*ಮೆಕ್ಕೆಜೋಳದ ರಾಶಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಕಂಗಾಲಾದ ರೈತ ಕುಟುಂಬ*

ಪ್ರಗತಿವಾಹಿನಿ ಸುದ್ದಿ: ನೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ರೈತ ಕುಟುಂಬವೊಂದು ಈ ಬಾರಿ ನೂರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದು ಕೊಯ್ಲು ಮಾಡಿ ಮನೆ ಮುಂದೆ ಮೆಕ್ಕೆಜೋಳದ ರಾಶಿ ಹಾಕಿತ್ತು. ಇನ್ನೇನು ಮೆಕ್ಕೆಜೋಳವನ್ನು ಮಾರುಕಟ್ಟೆಗೆ ಸಾಗಿಸಲೆಂದು ಸಿದ್ಧತೆ ನಡೆಸಿತ್ತು. ಆದರೆ ದುಷ್ಕರ್ಮಿಗಳ ಗುಂಪೊಂದು ರಾತ್ರಿ ಬೆಳಗಾಗುವಷ್ಟರಲ್ಲಿ ಮೆಕ್ಕೆಜೋಲದ ರಾಶಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ.
60 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಒಂದೇ ಒಂದು ಮೆಕ್ಕೆಜೋಳ ಕೂಡ ಉಳಿದಿಲ್ಲ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಇದನ್ನು ಕಂಡು ಕಂಗಾಲಾದ ರೈತ ಕುಟುಮ್ಬ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದೆ. ಗ್ರಾಮಸ್ಥರು ಕುಟುಮ್ಬವನ್ನು ರಕ್ಷಿಸಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸುಟ್ಟು ಹೋಗಿರುವ ಮೆಕ್ಕೆಜೋಳದ ಮುಂದೆ ಕುಳಿತು ರೈತ ಕುಟುಂಬ ಕಣ್ಣಿರಿಟ್ಟಿದೆ. ದಿಕ್ಕೇ ತೋಚದಂತಾಗಿದೆ ಎಂದು ಗೋಳಾಡುತ್ತಿದೆ.




