ಕಾಟಾಚಾರದ ಭದ್ರತೆ ಬೇಡ ಎಂದು ಸಿಬ್ಬಂದಿ ವಾಪಸ್ ಕಳುಹಿಸಿದ ಮಾಜಿ ಸಚಿವ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಾಜಿ ಸಚಿವ ಯು.ಟಿ ಖಾದ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭದ್ರತೆ ಹೆಚ್ಚಿಸಲು ನಿರ್ಧರಿಸಿದೆ. ಆದರೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕ ಮಾಡುವ ರಾಜ್ಯ ಸರ್ಕಾರದ ಕಾಟಾಚಾರದ ಭದ್ರತೆಯಿಂದ ಏನೂ ಪ್ರಯೋಜನವಿಲ್ಲ ಎಂದು ಯು.ಟಿ ಖಾದರ್ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ನನಗೆ ಜೀವ ಬೆದರಿಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವತ: ಗೃಹ ಸಚಿವರು ನನಗೆ ಕರೆ ಮಾಡಿ ಭದ್ರತೆ ಪಡೆಯುವಂತೆ ಹೇಳಿದ್ದಾರೆ. ಆದರೆ ಓರ್ವ ಪೋಲಿಸ್ ಸಿಬ್ಬಂದಿಯನ್ನು ಭದ್ರತೆಗೆ ನೀಡಲು ಸರ್ಕಾರ ಮುಂದಾಗಿದೆ. ಇಂತಹ ಕಾಟಾಚಾರದ ಭದ್ರತೆ ನನಗೆ ಬೇಡ ಅಂತ ನಾನು ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದೇನೆ ಎಂದರು.

Related Articles

ಭದ್ರತೆ ಕೊಟ್ಟರೆ ಸರಿಯಾಗಿ ಕೊಡಬೇಕು. ಒಬ್ಬ ಪೊಲೀಸರ ಭದ್ರತೆ ಕೊಟ್ಟು ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ತನ್ವೀರ್ ಸೇಟ್ ಅವರಿಗೂ ಓರ್ವ ಗನ್ ಮೆನ್ ಕೊಟ್ಟಿದ್ದರು. ಘಟನೆಯಾದ ನಂತರ ಆ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇದರಲ್ಲಿ ಆತನ ತಪ್ಪು ಏನು? ಓರ್ವ ಪೊಲೀಸ್ ಭದ್ರತೆಗೆ ನಿಯೋಜಿಸಿದರೆ ಆತ 8 ಗಂಟೆ ಕೆಲಸ ಮುಗಿಸಿ ಹೋಗುತ್ತಾನೆ. ಆಮೇಲೆ ಏನು ಮಾಡುವುದು? ನನಗೆ ಬೆದರಿಕೆ ಇದೆ ಎಂದು ಗೃಹ ಸಚಿವರೆ ಹೇಳಿದ್ದಾರೆ. ಆದರೆ ಸೂಕ್ತ ಭದ್ರತೆ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಹತ್ಯೆಗೆ ಮೂಲಭೂತವಾದಿ ಸಂಘಟನೆ ಸ್ಕೆಚ್ ರೂಪಿಸಿದೆ. ಮೈಸೂರು ಶಾಸಕ ತನ್ವೀರ್ ಸೇಠ್ ಅವರ ಹತ್ಯೆಗೆ ಸಂಚು ರೂಪಿಸಿದ ಮಾದರಿಯಲ್ಲೇ ಖಾದರ್ ಹತ್ಯೆಗೂ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಸರ್ಕಾರ ಖಾದರ್ ಅವರಿಗೆ ಭದ್ರತೆ ಹೆಚ್ಚಿಸಲು ಸೂಚಿಸಿದೆ.

Home add -Advt

Related Articles

Back to top button