Kannada NewsKarnataka NewsLatestPolitics

ಜೆಡಿಎಸ್- ಬಿಜೆಪಿ ಮೈತ್ರಿಗೆ ವಿರೋಧವಿಲ್ಲ, ಆಲ್ ದಿ ಬೆಸ್ಟ್ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಏರ್ಪಡುವ ಸುದ್ದಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿಕೆ ನೀಡಿದ್ದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈತ್ರಿಗೆ ‘ಆಲ್ ದಿ ಬೆಸ್ಟ್’ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, “ಬಿಜೆಪಿ – ಜೆಡಿಎಸ್‌ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುವುದಾದರೆ ಬಹಳ ಸಂತೋಷ. ಆದರೆ ಮೈತ್ರಿಯಾದ ನಂತರ ಜೆಡಿಎಸ್‌ ತನ್ನ ಸಿದ್ಧಾಂತ ಹೇಗೆ ಉಳಿಸಿಕೊಳ್ಳುತ್ತದೆ ಗೊತ್ತಿಲ್ಲ, ಪಕ್ಷ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ. ಅವರ ಮೈತ್ರಿಗೆ ನನ್ನ ವಿರೋಧವಂತೂ ಇಲ್ಲ. ಅವರಿಗೆ ಆಲ್‌ ದಿ ಬೆಸ್ಟ್‌” ಎಂದು ಹೇಳಿದ್ದಾರೆ.

ಇದೇ ವೇಳೆ ಸದಾಶಿವನಗರದ ನಿವಾಸದ ಬಳಿ ಶುಕ್ರವಾರ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈ ಮೈತ್ರಿ ಹೊಸ ವಿಚಾರವೇನಲ್ಲ, ಅವರ ಪಕ್ಷದ ಬಗ್ಗೆ ನಾನ್ಯಾಕೆ ಮಾತನಾಡಲಿ, ಒಂದಾಗಲಿ ಬಿಡಿ. ಅವರಿಗೆ ಒಳ್ಳೆಯದಾಗಲಿ, ಆಲ್ ದಿ ಬೆಸ್ಟ್” ಎಂದು ಪುನರುಚ್ಛರಿಸಿದರು.

“ಕುಮಾರಸ್ವಾಮಿ ಹಾಗೂ ಆಶೋಕ್ ಅವರು ಒಂದಾಗಿದ್ದರು, ಈಗ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಅವರು ಒಂದಾಗುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಯಾರೇ ಒಂದಾದರೂ ನಮಗೆ ಸಂತೋಷ. ಅವರವರ ಉಳಿವಿಗಾಗಿ, ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡಲಿ. ಆದರೆ ಅವರುಗಳ ಸಿದ್ಧಾಂತ ಏನಾಗುತ್ತದೆ ಎಂಬುದು ಕುತೂಹಲ” ಎಂದರು.

“ಹಿರಿಯರಾದ ದೇವೆಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ ಎಂದಿದ್ದರು. ಒಂದು ಸಿದ್ದಾಂತ ಇಟ್ಟುಕೊಂಡು ಪಕ್ಷ ಕಟ್ಟಿರುತ್ತಾರೆ, ಈಗ ಆ ಪಕ್ಷ ಉಳಿಯುತ್ತದೊ ಏನಾಗುತ್ತದೊ ಗೊತ್ತಿಲ್ಲ? ಹಾಲಿ ಶಾಸಕರು, ಮಾಜಿ ಶಾಸಕರು ಏನಾಗುತ್ತಾರೊ ಅದರ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಹೇಳಿದರು.

ನಮ್ಮದೇನಿದ್ದರೂ ಕೋ-ಆಪರೇಷನ್:

“ನಾನು ಆಪರೇಷನ್ ಹಸ್ತ, ಆಪರೇಷನ್ ಕಮಲ ಎರಡರ ವಿರೋಧಿ. ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಮುಂದಾಗುವುದಿಲ್ಲ‌. ನಮ್ಮದೇನಿದ್ದರು ಕೋ-ಆಪರೇಷನ್” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಅವರು, “ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ದಾಂತ, ಭಾರತ್ ಜೋಡೊ ಬಗ್ಗೆ ಯಾರಿಗೆ ಒಲವಿದೆ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ” ಎಂದರು.

ಹಾಲಿ- ಮಾಜಿಗಳನ್ನ ಯಾವಾಗ ತಬ್ಬಿಕೊಳ್ಳುವಿರಿ ಎಂಬ ಮರುಪ್ರಶ್ನೆಗೆ ಉತ್ತರಿಸುತ್ತಾ “ಎಷ್ಟು ಜನ ಸೇರಲಿದ್ದಾರೆ ಎನ್ನುವ ಪಟ್ಟಿ ಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆ ಮುಹೂರ್ತ, ಲಗ್ನ ಕೂಡಿಬಂದಾಗ ನಡೆಯಲಿದೆ” ಎಂದು ತಿಳಿಸಿದರು.

“ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ ನಾವು ಯಾರನ್ನು ಕರೆಯುವುದಿಲ್ಲ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಷಿಂಗ್ ಮೆಷಿನ್ ಸೇರಿಕೊಂಡು ಬಿಡಲಿಲ್ಲವೇ” ಎಂದು ತಿಳಿಸಿದರು.

ರಾಜ್ಯದ ರೈತರ ಹಿತ ಮುಖ್ಯ

ಕಾವೇರಿ ನೀರನ್ನು ನಿಲ್ಲಿಸಲಾಗಿದೆಯೇ ಎನ್ನುವ ಪ್ರಶ್ನೆಗೆ “ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜತೆಗೆ ನಮ್ಮ ರೈತರ ಹಿತ ಕಾಯುವುದು ಮುಖ್ಯ, ಅದಕ್ಕೆ ನಾವು ಬದ್ಧ.

ನೀರು ಬಿಡುಗಡೆ ಮಾಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ, ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರು ನಮ್ಮ ಆದ್ಯತೆ” ಎಂದು ಹೇಳಿದರು. ನಿಗದಿ ಮಾಡಿದಷ್ಟು ನೀರು ಬಿಡುಗಡೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ “ಬಿಡುಗಡೆ ಮಾಡಲು ನೀರೇ ಇಲ್ಲ” ಎಂದು ಪ್ರತಿಕ್ರಿಯೆ ನೀಡಿದರು.

ಮೇಕೆದಾಟು, ಮಹದಾಯಿಗೆ ಒಪ್ಪಿಗೆ ಕೊಡಿಸಲಿ

ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನವಿರೋಧಿ ಸರ್ಕಾರ ಎಂದು ಪ್ರತಿಭಟನೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ “ಮೊದಲು ಮೇಕೆದಾಟು ಮತ್ತು ಮಹದಾಯಿಗೆ ಬಿಜೆಪಿಯವರು ಕೇಂದ್ರದಿಂದ ಒಪ್ಪಿಗೆ ಕೊಡಿಸಲಿ” ಎಂದು ಸವಾಲು ಹಾಕಿದರು.

“ಜನವಿರೋಧಿ ಎಂದರೆ ಏನು? ಜನ ಬಿಜೆಪಿಯವರನ್ನು ವಿರೋಧಿಸಿಯೇ ಮನೆಯಲ್ಲಿ ಕೂರಿಸಿದ್ದಾರೆ. ನಂತರ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಷ್ಟು ಅರ್ಹತೆ ಇಲ್ಲ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ ಅಲ್ಲಿ ಓಡಾಡುತ್ತಿರುವುದು, 2 ಸಾವಿರ ಖಾತೆಗೆ ಬರುತ್ತಿರುವುದು ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಅವರ ಹೊಟ್ಟೆಯನ್ನು ಉರಿಸುತ್ತಿದೆ.

ಯಡಿಯೂರಪ್ಪ ಅವರು ತಮ್ಮ ರಾಜಕೀಯ ಉಳಿವಿಗಾಗಿ ಮಾಡುತ್ತಿದ್ದಾರೆ ಮಾಡಲಿ. ಪ್ರತಿಭಟನೆಗಳು ಇರಬೇಕು ಆಗ ನಾವು ನಮ್ಮ ಶಾಸಕರು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ನಮಗೂ ಹುಮ್ಮಸ್ಸು ಬರುತ್ತದೆ. 100 ದಿನಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಸರ್ಕಾರ ಭಾರತದಲ್ಲೇ ಇಲ್ಲ. ಯಾರೋ 100 ದಿನಗಳಲ್ಲಿ 15 ಲಕ್ಷ ಹಣ ಕೊಡುತ್ತೇನೆ ಎಂದಿದ್ದರು? ಅವರ ಪ್ರಣಾಳಿಕೆಯ ಬಗ್ಗೆ ಮೊದಲು ಯೋಚಿಸಲಿ” ತಿರುಗೇಟು ನೀಡಿದರು..

ರಾಮನಗರ ಬಂದ್ ರಾಜಕೀಯ ಪ್ರೇರಿತ:

“ಮೆಡಿಕಲ್ ಕಾಲೇಜು ವಿಚಾರವಾಗಿ ನಡೆದ ಬಂದ್ ಮತ್ತು ಪ್ರತಿಭಟನೆ ರಾಜಕೀಯ ಪ್ರೇರಿತ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ನೀಡಿದ್ದರು. ಅದರ ಟೆಂಡರ್ ಕೂಡ ರದ್ದಾಗಿಲ್ಲ. ಅಷ್ಟರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಮತ್ತೊಂದು ಮೆಡಿಕಲ್ ಕಾಲೇಜು ನೀಡಿತು” ಎಂದರು.

“ಈಗ ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಹಾಗೂ ಮೆಡಿಕಲ್ ಕಾಲೇಜು ಎರಡೂ ಆಗುತ್ತಿದೆ. ಒಂದೇ ಜಿಲ್ಲೆಯಲ್ಲಿ ಎರಡು ಇರಬಾರದು ಎಂದು ನಿಯಮ ಇಲ್ಲವಲ್ಲ” ಎಂದು ಕೇಳಿದರು.

ಅಜೀಂ ಪ್ರೇಮ್‌ಜೀ ಈ ದೇಶದ ಆಸ್ತಿ

“ಅಜೀಂ ಪ್ರೇಮ್‌ಜೀ ಅವರು ಪ್ರತಿ ವರ್ಷ‌ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಜನಕಲ್ಯಾಣಕ್ಕೆ ಬಳಸುತ್ತಿದ್ದಾರೆ. ಅವರು ಈ ದೇಶದ ಆಸ್ತಿ, ಅವರಿಗೆ ಸರ್ಕಾರದಿಂದ ಬೇಕಾದ ಸಹಕಾರ ಮತ್ತು ಸವಲತ್ತು ನೀಡುವುದು ನಮ್ಮ ಕರ್ತವ್ಯ.

ಈಗಾಗಲೇ ಸರ್ಕಾರಿ ಶಿಕ್ಷಕರಿಗೆ ಉನ್ನತ ತರಬೇತಿ ನೀಡುತ್ತಿದ್ದಾರೆ, ಸಿಎಸ್‌ಆರ್ ಅನುದಾನವನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಬಳಸುತ್ತಿದ್ದಾರೆ. ಶಿಕ್ಷಕರ ಕೊರತೆಯನ್ನು ತುಂಬಲು ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿರುವ ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ. ರಾಜ್ಯದ ಹಿತದೃಷ್ಟಿಯಿಂದ ನಡೆದ ಭೇಟಿ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button