Latest

ನನ್ನ ಪುಟ್ಟ ಲೈಬ್ರರಿ

-ನೀತಾ ರಾವ್
ಓದುವುದೂ ಒಂದು ಹುಚ್ಚೇ ಸರಿ. ಈ ಹುಚ್ಚನ್ನು ಹಚ್ಚುವ ಕೆಲಸ ಮಾಡುವ ಕೈಂಕರ್ಯದಲ್ಲಿ ತೊಡಗಿರುವವರೂ ಅನೇಕ. ನಮ್ಮ ಮನೆಯಲ್ಲಿ ಅಮ್ಮ ತನಗಿದ್ದ ಓದಿನ ಹುಚ್ಚನ್ನು ನಮಗೆ ವರ್ಗಾಯಿಸಿದಳು. ಎರಡನೇ ತರಗತಿಯಲ್ಲಿರುವಾಗಲೇ ಸಂಪೂರ್ಣ ರಾಮಾಯಣ ಎಂಬ ಪುಸ್ತಕವೊಂದು ನನಗೆ ಮತ್ತು ನನ್ನಕ್ಕನಿಗೆ ಸಿಕ್ಕಿಬಿಟ್ಟಿತು. ಒಮ್ಮೆ ಓದಿ ಅದರ ಹುಚ್ಚಿಗೆ ಬಿದ್ದ ನಾವು ಅದನ್ನು ಮತ್ತೆ ಮತ್ತೆ ಓದಿದೆವು, ಅಂದರೆ ರಾಮಾಯಣದ ಪಾರಾಯಣವನ್ನೇ ಮಾಡಿದೆವು. ಅದರಲ್ಲಿನ ಕೆಲವು ಚಿತ್ರಗಳಂತೂ ಇನ್ನೂ ಮನದಲ್ಲುಳಿದಿವೆ. ಹಾಗೆ ಪ್ರಾರಂಭವಾಯಿತು ನಮ್ಮ ಓದಿನ ಹುಚ್ಚು. ಅದು ಉಲ್ಭಣಗೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ತಂದೆ, ತಾಯಿ, ಚಿಕ್ಕಮ್ಮ ಇವರೆಲ್ಲರೂ ತಮ್ಮ ತಮ್ಮ ಯೋಗದಾನ ನೀಡಿ, ಪಾತ್ರ ನಿರ್ವಹಿಸಿದರು. ಅಕ್ಕನಿಗೆ ಸಿಟ್ಟು ಬಂದಾಗಲೊಮ್ಮೆ ಅವಳನ್ನು ರಮಿಸಲು ಪುಸ್ತಕಗಳ ಬಳಕೆಯಾಗುತ್ತಿತ್ತು. ಒಮ್ಮೆ ಅಪ್ಪ ಅವಳನ್ನು ಕರೆದುಕೊಂಡು ಹೋಗಿ ಶೇಕ್ಸ್‌ಪಿಯರ್ ನ ಹತ್ತು ನಾಟಕಗಳ ಕನ್ನಡಾನುವಾದದ ಪುಸ್ತಕಗಳನ್ನು ಕೊಡಿಸಿಕೊಂಡು ಬಂದರು. ಅಂದಿನಿಂದ ಚಾಲೂ ಆಯ್ತು ನೋಡಿ ನಮ್ಮ ಹೊಸ ಬಗೆಯ ಓದಿನ ಹುಚ್ಚಾಟ. ನಮಗೆ ಸ್ವಲ್ಪವೂ ಗೊತ್ತಿರದ ಡೆನ್ಮಾರ್ಕ್, ವೇನಿಸ್, ಇಂಗ್ಲೆಂಡ್ ಮುಂತಾದ ಪ್ರದೇಶಗಳ ಡ್ಯೂಕರು, ರಾಜರು, ರಾಜಕುಮಾರರ ಕಥೆಗಳು ರೋಚಕವೆನಿಸಿದವು, ಅಚ್ಚರಿ ಹುಟ್ಟಿಸಿದವು. ಹೆಸರುಗಳು, ಅವುಗಳ ಉಚ್ಚರಣೆ ಬೆರಗು ಮೂಡಿಸಿದವು. ಅದಕ್ಕೆ ಪೂರಕವಾಗಿ ಅಪ್ಪ ಆಗೀಗ ಸುಮ್ಮಸುಮ್ನೆ ಲೇಡಿ ಮ್ಯಾಕಬೆತ್, ಡೆಸ್ಡಿಮೋನಾ, ಗನಿಮೀಡ್, ಎಂದೆಲ್ಲಾ ಅನ್ನುತ್ತಿದ್ದರು. ಚಿಕ್ಕವರಿರುವಾಗ ಇವುಗಳನ್ನು ಓದಿದರೂ ದೊಡ್ಡವರಾದ ಮೇಲೆ ಮೂಲ ನಾಟಕಗಳನ್ನೇ ಓದಬೇಕು ಎನ್ನುತ್ತಿದ್ದರು.
ಇನ್ನು ಚಿಕ್ಕಮ್ಮ ಬೇರೆ ಊರುಗಳಿಗೆ ಹೋದಾಗಲೆಲ್ಲ ಭಾರತ- ಭಾರತಿ ಪುಸ್ತಕಗಳನ್ನು, ಮತ್ತಿತರ ಪುಸ್ತಕಗಳನ್ನು ತಂದುಕೊಡುತ್ತಿದ್ದಳು. ಅಕ್ಕ ಯಾವುದೇ ಗಾಯನದ ಸ್ಪರ್ಧೆಗೆ ಹೋದರೂ  ಗೆದ್ದು ಬಹುಮಾನ ತರುವುದು ಪುಸ್ತಕಗಳನ್ನೇ ಆಗಿತ್ತು. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಜನಕ ಮಹಾರಾಜ, ಯಾಜ್ಞವಲ್ಕ್ಯ ರು, ಮುಂತಾದ ಹತ್ತು ಹಲವಾರು ಶ್ರೇಷ್ಠರ ಪುಟ್ಟ ಪುಟ್ಟ ಪುಸ್ತಕಗಳೆಲ್ಲ ನಾಲ್ಕಾಣೆಗೋ ಎಂಟಾಣೆಗೋ ಸಿಗುತ್ತಿದ್ದ ಕಾಲದಲ್ಲಿ ನಮ್ಮ ಮನೆಯಲ್ಲಿ ನಾನಾ ರೀತಿಯಿಂದ, ನಾನಾ ವ್ಯಕ್ತಿ ಮತ್ತು ವ್ಯವಸ್ಥೆಯ ಮೂಲಕ ಬಂದು ತಲುಪಿ ಸಂಗ್ರಹಗೊಂಡ ಸುಮಾರು ಪುಸ್ತಕಗಳಾದ ಮೇಲೆ ಗೆಳತಿಯರಿಗೂ ಆಗೊಮ್ಮೆ ಈಗೊಮ್ಮೆ ಅವುಗಳ ಮೇಲೆ ಕಣ್ಣು ಹರಿದು, ಮೆಲ್ಲಗೆ ಅವುಗಳ ಮುಖಪುಟಗಳನ್ನು ಸ್ಪರ್ಶಿಸಿ ಆನಂದಿಸಿದ ಮೇಲೆ ಒಳಪುಟಗಳ ರಹಸ್ಯವನ್ನೂ ಭೇದಿಸಿಬಿಡಬೇಕೆಂಬ  ತತ್-ಕ್ಷಣದ ಬಯಕೆ ಭುಗಿಲೆದ್ದು “ಏ ಇದೊಂದು ಪುಸ್ತಕ ಕೊಡು, ಓದಿ ಕೊಟ್ಟುಬಿಡ್ತೇನಿ” ಎಂದು ತೆಗೆದುಕೊಂಡು ಹೋಗುವವರು. ನಂತರ ವಾರವಾದರೂ ಅವರಿಂದ ಸುದ್ದಿಯಿರುತ್ತಿರಲಿಲ್ಲ. ಓದುವುದೂ ಮರೆತಂತೆ ಮರಳಿ ಕೊಡುವುದನ್ನೂ ಮರೆತುಬಿಡುವವರು.
ಆದರೂ ಎಲ್ಲರೂ ಓದಲಿ ಅಂತ ನಮ್ಮದೂ ದುರಾಸೆಯ ದೂರಾಸೆ. ಸರಿ ಅದಕ್ಕೊಂದು ಪ್ಲ್ಯಾನ್ ಸಿದ್ಧವಾಯ್ತು. ಎಲ್ಲ ಪುಸ್ತಕಗಳನ್ನೂ ಒಟ್ಟುಹಾಕಿಕೊಂಡು ಒಂದು ನೋಟಬುಕ್ಕಿನಲ್ಲಿ ಒಂದೊಂದು ಪುಟಕ್ಕೆ ಒಂದರಂತೆ ಎಲ್ಲವುಗಳ ಹೆಸರು ಬರೆದಿದ್ದಾಯ್ತು. ಇನ್ನು ಯಾರಿಗೆ ಕೊಡಬೇಕಾದರೂ ಆ ಪುಸ್ತಕದ ಫೋಲಿಯೋದೊಳಗೆ ಅವರ ಹೆಸರು, ತೆಗೆದುಕೊಂಡ ದಿನಾಂಕ ನಮೂದಿಸಿಯೇ ಪುಸ್ತಕವನ್ನು ಎರವಲು ಕೊಡುವುದು ಅಂತ ತೀರ್ಮಾನವಾಯ್ತು. ಅಲ್ಲಿಗೆ ವಿಧ್ಯುಕ್ತವಾಗಿ ನಮ್ಮದೊಂದು ಪುಟ್ಟ ಪರ್ಸನಲ್ ಲೈಬ್ರರಿ ಅಂತ ಅಸ್ತಿತ್ವಕ್ಕೆ ಬಂತು. ಬಹುಶಃ ಅದೇ ನನ್ನ ಮೊದಲ ಕಮರ್ಷಿಯಲ್ ಕಮ್ ಸೋಶಿಯಲ್ ಪ್ರಾಜೆಕ್ಟ್. ನಮ್ಮ ಗೆಳತಿಯರು ಹೆಸರು ಬರೆಸಿ ಪುಸ್ತಕ ತೆಗೆದುಕೊಂಡು ಹೋಗುವುದು, ಮತ್ತು ಓದಿ ಎಂಟೋ ಹತ್ತೋ ದಿನಗಳಲ್ಲಿ ವಾಪಸ್ ಕೊಡುವುದು, ಈ ಒಪ್ಪಂದದ ಮೇರೆಗೆ ಈ ಹೆಸರಿಲ್ಲದ ಪುಟ್ಟ ಲೈಬ್ರರಿ ಶುರುವಾಯ್ತು. ಒಂದಷ್ಟು ದಿನಗಳು ನಾನೂ ಉತ್ಸಾಹದಿಂದ ಬರೆಬರೆದು ಪುಸ್ತಕಗಳನ್ನು ಎರವಲು ಕೊಟ್ಟೆ. ಗೆಳತಿಯರೂ ಅಷ್ಟೇ ಹುರುಪಿನಿಂದ ತೆಗೆದುಕೊಂಡು ಹೋಗಿ ಮತ್ತೆ ಮರಳಿಸಿದರು. ಆದರೆ ಸ್ವಲ್ಪ ದಿನಗಳಲ್ಲಿ ಅವರ ಬೇಸರ ಮರಳಿ ಬಾರದ ಪುಸ್ತಕಗಳ ರೂಪದಲ್ಲಿ ವ್ಯಕ್ತವಾಯ್ತು. ನಮ್ಮ ಕೆಲವು ಪುಸ್ತಕಗಳು ನಮಗೆ ವಿದಾಯವನ್ನೂ ಹೇಳದೆ ಕಳೆದುಹೋದವು. ನನ್ನ ಅಮಿತೋತ್ಸಾಹವೂ ಕುಂಟು ನೆಪ ಹೇಳಿ ಓಡಿಹೋಯಿತು. ಮಕ್ಕಳಿಗಾಗಿ ಹೀಗೆ ತೆರೆದ ಜ್ಞಾನದ ಬಾಗಿಲು ಹಾಗೆ ಮುಚ್ಚಿಹೋಯ್ತು. ಶೆಕ್ಸಪಿಯರ್ ತನ್ನ ನಾಟಕಗಳ ಕನ್ನಡಾನುವಾದಗಳು ಕಳೆದುಹೋದವೆಂದು ದುಃಖಿಸಿರಬೇಕು. ಅಥವಾ ಉಳಿದವರೂ ಓದಿದರೆಂದು ಸಂತಸ ಪಟ್ಟನೋ! ರಾಮಾಯಣದ ಸೀತೆ ಮತ್ತೊಮ್ಮೆ ನಮ್ಮ ಮನೆಯಿಂದ ಕಳೆದುಹೋದಳು. ಮಹಾಭಾರತದ ಯುದ್ಧ ಯಾರ ಮನೆಯಲ್ಲಿ ಶುರುವಾಯ್ತೋ, ಯಾವಾಗ ಮುಗಿಯಿತೋ ನಮಗಂತೂ ಗೊತ್ತಾಗಲಿಲ್ಲ. ಅಂತೂ ಹೀಗೆ ನನ್ನ ಪುಟ್ಟ ಲೈಬ್ರರಿ ಇತಿಹಾಸದ ಪುಟಗಳಲ್ಲಿ ಸೇರಿಹೋಯ್ತು.
      ನಂತರದ ದಿನಗಳಲ್ಲಿ ನಾವು ನಮ್ಮ  ಪುಟ್ಟ ಲೈಬ್ರರಿಯ ಸಹವಾಸವನ್ನು ತೊರೆದು ಅದಾಗ ತಾನೇ ಮಾರುತಿ ಗಲ್ಲಿಯಲ್ಲಿ (ಬೆಳಗಾವಿಯಲ್ಲಿ) ಪ್ರಾರಂಭವಾಗಿದ್ದ ನಗರ ಕೇಂದ್ರ ಗ್ರಂಥಾಲಯಕ್ಕೆ ಸದಸ್ಯರಾಗಿ ಅಲ್ಲಿನ ಪುಸ್ತಕಗಳನ್ನು ಓದತೊಡಗಿದೆವು. ಟಿ.ವಿ. ಮೊಬೈಲ್ ಮುಂತಾದ ವಿದ್ಯನ್ಮಾನ ದೃಶ್ಯವೈಭವದ ಹಾವಳಿಯಿರದ ಆ ಕಾಲದಲ್ಲಿ ನಾವು ಕಾಣದ ಕಲ್ಪನಾಲೋಕದ ಹೊಸಬಾಗಿಲು ತೆರೆದದ್ದು ಈ ಲೈಬ್ರರಿಯಲ್ಲಿದ್ದ ಕಾದಂಬರಿಗಳು. ಉಷಾ ನವರತ್ನರಾಮ್, ಸಾಯಿಸುತೆ, ಎಚ್.ಜಿ.ರಾಧಾದೇವಿ ಮುಂತಾದವರಂತೂ ಸುಂದರವಾದೊಂದು ಭ್ರಮಾ ಲೋಕವನ್ನು ಸೃಷ್ಟಿಸಿ ಪ್ರೇಮಿ ಮತ್ತು ಗಂಡನೆಂದರೆ ಸಕಲ ಸದ್ಗುಣಗಳ ಸರದಾರ, ಪ್ರೇಮವೊಂದನ್ನೇ ಉಸಿರಾಡುವ, ಅದರಿಂದಲೇ ಜೀವನವೆಲ್ಲಾ ಸುಖವಾಗಿಡುವ ಅಮರಪ್ರೇಮಿ ಎನ್ನುವ ಸುಳ್ಳುಗಳನ್ನು ನನ್ನಂಥ ಅನೇಕ ಮೂರ್ಖ ಯುವತಿಯರ ಮನದಲ್ಲಿ ತುಂಬಿಬಿಟ್ಟರು. ಕಟುವಾಸ್ತವದ ಅರಿವೇ ಇಲ್ಲದ, ಕಾದಂಬರಿಗಳನ್ನೋದಿ ಕನಸು ಕಾಣುತ್ತಿದ್ದ ನಮ್ಮಂಥ ಓದಿಕೆಟ್ಟ ಹುಡುಗಿಯರು ಇವತ್ತಿಗೂ ಹೀಗೆ ತಪ್ಪುಕಲ್ಪನೆಗಳನ್ನು ತುರುಕಿದ ಆ ಲೇಖಕಿಯರನ್ನು ಬೈದು ಮನದ ನಿರಾಸೆಯನ್ನು ಹೊರಹಾಕುತ್ತೇವೆ. ಮತ್ತೆ ಕೆಲವೊಮ್ಮೆ ಇರಲಿ ಬಿಡು, ಅವರ ದೆಸೆಯಿಂದ ಸುಂದರ ಕಲ್ಪನೆಗಳನ್ನಾದರೂ ಮಾಡಿಕೊಂಡು ಸುಖಿಸಿದೆವು! ಅಂತ ಕ್ಷಮಿಸಿಯೂ ಬಿಟ್ಟಿದ್ದೇವೆ. ನಂತರದ ದಿನಗಳಲ್ಲಿ ತ್ರಿವೇಣಿ, ಎಂ.ಕೆ. ಇಂದಿರಾ ನಮಗೆ ಪ್ರಿಯವಾದರು.
ಈಗ ಓದುವ ಅಭಿರುಚಿ ಬದಲಾಗಿದೆ, ಪುಸ್ತಕಗಳ ಆಯ್ಕೆಯೂ ಸಂಪೂರ್ಣ ಬದಲಾಗಿದೆ. ಗಂಭೀರವಾದ ಕಾದಂಬರಿಗಳು, ವಾಸ್ತವದ ಬದುಕನ್ನು, ನೋವು-ನಲಿವುಗಳನ್ನು ಕಟ್ಟಿಕೊಡುವ ಸಣ್ಣಕತೆಗಳು ಹೆಚ್ಚು ಪ್ರಿಯವಾಗಿವೆ. ಕತೆಗಳಿಗಿಂತ ರೋಮಾಂಚಕವಾಗಿರುವ, ವಿಕ್ಷಿಪ್ತವಾಗಿರುವ, ವೇದನಾಪೂರ್ಣವಾಗಿರುವ ಆತ್ಮಚರಿತ್ರೆಗಳು ಹೆಚ್ಚು ಹೆಚ್ಚು ಆಪ್ತವಾಗಿವೆ. ಮತ್ತೆ ಆಗೀಗ ಪುಸ್ತಕಗಳನ್ನು ಕೊಂಡು, ಬೆಂಗಳೂರಿಗೆ ಹೋದಾಗೊಮ್ಮೆ ಸಪ್ನಾ ಬುಕ್ ಸ್ಟಾಲಿಗೆ ಭೇಟಿ ನೀಡಿ, ಆನ್ ಲೈನ್ ಖರೀದಿ ಮಾಡಿ ಹೀಗೆ ಮತ್ತೊಂದು ಪುಟ್ಟ ಲೈಬ್ರರಿ ತಯಾರಾದ ಮೇಲೆ ಮತ್ತೊಮ್ಮೆ ಈ ಪುಸ್ತಕಗಳ ಕಡ ಕೊಡುವ ಕಾರ್ಯ ಸುರುವಾಗಿದೆ. ನಾವಿರುವ ದೊಡ್ಡ ಅಪಾರ್ಟಮೆಂಟಿನಲ್ಲಿ ಗೆಳತಿಯರು ಬಿದ್ದು ಕಾಲು ಮುರಿದುಕೊಂಡಾಗ ಹೊತ್ತು ಕಳೆಯಲು ಅವರಿಗೆ ನನ್ನ ಮನೆಯ ಪುಟ್ಟ ಲೈಬ್ರರಿ ನೆನಪಾಗಲು ಶುರುವಾಯ್ತು. ಆಗೀಗ ಹೊರಗಿನಿಂದ ಬರುವ ಗೆಳತಿಯರೂ ಹಾಲಿನಲ್ಲೇ ಇರುವ ಓಪನ್ ಬುಕ್ ಶೆಲ್ಫ ನೋಡಿದ ತಕ್ಷಣ ಒಂದೆರಡು ನಿಮಿಷ ಹತ್ತಿರ ಹೋಗಿ ನಿಲ್ಲುತ್ತಾರೆ. ಕೈಯಿಂದ ಪುಸ್ತಕಗಳನ್ನೊಮ್ಮೆ ಸವರುತ್ತಾರೆ. “ಅಡ್ಡಿಯಿಲ್ಲ, ಒಳ್ಳೆಯ ಸಂಗ್ರಹ” ಎನ್ನುತ್ತಾರೆ. ಕೊನೆಗೆ “ಇದೊಂದು ಪುಸ್ತಕ ಒಯ್ಯಲೇ? ಬೇಗ ಮರಳಿ ಕೊಡುತ್ತೇನೆ” ಎಂದು ಪ್ರಾಮಿಸ್ ಮಾಡುತ್ತಾರೆ. ನಾನೀಗ ಎಲ್ಲ ಪುಸ್ತಕಗಳ ಮೇಲೆ ನನ್ನ ಹೆಸರು ಬರೆದಿಡುತ್ತೇನೆ. ಒಯ್ದವರು ಅದರೊಳಗಡೆಯ ಪುಟ ತಿರುವಿದಾಗ ಇದು ನನ್ನದು ಎಂದು ಅವರಿಗೆ ನೆನಪಾಗಲಿ ಎಂಬ ಉದ್ದೇಶ. ಮುನ್ನೂರು, ನಾಲ್ಕುನೂರು ರೂಪಾಯಿಗಳ ಬೆಲೆಯ ಪುಸ್ತಕಗಳನ್ನು ಕೊಂಡುತಂದಾಗ ಅವುಗಳು ಕಳೆಯದಂತೆ ಜೋಪಾನವಾಗಿಟ್ಟುಕೊಳ್ಳಬೇಕೆಂಬ ಎಚ್ಚರ ಸಹಜವಾಗಿ ಬರುತ್ತದೆ. ಆದರೆ ಬರಿ ಮನೆಯಲ್ಲಿಟ್ಟುಕೊಂಡು ಒಮ್ಮೆ ಓದಿ ಆಮೇಲೆ ನಿಯಮಿತವಾಗಿ ಧೂಳು ಝಾಡಿಸುವುದರಲ್ಲೇನು ಪುರುಷಾರ್ಥ! ಅದಕ್ಕಿಂತ ನಾಲ್ಕು ಜನ ಓದಿದರೆ ಸಾರ್ಥಕವಲ್ಲವೇ? ಹಾಗಾಗಿ ನನ್ನ ಹೆಸರು ಪುಸ್ತಕದ ಮೇಲೆ. ಎರವಲು ಪಡೆದವರ ಹೆಸರು ನನ್ನ ಮನದೊಳಗೆ, ಹೀಗೊಂದು ವ್ಯವಸ್ಥೆ ಮಾಡಿಕೊಂಡು ಪುಸ್ತಕಗಳ ಕೊಡುಕೊಳ್ಳುವಿಕೆಯ ವ್ಯವಹಾರವನ್ನು ಚಾಲ್ತಿಯಲ್ಲಿಟ್ಟಿದ್ದೇನೆ.  ನಿಮಗೂ ಬೇಕೆನಿಸದರೆ ನನ್ನ ಪುಟ್ಟ ಲೈಬ್ರರಿ ತೆರೆದಿದೆ.

Related Articles

Back to top button