*ರಾಜಕೀಯ ಎಂಬುದು ಚೆಸ್ ಗೇಮ್ ಎಂದು ಅಶೋಕ್ ಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್; ಪದ್ಮನಾಭನಗರ ಕೈ ಅಭ್ಯರ್ಥಿ ಬಗ್ಗೆಯೂ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ಕ್ಷೇತ್ರಗಳಿಂದ ಸಚಿವ ಆರ್.ಅಶೋಕ್ ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಬಿಜೆಪಿ ಯತ್ನ ನಡೆಸಿರುವ ವಿಚಾರವಾಗಿ ಖಡಕ್ ಪ್ರತಿಕ್ರಿಯೆ ಕೊಟ್ಟಿರುವ ಡಿ.ಕೆ.ಶಿವಕುಮಾರ್, ರಾಜಕೀಯ ಎನ್ನುವುದು ಚೆಸ್ ಗೇಮ್ ಇದ್ದಂತೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ, ರಾಜಕೀಯ ಎನ್ನುವುದು ಫುಟ್ಬಾಲ್ ಅಲ್ಲ, ಚೆಸ್ ಗೇಮ್ ಇದ್ದಂತೆ. ಆಟ ಆಡ್ತಿದ್ದಾರೆ, ಆಡಲಿ ಬಿಡಿ. ನನಗೆ ಹೋರಾಟ ಹೊಸದೇನೂ ಅಲ್ಲ, ಇಡೀ ಜೀವನ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಆರ್.ಅಶೋಕ್ ವಿರುದ್ಧ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಕಣಕ್ಕಿಳಿಯುವ ವಿಚಾರವಾಗಿ ಮಾತನಾಡಿದ ಅವರು, ಪದ್ಮನಾಭನಗರದಿಂದ ಡಿ.ಕೆ.ಸುರೇಶ್ ಸ್ಪರ್ಧೆಗೆ ಒತ್ತಡವಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಲ್ಲ. ಈಗಾಗಲೇ ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ಕಾಮ್ಗ್ರೆಸ್ ನಿಂದ ರಘುನಾಥ್ ನಾಯ್ಡು ಸ್ಪರ್ಧಿಸುತ್ತಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡುವುದಿಲ್ಲ. ಈ ಬಾರಿ ಪದ್ಮನಾಭನಗರದಲ್ಲಿಯೂ ಅಶೋಕ್ ಸೋಲುತ್ತಾರೆ ಎಂದು ತಿಳಿಸಿದರು.