Uncategorized

*ಒಕ್ಕಲಿಗ ಪರಿಷತ್ ಆಫ್ ಅಮೇರಿಕಾ 17ನೇ ಸಮ್ಮೇಳನದಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಕ್ಕಲಿಗ ಪರಿಷತ್ ಆಫ್ ಅಮೇರಿಕಾದ 17ನೇ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವರ್ಚುವಲ್ ಮೂಲಕ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇದೊಂದು ಐತಿಹಾಸಿಕ ದಿನ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎಂಬ ಮಾತನ್ನು ಆಗಾಗ್ಗೆ ಹೇಳುತ್ತಿರುತ್ತೇನೆ. ಅದೇ ರೀತಿ ನೀವು 1991ರಿಂದ ಒಕ್ಕಲಿಗ ಸಮುದಾಯದ ಜನ ಅಮೆರಿಕದಲ್ಲಿ ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೀರಿ. ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾದವರಿಗೆ ನಾನು ಅಭಿನಂದಿಸುತ್ತೇನೆ ಎಂದರು.

ನೀವು ನಮ್ಮ ರಾಯಭಾರಿಗಳು. ನಮ್ಮ ನೆಲ ಜಲದ ಬಗ್ಗೆ ತೋರುವ ಪ್ರೀತಿ. ನೀರು, ಗಾಳಿ, ಅಗ್ನಿ, ಸೂರ್ಯ, ಗಿಡ ಮರಗಳಿಗೆ ಜಾತಿ ಇಲ್ಲ. ನಾವು ಹುಟ್ಟು ಹಾಕಿಕೊಂಡಿದ್ದೇವೆ. ಕುವೆಂಪು ಅವರು ಹೇಳಿದ ವಿಶ್ವ ಮಾನವ ತತ್ವವನ್ನು ನಾವು ಎಷ್ಟೇ ಅನುಸರಿಸಿದರು, blood is thicker than water ಎಂಬಂತೆ ಜಾತಿ, ಸಮುದಾಯ ಎಂಬುದು ನಮ್ಮ ವ್ಯವಸ್ಥೆಯಲ್ಲಿ ಸೇರಿಕೊಂಡಿದೆ ಎಂದರು.

ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಮಾಜ, ಮಠ, ಭಾಷೆ, ನೆಲ ಜಲ ಕಾಪಾಡಲು ನಾವು ಶ್ರಮಿಸಿ, ಹೊರ ದೇಶದಲ್ಲಿ ನಮಗೆ ಹೆಸರು ತಂದಿದ್ದೀರಿ. ಕೆಲ ದಿನಗಳಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ಆಗಲಿದೆ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ನೇರವಾಗಿ ಭಾಗವಹಿಸಲು ಆಗಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು, ಅಧಿಕಾರ ಕೊಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಕೆಲಸ ಮಾಡಬೇಕು.

ನನಗೆ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಚೆಲುವರಾಯಸ್ವಾಮಿ ಅವರಿಗೆ ಕೃಷಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ನಗರವನ್ನು ಇಡೀ ವಿಶ್ವ ಗಮನಿಸುತ್ತಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿನ ಬಗ್ಗೆ ಮಾತನಾಡುತ್ತಾ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಬೇರೆ ದೇಶಗಳು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿವೆ ಎಂದು ಬಣ್ಣಿಸಿದ್ದರು.

ಇಲ್ಲಿ ತಯಾರಾದ ವೈದ್ಯರು, ಇಂಜಿನಿಯರ್ ಗಳು ವಿಶ್ವದ ಎಲ್ಲಾ ಜಾಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ನೀವು ನಾವುಗಳು ಒಟ್ಟಾಗಿ ಕೆಲಸ ಮಾಡಬೇಕು.
ನೀವು ನಮ್ಮ ಮೇಲೆ ದೊಡ್ಡ ಮಟ್ಟದ ಪ್ರೀತಿ ಬಾಂಧವ್ಯ ಹೊಂದಿದ್ದೀರಿ. ಬೆಂಗಳೂರು ನಗರವನ್ನು ಗ್ಲೋಬಲ್ ಬೆಂಗಳೂರು ಆಗಿ ಪರಿವರ್ತಿಸಲು, ಕರ್ನಾಟಕ ರಾಜ್ಯ ಹಾಗೂ ಬೆಂಗಳೂರು ಹಿರಿಮೆ ಮರುಸ್ಥಾಪಿಸಬೇಕು.

ಇದಕ್ಕಾಗಿ ನಾವು ಸಾರ್ವಜನಿಕರ ಸಲಹೆ ಕೇಳುತ್ತಿದ್ದ, ನೀವುಗಳು ಕೂಡ ನಿಮ್ಮ ಸಲಹೆಗಳನ್ನು ನೀಡಬೇಕು. ನಮ್ಮ ಇತಿಹಾಸ ಮರೆಯಬಾರದು. ನಾವು ಬೆಂಗಳೂರಿನ ವಿಚಾರದಲ್ಲಿ ಮೂವರನ್ನು ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಐಟಿ ಬಿಟಿ ನಗರ ಮಾಡಿದ ಎಸ್.ಎಂ ಕೃಷ್ಣ ಅವರನ್ನು ಸದಾ ಸ್ಮರಿಸಬೇಕು. ನಾವು ವ್ಯವಸಾಯ ಸಮುದಾಯ. ನಮಗೆ ಭೂಮಿ ಮಕ್ಕಳು ಎಂಬ ಹೆಸರು ಸಿಕ್ಕಿದೆ. ನಾವು ಎಲ್ಲಾ ಸಮುದಾಯದ ಜೊತೆ ಸಾಮರಸ್ಯದಿಂದ ಬದುಕುತ್ತೇವೆ.

ನನಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇತ್ತು. ನೀವು ಎಲ್ಲೇ ಇದ್ದರೂ ನಮ್ಮವರು. ನಿಮಗೆ ಯಾವುದೇ ಸಹಕಾರ ಬೇಕಾದರೂ ನಾವು ಇದ್ದೇವೆ. ನಮ್ಮ ಪಕ್ಷದಲ್ಲಿ NRI ಘಟಕ ಸ್ಥಾಪಿಸಲು ಚರ್ಚೆ ಮಾಡುತ್ತಿದ್ದೇವೆ. ನೀವು ಮತ್ತೆ ನಿಮ್ಮ ಊರುಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದರೆ ನಿಮಗೆ ನೆರವು ನೀಡುತ್ತೇವೆ.

ದೇವರು ನಮಗೆ ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಿಮಗೆ ಅವಕಾಶ ಸಿಕ್ಕಾಗ ನಿಮ್ಮ ಊರು, ಸಮಾಜ, ಮನೆ, ಕುಟುಂಬವನ್ನು ಮರೆಯಬೇಡಿ. ನನಗೆ ಉನ್ನತ ಸ್ಥಾನಮಾನ ಸಿಗಬೇಕು ಎಂದು ನಿಮ್ಮಲ್ಲಿ ಅನೇಕರು ನಿರೀಕ್ಷೆ ಮಾಡಿದ್ದೀರಿ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮಗೆ ಸಿಕ್ಕಿರುವ ಅಧಿಕಾರದಲ್ಲಿ ತೃಪ್ತಿಪಟ್ಟು ಕೆಲಸ ಮಾಡಬೇಕಿದೆ.

ಮುಂದಿನ ಬಾರಿ ಅಮೆರಿಕ ಒಕ್ಕಲಿಗರ ಪರಿಷತ್ ಕಾರ್ಯಕ್ರಮಕ್ಕೆ ಬಂದು ಭಾಗವಹಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ ಎಂದು ಶುಭಕೋರುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳು, ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೂಡ ವರ್ಚುವಲ್ ಮೂಲಕ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button