Belagavi NewsBelgaum NewsKannada NewsKarnataka NewsNationalPolitics

*ಸಿಎಂ‌ ಸಿದ್ದರಾಮಯ್ಯ ಅವರೇ ನೀವು ಸಾಚಾ ಆಗಿದ್ದರೆ, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ: ಶೆಟ್ಟರ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಎಂ‌ ಸಿದ್ದರಾಮಯ್ಯ ಅವರೇ ನೀವು ಸಾಚಾ ಆಗಿದ್ದರೆ, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ, ನೀವು ಸಾಚಾ ಎನ್ನುವುದು ಗೊತ್ತಾಗುತ್ತೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಬಹಿರಂಗ ಸವಾಲು ಹಾಕಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಪದೇ ಪದೇ ನಾನು ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ನಿಮ್ಮ‌ ಪ್ರಾಮಾಣಿಕತೆ ಎಲ್ಲಿದೆ..? ಸದನದಲ್ಲಿ ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚಿಸಿದಾಗ ಚರ್ಚೆಗೆ ಅವಕಾಶ ಕೊಡಲಿಲ್ಲ. ಆದರೆ, ಸದನದಲ್ಲಿ ಉತ್ತರ ಕೊಡದೇ ಮಾಧ್ಯಮಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದೀರಿ. ಇದೆಲ್ಲವನ್ನು ನೋಡಿದಾಗ ನೀವು ತಪ್ಪು ಮಾಡಿರೋದು ಗೊತ್ತಾಗುತ್ತದೆ ಎಂದು ತಿರುಗೇಟು ಕೊಟ್ಟರು. ಇನ್ನು ಅರ್ಕಾವತಿ ಹಗರಣ ಬಗ್ಗೆ ನಾನು ಧ್ವನಿ ಎತ್ತಿದ್ದೆ.  ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿದ ವರದಿಯನ್ನು ಸದನದಲ್ಲಿ ‌ಮಂಡನೆ ಮಾಡುವಂತೆ ಒತ್ತಾಯಿಸಿದರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಯಿಸಿದ ಜಗದೀಶ ಶೆಟ್ಟರ್, ಪ್ರತಿಪಕ್ಷವಾಗಿ ನಾವು ಸರ್ಕಾರ ಮಾಡಿದ ತಪ್ಪನ್ನು ಪಾದಯಾತ್ರೆ ಮೂಲಕ ಜನರ ಬಳಿ ಹೋಗಿ ಜಾಗೃತಿ ಮೂಡಿಸಿದ್ದೇವೆ. ಮುಡಾ, ಎಸ್ಸಿ, ಎಸ್ಟಿ ಹಗರಣದಲ್ಲಿ ನೇರವಾದ ಪಾತ್ರ ಇದೆ. ಹಾಗಾಗಿ ನಾವು ಸಿಬಿಐ ತಿನಿಖೆಗೆ ಒತ್ತಾಯಿಸಿದ್ದೇವೆ ಎಂದು ಜಗದೀಶ ಶೆಟ್ಟರ್ ತಿಳಿಸಿದರು.

ರಾಜ್ಯ ಬಿಜೆಪಿ ಪಕ್ಷದಲ್ಲಿ ಭಿನ್ನಮತ ವಿಚಾರಕ್ಕೆ ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ಈ ವಿಚಾರಗಳನ್ನು ವರಿಷ್ಠರು ಗಮಿಸುತ್ತಾರೆ, ಸರಿಯಾದ ಸಮಯದಲ್ಲಿ ಕ್ರಮಕೊಳ್ಳುತ್ತಾರೆ ಎಂದು ತಿಳಿಸಿದರು.‌

ಭಿನ್ನಮತಿಯರ ವಿರುದ್ಧ ಯಾಕೆ ಹೈಕಮಾಂಡ್ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೈಕಮಾಂಡ್ ಅಲ್ಲ, ಎಲ್ಲವನ್ನೂ ವರಿಷ್ಠರು ಸಾಂದರ್ಭಿಕವಾಗಿ ಗಮನಿಸುತ್ತಾರೆ. ಸಂದರ್ಭ ಬಂದಾಗ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಎಲ್ಲರ ಜೊತೆಗೆ ಮಾತನಾಡಿ ವರಿಷ್ಠರು ನಿರ್ಧರಿಸುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಏನಾದರೂ ಹೆಚ್ಚು ಕಮ್ಮಿ ಆಗಿದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಕೂಡಲಸಂಗಮದಿಂದ ಬಳ್ಳಾರಿ ಪಾದಯಾತ್ರೆಗೆ ಹೋಗುತ್ತಿರಾ ಎಂಬ ಪ್ರಶ್ನೆಗೆ ನಾನು ಪಕ್ಷಕ್ಕೆ ಬದ್ಧ ಇರೋ ವ್ಯಕ್ತಿ, ಪಕ್ಷ ಕೈಗೊಳ್ಳುವ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ ಎಂದರು.

ಗ್ಯಾರಂಟಿ ಯೋಜನೆ ಹೊರತುಪಡಿಸಿ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನ ಮಾಡದ ಕಾಂಗ್ರೆಸ್ ಮಾಡದ ವಿಚಾರಕ್ಕೆ ಈ ಗ್ಯಾರಂಟಿಗಳನ್ನು ಜಾರಿಗೆ ತರುವಷ್ಟರಲ್ಲಿ ಕಾಂಗ್ರೆಸ್ ನವರು ಹಣ್ಣು ಹಣ್ಣಾಗಿದ್ದಾರೆ. ಇನ್ನುಳಿದ ಭರವಸೆ ಈಡೇರಿಸುತ್ತಾರಾ..? ಅಥವಾ ಈಡೇರಿಸುವುದಿಲ್ಲವೋ ಎಂಬ ಪರಿಸ್ಥಿಯಿದೆ. ನಾನು ಮೊನ್ನೆ ಕಾರಟಗಿ, ಕೊಪ್ಪಳಕ್ಕೆ ಹೋಗಿ, ಟಿಬಿ ಡ್ಯಾಮ್ ಗೇಟ್ ಒಡೆದಿರುವುದನ್ನು ಪರಿಶೀಲನೆ ನಡೆಸಿ ಬಂದಿದ್ದೇನೆ. ಮಧ್ಯಾಹ್ನ ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ. ಆದರೆ, ಹಣದ ಕೊರತೆಯಿಂದ ಹೊಸ ಯೋಜನೆ, ಹೊಸ ಡ್ಯಾಮ್ ನಿರ್ಮಾಣ ಬಿಟ್ಟುಬಿಡಿ, ಇರುವ ವ್ಯವಸ್ಥೆ ನಿರ್ವಹಣೆ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್ ಚಿತ್ತ ಬರೀ ರಾಜಕಾರಣದತ್ತ ನೆಟ್ಟಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಬರೀ ರಾಜಕಾರಣ ಮಾಡುತ್ತಿರಿ ಎಂದು ವಾಗ್ದಾಳಿ ಮಾಡಿದರು.

ಟಿಬಿ ಡ್ಯಾಮ್ ಗೇಟ್ ಸರಿಯಾಗಿ ಇದೆಯೋ, ಇಲ್ಲವೋ ಎನ್ನುವುದನ್ನು ನೋಡೋಕೆ ಆಗಿಲ್ಲ. ಅಲ್ಲಿನ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆ ಖಾಲಿ ಇದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂದರೆ ಕೆಲಸ ಹೇಗೆ ಆಗಬೇಕು ಎಂದು ಅವರ ಪಕ್ಷದ ಸಂಸದರೇ ಪ್ರಶ್ನಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಕಿಡಿಕಾರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button