ಕ್ವಾರಂಟೇನ್ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯಸರ್ಕಾರ ಕಟ್ಟುನಿಟ್ಟಿನ ಕ್ರಮಾ ಕೈಗೊಳ್ಳಲು ಮುಂದಾಗಿದ್ದು, ಈ ನಡುವೆ ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದೂ ಕೂಡ ಸರ್ಕಾರದ ಸೂಚನೆ, ನಿಯಮಗಳನ್ನು ಜನತೆ ಸಮರ್ಪಕವಾಗಿ ಪಾಲಿಸುತ್ತಿಲ್ಲ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೊಮ್ಮಾಯಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು, ಹಾಗೂ ಬೆಳಗಾವಿ ಜಿಲ್ಲೆಗಳು ಇಂದಿನಿಂದ ಲಾಕ್ ಡೌನ್ ಮಾಡಲು ಘೋಷಿಸಲಾಗಿದೆ. ನಾಳೆಯಿಂದ ಮಾರ್ಚ್ 31ರವರೆಗೆ 9 ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅಂಗಡಿ- ಮುಂಗಟ್ಟು ತೆರೆಯದಂತೆ ಬೆಂಗಳೂರು ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವೈರಸ್ ಹರಡದ ರೀತಿ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಯಾರು ಕ್ವಾರಂಟೇನ್ ನಲ್ಲಿದ್ಸಾರೋ ಅವರು ತಾವೇ ನಿರ್ಬಂಧ ವಿಧಿಸಿಕೊಳ್ಳಬೇಕು. ಕೆಲವರು ಹೋಮ್ ಕ್ವಾರಂಟೇನ್ ಉಲ್ಲಂಘನೆ ಮಾಡುತ್ತಿದ್ದಾರೆ. ಏರ್​ಪೋರ್ಟ್​ನಲ್ಲಿ ಸ್ಟಾಂಪ್ ಹಾಕಿದ್ದರೂ ಓಡಾಡುತ್ತಿದ್ದಾರೆ. ಕ್ವಾರಂಟೇನ್ ಉಲ್ಲಂಘನೆ ಮಾಡಿದರೆ ಐಪಿಸಿ ಸೆಕ್ಷನ್ 271 ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರು ತಿಂಗಳ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಎಚ್ಚರಿಕೆ ನಿಡಿದರು.

ಇನ್ನು ದಿನಕ್ಕೆ 5000 ಮಾಸ್ಕ್​ಗಳನ್ನು ಕೈದಿಗಳು ತಯಾರಿಸುತ್ತಿದ್ದಾರೆ. ಗೃಹ ಇಲಾಖೆಗೆ 17000 ಮಾಸ್ಕ್ ತಯಾರಿಸಿ ಕೊಟ್ಟಿದ್ದಾರೆ. ಇನ್ನೂ 40-50 ಸಾವಿರ ಮಾಸ್ಕ್ ಬೇಕಾಗಿದೆ. ಹೀಗಾಗಿ ಹೊರಗಿನವರಿಂದ ಮಾಸ್ಕ್ ತರಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button