
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ಮತ್ತೆ ಮುಂದೂಡಿದೆ.
ಕೊಲೆ ಕೇಸ್ ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸೌಲಭ್ಯ, ರಾಜಾತಿಥ್ಯವಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ. ಆರೋಪಿಗಳು, ಕೈದಿಗಳಿಗೆ ಯಾವುದೇ ರಾಜಾತಿಥ್ಯ, ಸೌಲಭ್ಯಗಳನ್ನು ನೀಡುವಂತಿಲ್ಲ.
ಬೆನ್ನು ನೋವಿನ ಸಮಸ್ಯೆಯಿರುವ ನಟ ದರ್ಶನ್ ಜೈಲಿನಲ್ಲಿ ಹಾಸಿಗೆ, ದಿಂಬು ಸೇರಿದಂತೆ ಕೆಲ ಸೌಲಭ್ಯ ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಹಾಸಿಗೆ, ತಲೆದಿಂಬು ಒದಗಿಸುವಂತೆ ಜೈಲಧಿಕಾರಿಗಳಿಗೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶ ನೀಡಿ ಹಲವು ದಿನಗಳು ಕಳೆದರೂ ದರ್ಶನ್ ಗೆ ಯಾವುದೇ ಹಾಸಿಗೆ, ತಲೆದಿಂಬುಗಳನ್ನು ಜೈಲಾಧಿಕಾರಿಗಳು ಒದಗಿಸಿಲ್ಲ. ಇದರಿಂದ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ. ತನಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ದೂರಿದ್ದಾರೆ.
ದರ್ಶನ್ ಅರ್ಜಿ ಕೈಗೆತ್ತಿಕೊಂಡಿರುವ ಬೆಂಗಳೂರಿನ ೫೭ನೇ ಸಿಸಿಹೆಚ್ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 22 ಕ್ಕೆ ಮುಂದೂಡಿದೆ.