Kannada NewsKarnataka NewsLatestPolitics

*ನೀರಾ ಕುಡಿದಾಗ ನನಗೆ ಮತ್ತು ಬರಲಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “30-35 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ. ಅದು ಜ್ಯೂಸ್ ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ” ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ ಹರಿಪ್ರಸಾದ್ ಅವರು ಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ ಎಂದು ಪ್ರಶ್ನೆ ಕೇಳಿದರು.

ಈ ಸಂದರ್ಭದಲ್ಲಿ ಸೇಂದಿ, ಸಾರಾಯಿಯನ್ನು ಉಪಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀರಾ ಸೇವನೆ ವಿಚಾರವಾಗಿ ಮಾಡಿದ ಚರ್ಚೆ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, “ಸಾರ್ವಜನಿಕ ಹಿಸಾಸಕ್ತಿಗಾಗಿ ವಿರೇಂದ್ರ ಹೆಗಡೆ ಅವರ ಕಾಲದಲ್ಲಿ ಸೇಂದಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಸೇಂಧಿ ಬದಲಾಗಿ ನೀರಾ ಬಂದಿದ್ದು ನೀರಾ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಬೇಕು. ಈ ಸಮುದಾಯದವರಿಗೆ ಎಂಎಸ್ಐಎಲ್ ನಲ್ಲಿ ಅವಕಾಶ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು.

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ ಎಂದು ಪೂಜಾರಿ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಪೂಜಾರಿ ಅವರು, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ, ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತು.” ಎಂದರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಆಗ ಮಾತನಾಡಿದ ಬಿ.ಕೆ ಹರಿಪ್ರಸಾದ್ ಅವರು ಪೂಜಾರಿ ಅವರಿಗೆ ಕುಡಿಯುವ ಅಭ್ಯಾಸವಿಲ್ಲ. ಕುಡಿಸುವ ಅಭ್ಯಾಸವಿದೆ ಎಂದರು.

ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಪ್ರಕೃತಿ ಮುಂದೆ ಯಾವುದೂ ಇಲ್ಲ. ಸುಮಾರು ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲಿ ನಾನು ನೀರಾ ಕುಡಿದಿದ್ದೆ. ಅದರಿಂದ ಮತ್ತು ಬರುವುದಿಲ್ಲ” ಎಂದು ನೀರಾ ಕುಡಿದ ತಮ್ಮ ಅನುಭವವನ್ನು ಮೆಲಕು ಹಾಕಿದರು.

ಈ ಸದರ್ಭದಲ್ಲಿ ತೇಜಸ್ವಿನಿ ಅವರು ಮಾತನಾಡಿ, “ಶಿವಕುಮಾರ್ ಅವರು ನೀರಾ ನೆನಪು ಎಂಬ ಪುಸ್ತಕ ಬರೆಯಬಹುದು” ಎಂದು ಹೇಳಿದರು.

ನಂತರ ಮಾತು ಮುಂದುವರಿಸಿದ ಶಿವಕುಮಾರ್ ಅವರು, “ಪೂಜಾರಿ ಹಾಗೂ ರವಿ ಕುಮಾರ್ ಅವರು ಈ ಸಮುದಾಯದ ಜನರ ರಕ್ಷಣೆ ಬಗ್ಗೆ ಆಲೋಚಿಸುತ್ತಿದ್ದಾರೆ. ಈಗ ಬೀದಿ ಬದಿಯ ಎಳನೀರನ್ನು 20 ರೂಪಾಯಿಗೆ ಮಾರುತ್ತಾರೆ. ಆದರೆ ಅದನ್ನೇ ಪ್ಯಾಕೆಟ್ ಅಥವಾ ಬಾಟೆಲ್ ನಲ್ಲಿ ಹಾಕಿ ಮಾರಿದರೆ 100 ರೂ. ಕೊಟ್ಟು ಖರೀದಿ ಮಾಡುವ ಜನರೂ ಇದ್ದಾರೆ. ಅದೇ ರೀತಿ ಬಂಡವಾಳ ಹಾಕಿ ನೀರಾ ಉತ್ಪನ್ನವನ್ನು ಮಾಡಿ ಈ ವರ್ಗದ ಜನರಿಗೆ ಎಂಎಸ್ಐಎಲ್ ನಲ್ಲಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದೇ ಸದನದಲ್ಲಿ ಎಂ.ಸಿ ನಾಣಯ್ಯ ಅವರು ಮಾಡಿದ ಭಾಷಣದಿಂದ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಿತು. ಆಗ ಕೋಡೆಸ್, ಮಲ್ಯ ಸೇರಿದಂತೆ ಅನೇಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಅದೇ ರೀತಿ ಇಂದು ನೀವು ಎತ್ತಿರುವ ವಿಚಾರ ಹಾಗೂ ಇದರಿಂದೆ ತೆಗೆದುಕೊಳ್ಳುವ ನಿರ್ಧಾರ ಬದಲಾವಣೆಗೆ ದಾರಿಯಾಗಬಹುದು” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button