ:
60 ಲಕ್ಷ ಜನರು ಸಾರಿಗೆ ಕಚೇರಿಗೆ ಎಡತಾಕುವುದನ್ನು ತಪ್ಪಿಸಲು ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್ಲೈನ್ ಸೇವೆಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರಮುಖ 10 ಕಾರು, ಸ್ಕೂಟರ್ ಮಾರುವ ಸಂಸ್ಥೆಗಳಿಗೆ ವಾಹನ ನೋಂದಣಿ ಮಾಡಿಕೊಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಆಹಾರವಿತರಣೆ, ಬಿಬಿಎಂಪಿ ಯಾವುದೆ ಪ್ರಮಾಣಪತ್ರ. ಮಾಸಾಶನ, ಆಧಾರ ಕಾರ್ಡ್ 56 ಸೇವೆ, ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ತೆ, 1902 ಸಹಾಯವಾಣಿ , ಮೊಬೈಲ್ ಆಪ್ ಪ್ರಾರಂಭಿಸಲಾಗಿದೆ. ಸುಮಾರು 4,11,000 ಹೊಸ ಪಡಿತರ ಕಾರ್ಡಿಗೆ ಅನುಮೋದನೆ ನೀಡಿರುವುದಾಗಿ ತಿಳಿಸಿದರು .

ನಿಗದಿತ ಗುರಿ, ಸ್ಪಷ್ಟ ದಿಕ್ಸೂಚಿ, ಸಂಕಲ್ಪ, ಬದ್ಧತೆ ಯಿಂದ ಆಡಳಿತ ಸುಧಾರಣೆ ಆಗಲಿದೆ. ಜನಸೇವಕರು ಜನರ ಮನೆ ಬಾಗಿಲಿಗೆ ಬಂದಾಗ ನಾಗರಿಕರು ಸೌಜನ್ಯದಿಂದ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button