Kannada NewsKarnataka NewsLatest

ಚಿಕ್ಕೋಡಿ, ಯಕ್ಸಂಬಾ ಮಳೆ: ಸ್ವತಃ ಮಾಹಿತಿ ಪಡೆದುಕೊಂಡ ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲೆಯ ಚಿಕ್ಕೋಡಿ, ಯಕ್ಸಂಬಾ ಮತ್ತಿತರ ಭಾಗಗಳಲ್ಲಿ ಭಾನುವಾರ ಮಳೆಯ ರಭಸಕ್ಕೆ ಆಸ್ಪತ್ರೆಗೆ ನೀರು ನುಗ್ಗಿರುವುದು ಹಾಗೂ ವಾಹನಗಳು ಕೊಚ್ಚಿಕೊಂಡು ಹೋಗಿರುವ ಕುರಿತು ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಸ್ವತಃ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ಯಕ್ಸಂಬಾದಲ್ಲಿ ವಾಹನಗಳು ಕೊಚ್ಚಿ ಹೋಗಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ ಮುಖ್ಯಮಂತ್ರಿಗಳು ತಕ್ಷಣವೇ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ದೂರವಾಣಿ ಕರೆ ಮಾಡಿದ್ದರು.
ರಸ್ತೆಯಲ್ಲಿ ನಿಲ್ಲಿಸಿದ್ದ ಸುಮಾರು ಇಪ್ಪತ್ತು ದ್ವಿಚಕ್ರ ವಾಹನಗಳು ಮತ್ತು ಎರಡು ಕಾರುಗಳು ಮಳೆಯ ರಭಸಕ್ಕೆ ಆನತಿ ದೂರದವರೆಗೆ ತೇಲಿಕೊಂಡು ಹೋಗಿದ್ದು, ಯಾವುದೇ ರೀತಿಯ ಹಾನಿಯಾಗಿರುವುದಿಲ್ಲ.
ಅದೇ ರೀತಿ ಆಸ್ಪತ್ರೆಗೂ ಕೂಡ ನೀರು ನುಗ್ಗಿದ್ದು, ಕೆಲ ಹೊತ್ತಿನಲ್ಲಿಯೇ ನೀರು ಹೊರಕ್ಕೆ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಮುನ್ನೆಚ್ಚರಿಕೆ ವಹಿಸಲು ಸೂಚನೆ:
ಮಳೆಗಾಲ ಆರಂಭಗೊಂಡಿರುವುದರಿಂದ ಜನರ ಜೀವ, ಆಸ್ತಿಪಾಸ್ತಿಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರಿಗೆ ಸೂಚನೆ ನೀಡಿದರು.
ಮಳೆಗಾಲ ಮತ್ತು ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.

ಚಿಕ್ಕೋಡಿ ಭಾಗದಲ್ಲಿ ಭರ್ಜರಿ ಮಳೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button