
ಪ್ರಗತಿವಾಹಿನಿ ಸುದ್ದಿ, ಪಿರಿಯಾಪಟ್ಟಣ: ರಾಜ್ಯಾದ್ಯಂತ ಶೈಕ್ಷಣಿಕ ರಜಾಕಾಲದ ಅವಧಿ ಮುಗಿದು ಶಾಲೆಗಳ ಪುನಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಮಕ್ಕಳ ಸ್ವಾಗತಕ್ಕೆ ಶಾಲೆಗಳನ್ನು ಸಜ್ಜುಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ. ಆದರೆ ಬಸಲಾಪುರ ಶಾಲೆಯೊಂದರಲ್ಲಿ ನಡೆದ ಘಟನೆ ಎಲ್ಲೆಡೆ ಎಚ್ಚರಿಕೆ ಸಂದೇಶ ಕಳುಹಿಸಿದೆ.

ಬಸಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಚಿ ಮಾಡುವ ಸಂದರ್ಭದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಕಬ್ಬಿಣದ ಕಪಾಟಿನೊಳಗೆ ತಳಕಿ ಹಾಕಿಕೊಂಡು ಕುಳಿತು ಹೆಡೆ ಬಿಚ್ಚಿ ಭುಸುಗುಟ್ಟಿದ ನಾಗಪ್ಪನನ್ನು ಕಂಡು ಸ್ವಚ್ಛತೆಯಲ್ಲಿ ತೊಡಗಿದವರು ಹೌಹಾರಿದ್ದಾರೆ. ಹಾವಿನ ಪರಿವೆ ಇಲ್ಲದೆ ಅಜಾಗರೂಕತೆಯಿಂದ ಏನಾದರೂ ಕೈ ಹಾಕಿದ್ದರೆ ಅನಾಹುತಕ್ಕೆ ಕಾರಣವಾಗಲಿತ್ತು. ಕೊನೆಗೆ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ.
ರಾಜ್ಯದ ಎಲ್ಲ ಶಾಲೆಗಳಲ್ಲಿ ಜಾಗರೂಕತೆಯಿಂದ ಶುಚಿ ಮಾಡಲು ಗಮನಹರಿಸುವಂತೆ ಶಿಕ್ಷಣ ಇಲಾಖೆ ಸಂದೇಶ ನೀಡಿದೆ.