Latest

ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಸಮಗ್ರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ರೇಣುಕಾ ಯಲ್ಲಮ್ಮ‌ ದೇವಸ್ಥಾನ ಪೌರಾಣಿಕ ಕ್ಷೇತ್ರವಾಗಿದ್ದು. ಇಲ್ಲಿ ಬರುವಂತಹ‌ ಲಕ್ಷಾಂತರ ಭಕ್ತಾಧಿಗಳ ವಸತಿ, ಕುಡಿಯುವ ನೀರು‌ ಹಾಗೂ ಶೌಚಾಲಯಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌‌ ಹೇಳಿದರು.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರೂ. 22.45 ಕೋಟಿ ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ ರೂ‌. 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗಳು ಮತ್ತು ಅತಿಥಿಗೃಹವನ್ನು ಭಾನುವಾರ (ಅ‌.13) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೇವಿಯ ದರ್ಶನ ಪಡೆದ‌ ನಂತರ ಪ್ರವಾಸೊದ್ಯಮ‌ ಮಂಡಳಿ, ರೇಣುಕಾ‌ ಯಲ್ಲಮ್ಮ‌ದೇವಿ ಪ್ರಾಧಿಕಾರದ ಸಭೆಯನ್ನು‌ ಜರುಗಿಸಲಾಗಿದೆ. ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗಾಗಿ ಈ‌‌ ಮಂಡಳಿ ಹಾಗೂ ಪ್ರಾಧಿಕಾರವನ್ನು ರಚಿಸಲಾಗಿದೆ. ಇಲ್ಲಿರುವ 1087 ಎಕರೆ ಜಾಗೆ ಇದ್ದರೂ ಸಹ ಆಗಮಿಸುವ ಭಕ್ತಾದಿಗಳಿಗೆ ‌ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. 

ರೇಣುಕಾ ಯಲ್ಲಮ್ಮ ದೇವಿಯ ಪುಣ್ಯ‌ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಸ್ತಾಪ ಮಾಡಲಾಗಿದೆ. ಭಕ್ತಾದಿಗಳಿಗೆ ವಸತಿಗಾಗಿ ಡಾರ್ಮೆಟ್ರಿ ಹಾಗೂ ವಾಣಿಜ್ಯ‌ ಮಳಿಗೆಗಳನ್ನು ಇಂದು ಉದ್ಘಾಟಿಸಲಾಗಿದೆ. ಈ ಪವಿತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಬರುವಂತಹ ಭಕ್ತಾದಿಗಳ‌ ಅನುಕೂಲಕ್ಕಾಗಿ ವಸತಿ, ಕುಡಿಯುವ‌‌ ನೀರು‌ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗುವದು. ಇವುಗಳ‌ ನಿರ್ವಹಣೆ ಹಾಗೂ ಪರಿಸರ ಸ್ವಚ್ಚವಾಗಿಡುವಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದರು.

ಇಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳ ಉಪಯೋಗವಾಗಬೇಕು. ಕಾನೂನು ಬಾಹಿರ ಮಳಿಗೆಗಳ ನಿರ್ಮಾಣಗಬಾರದು. ಕ್ಷೇತ್ರದ ಸಮಗ್ರ‌ ಅಭಿವೃದ್ಧಿಗಾಗಿ ಮಂಡಳಿ ಹಾಗೂ ಪ್ರಾಧಿಕಾರ ರಚನೆ ಮಾಡಲಾಗಿದೆ. ಅಲ್ಲದೇ ದಾಸೋಹ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂದಿನ ವರ್ಷ‌‌ ಕ್ರ‌ಮ ವಹಿಸಲಾಗುವುದು ಎಂದು‌ ಮುಖ್ಯಂಮತ್ರಿಗಳಾದ ಸಿದ್ಧರಾಮಯ್ಯನವರು ಭರವಸೆ ನೀಡಿದರು.

ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಯಲ್ಲಮ್ಮ ದೇವಿಯ ಸನ್ನಿಧಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಕ್ರಾಂತಿಕಾರಿಕ ಬದಲಾವಣೆಯನ್ನು ಕ್ಷೇತ್ರದಲ್ಲಿ ತರುವಂತಹ ಐತಿಹಾಸಿಕ ಸಭೆಯನ್ನು ಜರುಗಿಸಿ ನಿರ್ಣಯಿಸಲಾಗಿದೆ ಎಂದರು.

ಯಲ್ಲಮ್ಮನ ದೇವಸ್ಥಾನಕ್ಕೆ ಒಂದು ಸ್ವರೂಪ‌ ನೀಡುವ ಉದ್ದೇಶದೊಂದಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಇಲ್ಲಿ ಬರುವಂತಹ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಹಾಗೂ ಧಾರ್ಮಿಕ ಕ್ಷೇತ್ರ ದರ್ಶನದ ಜೊತೆಗೆ ಪ್ರವಾಸಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದೊಂದಿಗೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು. 

ನಮ್ಮ‌ ಸರಕಾರ ನುಡಿದಂತೆ‌ ನಡೆಯುವ ಸರಕಾರ ಜನರಿಗೆ ನೀಡಿದಂತಹ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು‌ ಮಾತನಾಡಿ, ಇಂದು ಸುಮಾರು 31 ಕೋಟಿ ರೂ ಗಳ‌ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಪಣೆ‌ ಮಾಡಲಾಗಿದೆ.‌ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ರೂಪು ರೇಷೆಗ‌ಳ ಕುರಿತು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬರುವಂತಹ ದಿನಗಳಲ್ಲಿ ದೇವಸ್ಥಾನಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಬಸವಣ್ಣನವರ ಚಿಂತನೆಗಳನ್ನು ನಮ್ಮ ಮುಖ್ಯಮಂತ್ರಿಗಳಾದ ಸಿದ್ಧ ರಾಮಯ್ಯನವರು ಅಳವಡಿಸಿಕೊಂಡು ರಾಜ್ಯದ  ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಪ್ರಾಧಿಕಾರದ ಸಭೆಯನ್ನು ಜರುಗಿಸಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಹಂತ ಹಂತವಾಗಿ  ಯೋಜನೆಗಳನ್ನು  ರೂಪಿಸಲಾಗಿದೆ‌ ಎಂದರು.

ಪ್ರವಾಸೋದ್ಯಮ ಇಲಾಖೆ ಸಚಿವ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಮಾತನಾಡಿ, ಯಲ್ಲಮ್ಮ‌‌ ದೇವಿಯ ಈ ಕ್ಷೇತ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು‌ ಐತಿಹಾಸಿಕ ದಿನವಾಗಿದೆ. ಹುಣ್ಣಿಮೆ ದಿನಗಳಲ್ಲಿಬಿಲ್ಲಿಗರ ಆಗಮಿಸುವ ಭಕ್ತಾಧಿಗಳಿಗೆ ಇವತ್ತಿನ ವರೆಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿರುವುದಿಲ್ಲ.‌

ದೇವಸ್ಥಾನದ ಪ್ರಾಧಿಕಾರದ ಹಾಗೂ ಪ್ರವಾಸೋದ್ಯಮ ಮಂಡಳಿಗಳ ಸಭೆ ಇಂದು ಜರುಗಿಸಿ ಮುಂದಿನ ಎರಡು ವರ್ಷಗಳದೊಳಗಾಗಿ ಕನಿಷ್ಠ ಆರು ಸಾವಿರ ಜನರಿಗೆ ಉಳಿದುಕೊಳ್ಳಲು ಡಾರ್ಮಮೆಟ್ರಿ,‌ ರಸ್ತೆ, ಶೌಚಾಲಯ ಹಾಗೂ ಕುಡಿಯುವ ನೀರಿನ‌ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಭಕ್ತಾಧಿಗಳ‌ ಅನುಕೂಲ‌ ಕಲ್ಪಿಸುವ ಸಲುವಾಗಿ ತಿರುಪತಿ, ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಲೊಕೋಯೋಗಿ ಇಲಾಖೆ ವತಿಯಿಂದ ರಸ್ತೆ, ಕೋಣೆಗಳ ನಿರ್ಮಾಣಕ್ಕೆ ‌ಮನವಿ‌ ಮಾಡಲಾಗಿದೆ. ದೇವಿ ದರ್ಶನಕ್ಕೆ ಅನುಕೂಲವಾಗುವಂತೆ ಭಕ್ತರಿಗೆ ಶೀಘ್ರ ದರ್ಶನ ದೊರಕಿಸುವ ವ್ಯವಸ್ಥೆಗಳ‌ ಕುರಿತು ಚರ್ಚಿಸಲಾಗಿದೆ. ಯಲ್ಲಮ್ಮನ ಗುಡ್ಡಕ್ಕೆ ಚಕ್ಕಡಿಗಳ ಮೂಲಕ ಆಗಮಿಸುವ ಜಾನುವಾರುಗಳಿಗೂ ದಾಸೋಹದ ವ್ಯವಸ್ಥೆ ಮಾಡುವ ನಿರ್ಣಯಗಳನ್ನು‌ ಇಂದಿನ‌ ಸಭೆಯಲ್ಲಿ ಕೈಗೊಳ್ಳಲಾಗಿದೆ. 

ಭಕ್ತಾದಿಗಳಿಗೆ ಊಟ ಮಾಡಲು ಅನುಕೂಲವಾಗಲು ಒಂದು ಭವ್ಯ ದಾಸೋಹ ಭವನವನ್ನು ಸರಕಾರದಿಂದ ಸ್ಥಾಪಿಸಲು‌ ಮುಖ್ಯಮಂತ್ರಿಗಳಲ್ಲಿ ಮನವಿ‌ ಮಾಡಿದರು. 

ಶಾಸಕರಾದ ವಿಶ್ವಾಸ ವೈದ್ಯ‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಲ್ಲಮ್ಮ‌ದೇವಸ್ಥಾನ ಪ್ರಾಧಿಕಾರದ ರಚನೆಯ ಬಹುದಿನಗಳ‌ ಕನಸಾದ   ಈ ದಿವಸ ನನಸಾಗಿದೆ. ಕೊಟ್ಯಾಂತರ ಭಕ್ತಾದಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಿಂದ ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಲೋಕಾರ್ಪಣೆ ಮಾಡಲಾಗುತ್ತಿದೆ. ಭಕ್ತಾದಿಗಳ‌ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ  ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ,  ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ ಕಾಗೆ,  ಶಾಸಕರಾದ ರಾಜು(ಆಸೀಫ)ಸೇಠ, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ‌ ಚನ್ನರಾಜ ಹಟ್ಟಿಹೊಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ‌‌ ಅಧ್ಯಕ್ಷ ವಿನಯ ನಾವಲಗಟ್ಟಿ, ಯಲ್ಲಮ್ಮ ಪುರಸಭೆ ಅಧ್ಯಕ್ಷರಾದ ಚಿನ್ನವ್ವ ಹುಚ್ಚಣ್ಣವರ,

ಉಗರಗೋಲ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ‌ ಪೊಲಿಸ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿ.ಇ.ಓ. ರಾಹುಲ ಶಿಂಧೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಚ್, ರೇಣುಕಾ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಪಿ.ಬಿ.ಮಹೇಶ, ಸಾರ್ವಜನಿಕರು ಭಾಗವಹಿಸದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button