Politics

*ದಾಖಲೆ ಬಿಡುಗಡೆ ಮಾಡಬೇಡಿ ಎಂದು ಕುಮಾರಸ್ವಾಮಿ ಅವರನ್ನು ಹಿಡಿದುಕೊಂಡವರು ಯಾರು? ಡಿಸಿಎಂ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: “ಕುಮಾರಸ್ವಾಮಿಯವರಿಗೆ ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡವರು ಯಾರು?” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಕಾಂಗ್ರೆಸ್ ಸರ್ಕಾರದ ಏಳು ಜನ ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ದಾಖಲೆಗಳನ್ನು ಬಿಡುಗಡೆ ಮಾಡಲು ಬೇಡ ಎಂದವರು ಯಾರು?” ಎಂದರು.

ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಉತ್ತರಿಸಿದ್ದು ಹೀಗೆ.

ಬಿಜೆಪಿ- ದಳ ಎರಡು ಒಂದೇ

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಕುಮಾರಸ್ವಾಮಿಯವರು ಮೌನವಾಗಿದ್ದಾರೆ ಎಂದು ಕೇಳಿದಾಗ, “ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಪಕ್ಷ ಸಿದ್ದರಾಮಯ್ಯ ಅವರ ಬೆಂಬಲಕ್ಕಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಮಗೆ ಬಿಜೆಪಿ ಮತ್ತು ದಳ ಎರಡೂ ಒಂದೇ” ಎಂದರು.

ಕನಕಪುರದ ಮೆಡಿಕಲ್ ಕಾಲೇಜು ವಿಚಾರವಾಗಿ ಸರ್ಕಾರ ಸೂಕ್ತ ತಯಾರಿ ಮಾಡಿಕೊಳ್ಳಲಿಲ್ಲವೇ ಎಂದು ಕೇಳಿದಾಗ, ಈ ಕುರಿತು ನಾನು ಪ್ರತ್ಯೇಕ ಸಭೆ ಮಾಡಿದ್ದೇನೆ. ಹಾಸಿಗೆ ಕೊರತೆಯನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ. ವಸತಿ ಇಲಾಖೆಯಿಂದ ಜಾಗ ಸ್ಥಳಾಂತರವಾಗಬೇಕು. ರಾಮನಗರದಲ್ಲಿಯೂ ಕೆಲಸ ನಡೆಯುತ್ತಿದೆ. ಕನಕಪುರದಲ್ಲಿಯೂ ಆಗುತ್ತದೆ” ಎಂದರು.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳಿದಾಗ, ” ಸಿಬ್ಬಂದಿ ಕೊರತೆ ಸೇರಿದಂತೆ ಒಂದಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಈಗಾಗಲೇ ಸಭೆ ನಡೆಸಲಾಗಿದೆ. ರೈತರ ಭೂಮಿ ಪರಿಹಾರ ವಿಚಾರವಾಗಿ ಸಮಸ್ಯೆಗಳಿದ್ದು ಅವರ ಬಳಿ ಚರ್ಚೆ ನಡೆಸಲಾಗಿದೆ” ಎಂದರು.

ಬೆಂಗಳೂರು ದಕ್ಷಿಣ ಎಂದು ಯಾವಾಗ ನಾಮಕರಣವಾಗುತ್ತದೆ ಎಂದಾಗ, “ಸಮಯ ಬಂದಾಗ ಇದರ ಬಗ್ಗೆ ತಿಳಿಸುತ್ತೇನೆ” ಎಂದರು.

ಜನ ಯಾವುದಕ್ಕೆ ಸದಸ್ಯರಾಗುತ್ತಾರೆ

ಕನಕಪುರದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನದ ಬಗ್ಗೆ ಕೇಳಿದಾಗ, “ಅವರ ಕೆಲಸ ಅವರು ಮಾಡಲಿ. ಜನರು ಬಿಜೆಪಿ ಅಥವಾ ಜೆಡಿಎಸ್ ಯಾವುದಕ್ಕೆ ಸದಸ್ಯರಾಗುತ್ತಾರೆ? ಅವರ ಸದಸ್ಯತ್ವ ಅಭಿಯಾನವನ್ನು ನಾವು ಬೇಡ ಎನ್ನಲು ಆಗುತ್ತದೆಯೇ? ಅವರ ಪಕ್ಷವನ್ನು ಅವರು ಬಿಗಿ ಮಾಡಿಕೊಳ್ಳಲಿ. ನಾವು ಮಾಡಿದಂತೆ ಅವರು ಮಾಡುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಯಾರು ಗೌಪ್ಯವಾಗಿರುತ್ತಾರೆ ಅವರು ಹೊರಗೆ ಬರುತ್ತಾರೆ” ಎಂದು ಹೇಳಿದರು.

ರಾಜ್ಯದ ಸೇವೆ ಮಾಡಲು ಪ್ರಯತ್ನ ಮತ್ತು ಹೋರಾಟ ನಡೆಯುತ್ತಿದೆ ಎಂದು ಕನಕಪುರದಲ್ಲಿ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ ” ನಾನು ಈ ಈ ಅರ್ಥದಲ್ಲಿ ಮಾತನಾಡಲಿಲ್ಲ. ಜನರು ಸೇವೆ ಮಾಡಲು ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ನೀವು (ಮಾಧ್ಯಮದವರು) ಹೊಸ ಅರ್ಥವನ್ನು ಸೃಷ್ಟಿ ಮಾಡಿದ್ದೀರಿ. ಈ ರೀತಿ ಹೇಳಿಕೆ ನೀಡಿದ್ದರೆ ದಾಖಲೆ ಕೊಡಿ” ಎಂದರು.

ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ತಿಳಿದು ಮಾತನಾಡುತ್ತೇನೆ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button