*ಕೆಲಸಗಳ ಆಧಾರದ ಮೇಲೆ ನಮ್ಮನ್ನು ಆಯ್ಕೆ ಮಾಡಿ: ಸಿಎಂ ಬೊಮ್ಮಾಯಿ ಕರೆ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡುತ್ತಿದೆ. ನಮ್ಮ ಕೆಲಸಗಳ ಆಧಾರದ ಮೇಲೆ ನಮ್ಮನ್ನು ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು “ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸೌಲಭ್ಯ ವಿತರಣಾ ಸಮಾರಂಭವನ್ನು ಉದ್ಘಾಟಿಸಿದರು.

3000 ಕೋಟಿ ರೂ.ಗಳ ಪರಿಹಾರ
ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ, ಅಲ್ಪ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳ ಪರಿಹಾರ, ಬೆಳೆ ನಾಶಕ್ಕೆ 3000 ಕೋಟಿ ರೂ.ಗಳ ಪರಿಹಾರ ಒಂದು ತಿಂಗಳಲ್ಲಿ ನೀಡಿದ ದಾಖಲೆ ಡಬಲ್ ಇಂಜಿನ್ ಸರ್ಕಾರದ್ದು. ರೈತ ವಿದ್ಯಾನಿಧಿ ಯೋಜನೆ 13 ಲಕ್ಷ ಮಕ್ಕಳಿಗೆ ತಲುಪಿದೆ. ಯಶಸ್ವಿನಿ ಯೋಜನೆ ಪುನಃ ಪ್ರಾರಂಭಿಸಿದ್ದು ಈ ವರ್ಷ ಪ್ರತಿ ರೈತನಿಗೆ ಜೀವ ವಿಮೆಗೆ 180 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಬ್ಯಾಂಕ್ ಸಾಲ 5 ಲಕ್ಷಕ್ಕೆ ಏರಿಸಲಾಗಿದೆ. ಹೆಣ್ಣು ಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಯಡಿ ಸ್ವಯಂ ಉದ್ಯೋಗ ನೀಡುವ ಬೃಹತ್ ಕಾರ್ಯಕ್ರಮ ಜಾರಿಯಾಗಿದೆ ಎಂದರು.

ಹೊನ್ನಾಳಿಯಲ್ಲಿ ಎಲ್ಲಾ ಕಾರ್ಯಕ್ರಮ ಗಳನ್ನು ರೇಣುಕಾಚಾರ್ಯ ಅವರು ಜಾರಿ ಮಾಡಿ, ಜನೋಪಯೋಗಿ ಶಾಸಕರಾಗಿದ್ದಾರೆ ಎಂದರು.

ಸಾಮಾಜಿಕ ನ್ಯಾಯ
ನಿಜವಾದ ಸಾಮಾಜಿಕ ನ್ಯಾಯ ನೀಡಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು. ಭಾಗ್ಯಲಕ್ಷ್ಮಿ ಯೋಜನೆ ನೀಡಿ ಶೇ 30 ರಷ್ಟು ಅಲ್ಪಸಂಖ್ಯಾತರ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಲಾಭ ಪಡೆದಿದ್ದಾರೆ. ಕನಕದಾಸರ ಜನ್ಮಸ್ಥಳ, ಕಾಗಿನೆಲೆ ಅಭಿವೃದ್ಧಿ, ವಾಲ್ಮೀಕಿ, ಸೇವಾಲಾಲ್ ಜಯಂತಿ , ಲಂಬಾಣಿ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಯಡಿಯೂರಪ್ಪ ಅವರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚು ಮಾಡಿ 40 ವರ್ಷಗಳ ಬೇಡಿಕೆಯನ್ನು ಈಡೇರಿಸಿ, ಸಾಮಾಜಿಕ ನ್ಯಾಯ ಒದಗಿಸಲಾಗಿದೆ.

1.10 ಕೋಟಿ ಮನೆಗಳಿಗೆ ಕುಡಿಯುವ ನೀರು
ಜಲ್ ಜೀವನ್ ಮಿಷನ್ ಅಡಿ 12 ಕೋಟಿ ಮನೆಗಳಿಗೆ ನೀರು ಒದಗಿಸಿದ್ದು ನಮ್ಮ ಪ್ರಧಾನ ಮಂತ್ರಿ ಗಳು. ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರು ದಾಗಿಸಲಾಗಿದೆ. ಈ ವರ್ಷ ಇನ್ನೂ 25 ಲಕ್ಷ ಮನೆಗಳಿಗೆ ನೀರನ್ನು ಒದಗಿಸುವ ಗುರಿ ನಮ್ಮದು. 1.10 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಶಾಸಕ ರೇಣುಕಾಚಾರ್ಯ ಅವರಿಗೆ ಜನ ದೊಡ್ಡ ರೀತಿಯಲ್ಲಿ ಆಶೀರ್ವಾದ ಮಾಡಬೇಕು ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ. ಬಸವರಾಜ, ಶಾಸಕರು ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ, ಸಂಸದ ಜಿ.ಎಂ.ಸಿದ್ದೇಶ್ವರ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button