Latest

*ನಾನು ಕೇಳಬೇಕಾದನ್ನು ಕೇಳಿದ್ದೇನೆ, ದೇವರು ಏನು ವರ ನೀಡುತ್ತಾನೋ ಕಾದು ನೋಡೋಣ; ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ;ಮಂಡ್ಯ: ರಾಜ್ಯದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾನು ಹಾಗೂ ನನ್ನ ಧರ್ಮಪತ್ನಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದೇವೆ. ಭಕ್ತ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಇಲ್ಲಿ ನಾನು ಕೇಳಬೇಕಾದನ್ನು ಕೇಳಿದ್ದೇನೆ, ದೇವರು ಏನು ವರ ನೀಡುತ್ತಾನೋ ಕಾಯ್ದು ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಆದಿಚುಂಚನಗಿರಿ ದೇವಾಲಯಕ್ಕೆ ಭೇಟಿ ನೀಡಿ ಕಾಲಭೈರವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ ಧರ್ಮ, ಮಠ, ದೇವರ ಬಗ್ಗೆ ಅಭಿಮಾನ, ಭಕ್ತಿ ಹೆಚ್ಚು. ಸರ್ಕಾರ ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ. ನಮ್ಮ ಮಠ ಹಾಗೂ ಶ್ರೀಗಳಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದೇನೆ.

ಈ ಪುಣ್ಯ ಸ್ಥಳದಿಂದ ರಾಜ್ಯದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಯುಗಾದಿ ಹಬ್ಬದ ಶುಭಾಶಯ ಕೋರುತ್ತೇನೆ.

ಈ ಹಿಂದೆ ಬೇರೊಬ್ಬರು ಇಲ್ಲಿ ಅಮವಾಸ್ಯೆ ಪೂಜೆ ಮಾಡಿ ಮುಖ್ಯಮಂತ್ರಿಯಾಗಿದ್ದು, ನೀವು ಆ ವಿಚಾರವಾಗಿ ಸಂಕಲ್ಪ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ‘ಕೇಳುವವನು ನಾನು, ವರ ನೀಡುವವನು ದೇವರು. ಇದು ನನಗೂ ದೇವರಿಗೂ ಬಿಟ್ಟ ವಿಚಾರ. ಇದರ ಮಧ್ಯೆ ಮೂರನೇಯವರು ಬರುವುದು ಬೇಡ’ ಎಂದರು.

ಉರಿಗೌಡ, ನಂಜೇಗೌಡ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವ್ಯಾರೂ ಹೇಡಿಗಳಲ್ಲ. ಸಿ.ಟಿ ರವಿಯೇ ಉರಿಗೌಡ, ಅಶ್ವತ್ಥ ನಾರಾಯಣ ನಂಜೇಗೌಡ. ಅವರೇ ಹೊಸದಾಗಿ ಕಥೆ ಬರೆಯುತ್ತಿದ್ದಾರೆ. ಸಿನಿಮಾ ಮಾಡಲು ಮತ್ತೊಬ್ಬ ಸಿದ್ಧನಾಗಿದ್ದಾನೆ. ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಪ್ರಯತ್ನ. ನಾವು ಇದನ್ನು ಖಂಡಿಸುತ್ತೇವೆ. ಈ ವಿಚಾರದಲ್ಲಿ ನಮ್ಮ ಸ್ವಾಮಿಗಳು ಹೋರಾಟದ ನಾಯಕತ್ವ ವಹಿಸಬೇಕೇ ಹೊರತು, ಯಾರನ್ನೋ ಕರೆದು ಸಂಧಾನ ಮಾಡಬಾರದು. ಈ ಸಮಾಜದ ಮಠದ ಪೀಠಾಧಿಪತಿಗಳಾಗಿ ಈ ವಿಚಾರದಲ್ಲಿ ಹೋರಾಟದ ನೇತೃತ್ವ ವಹಿಸುವುದು ಅವರ ಜವಾಬ್ದಾರಿ.

ಒಕ್ಕಲಿಗರ ಸಂಘ, ಸಂಸ್ಥೆಗಳು ಸೇರಿದಂತೆ ಹಿಂದೂ ಧರ್ಮದ ಎಲ್ಲಾ ಮಠಾಧೀಶರನ್ನು ಸೇರಿಸಿಕೊಂಡು ಈ ರಾಷ್ಟ್ರದ್ರೋಹಿ, ಸಮಾಜದ್ರೋಹಿಗಳ ವಿರುದ್ಧ ಹೋರಾಟ ಮಾಡಬೇಕಿದೆ.

ನಮ್ಮದು ದೊಡ್ಡ ಸಮಾಜ. ಹೀಗಾಗಿ ನಾವು ಭಿಕ್ಷೆ ಬೇಡುವ ಅಗತ್ಯವಿಲ್ಲ. ನಮಗೆ ಛಲ, ಸ್ವಾಭಿಮಾನ ಇದೆ. ನಾವು ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇವೆ. ಅವರು ಸಿನಿಮಾನಾದರೂ ಮಾಡಲಿ, ಏನಾದರೂ ಮಾಡಿಕೊಳ್ಳಲಿ. ಆದರೆ, ಈ ಭೂಮಿ ತಾಯಿಯ ಒಕ್ಕಲುತನ ಮಾಡಿ ಸ್ವಾಭಿಮಾನದಿಂದ ಬದುಕುತ್ತಿರುವ ಈ ಸಮುದಾಯಕ್ಕೆ ಅಪಮಾನ ಮಾಡುವುದು ಬೇಡ. ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಸಹಿಸುವುದಿಲ್ಲ.

ಸ್ವಾಮೀಜಿಗಳು ಹೋರಾಟದ ನಾಯಕತ್ವ ವಹಿಸದಿದ್ದರೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಕ್ಕಕ್ಕಿಟ್ಟು ನಾನೇ ಈ ಹೋರಾಟ ಆರಂಭಿಸುತ್ತೇನೆ’ ಎಂದರು.

ಸಿನಿಮಾ ತೆಗೆಯುವ ವಿಚಾರದಲ್ಲಿ ಅವರಿಗೆ ಹಿನ್ನಡೆಯಾಯಿತೇ ಎಂದು ಕೇಳಿದ ಪ್ರಶ್ನೆಗೆ, ‘ಅವರು ಯಾವ ಸಿನಿಮಾ ಬೇಕಾದರೂ ಮಾಡಲಿ. ಈ 40% ಕಮಿಷನ್ ಭ್ರಷ್ಟಾಚಾರ, ಕೋವಿಡ್ ಸಮಯದಲ್ಲಿ ಮಾಡಿದ ಅಕ್ರಮಗಳ ಬಗ್ಗೆ ಸಿನಿಮಾ ಮಾಡಲಿ ಸಾಕು’ ಎಂದರು.

ಉರಿಗೌಡ, ನಂಜೇಗೌಡರನ್ನು ಪಠ್ಯ ಪುಸ್ತಕಕ್ಕೆ ಸೇರಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ನಿಮಗೆ ಪಾಠ ಮಾಡಿದ ಶಿಕ್ಷಕರನ್ನು ಕೇಳಿ. ಇಲ್ಲವೇ ಸಿ.ಟಿ ರವಿ ಹಾಗೂ ಅಶ್ವತ್ಥ್ ನಾರಾಯಣ ಅವರಿಗೆ ಪಾಠ ಮಾಡಿದ ಶಿಕ್ಷಕರನ್ನೇ ಕೇಳಿ. ಅವರಿಗೆ ಈ ಉರಿಗೌಡ, ನಂಜೇಗೌಡ ಯಾರು ಎಂದು ಗೊತ್ತಿಲ್ಲ’ ಎಂದರು.

ಅಭ್ಯರ್ಥಿಗಳ ಟಿಕೆಟ್ ಪಟ್ಟಿ ಪ್ರಕಟ ಯಾವಾಗ, ರಮ್ಯಾ ಅವರು ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, ‘ನಾಳೆ ನಾಡಿದ್ದು ಮೊದಲ ಪಟ್ಟಿ ಅಂತಿಮವಾಗಲಿದೆ. ರಮ್ಯಾ ಅವರ ಸ್ಪರ್ಧೆ ವಿಚಾರವನ್ನು ಅವರಿಗೇ ಕೇಳಿ’ ಎಂದರು.

ಡಿ.ಕೆ. ಸುರೇಶ್ ರಾಜ್ಯ ರಾಜಕಾರಣಕ್ಕೆ ಬರುತ್ತಾರಾ ಎಂದು ಕೇಳಿದಾಗ, ‘ಅವರನ್ನು ರಾಮನಗರದಲ್ಲಿ ಕಣಕ್ಕಿಳಿಸಲು ಪಕ್ಷದಲ್ಲಿ ಒತ್ತಡ ಇದೆ. ಆದರೆ ಅವರು ನಾನು ಲೋಕಸಭೆಯಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ಹೀಗಾಗಿ ರಾಮನಗರದಲ್ಲಿ ಸ್ಥಳೀಯರನ್ನೇ ಅಭ್ಯರ್ಥಿ ಮಾಡುತ್ತೇವೆ’ ಎಂದರು.

ಚಿಂಚನಸೂರು ಅವರು ಪಕ್ಷ ಸೇರುತ್ತಾರಾ ಎಂಬ ಪ್ರಶ್ನೆಗೆ, ‘ಅವರು ನನ್ನ ಜತೆ ಮಾತನಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿಯಾಗಲಿದ್ದಾರೆ’ ಎಂದು ತಿಳಿಸಿದರು.

ಚಿಂಚನಸೂರು ಹಾಗೂ ಅವರ ಪತ್ನಿ ಬಂದು ನಾವು ಇದೇ ಪಕ್ಷದಲ್ಲಿ ಇರುತ್ತೇವೆ ಎಂದು ಕಾಲಿಗೆ ಬಿದ್ದಿದ್ದರು ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಚಿಂಚನಸೂರು ಅವರನ್ನು ರಾಜಕೀಯವಾಗಿ ಬೆಳಸಿ ಮಂತ್ರಿ ಮಾಡಿದ್ದು ಕಾಂಗ್ರೆಸ್. ಕೆಲವು ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದಿದ್ದರು. ಈಗ ಅಲ್ಲಿ ರಾಜೀನಾಮೆ ನೀಡಿದ್ದಾರೆ. ಬೇಕಾದಷ್ಟು ಮಂದಿ ನಮ್ಮ ಪಕ್ಷದಿಂದ ಅವರ ಪಕ್ಷಕ್ಕೆ ಹೋಗಿದ್ದಾರೆ. ಅಶೋಕ್, ಯಡಿಯೂರಪ್ಪ ಅವರ ಬಗ್ಗೆ ಯಾರು ಏನೆಲ್ಲಾ ಮಾತನಾಡಿದ್ದರು. ಯಡಿಯೂರಪ್ಪನವರ ಬಗ್ಗೆ ಬಿಜೆಪಿ ನಾಯಕರು ಇತ್ತೀಚೆಗೆ ಏನೆಲ್ಲಾ ಮಾತನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಎ. ಮಂಜು ಅವರು ಏನೆಲ್ಲಾ ಹೇಳಿದ್ದರು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ನಾವು ಯಾರಿಗೂ ಒತ್ತಡ ಹಾಕಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಭವಿಷ್ಯದ ಬೆಳಕು ಕಾಣುತ್ತಿದೆ. ಪುಟ್ಟಣ್ಣ ದಡ್ಡರೇ? ಜೆಡಿಎಸ್ ನಿಂದ ಅನೇಕ ಶಾಸಕರು, ಮಾಜಿ ಶಾಸಕರು, ಹಾಲಿ ಪರಿಷತ್ ಸದಸ್ಯರು ಪಕ್ಷ ಸೇರಿದ್ದಾರೆ. ಅವರು ಕೂಡ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆಲೋಚಿಸಿ ತೀರ್ಮಾನಿಸುತ್ತಿದ್ದಾರೆ’ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button