ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲು
ಪ್ರಗತಿವಾಹಿನಿ ಸುದ್ದಿ, ಶಿರಸಿ –
ಅತ್ತ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಗೊತ್ತುವಳಿ ಮಂಡಿಸಿ, ಚರ್ಚೆ ನಡೆಯುತ್ತಿದ್ದರೆ, ಇತ್ತ ಶಿರಸಿ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿ ಯಶಸ್ವಿಯಾಗಿದೆ.
ಇದರಿಂದಾಗಿ ಹಾಲಿ ಅಧ್ಯಕ್ಷೆ ಜಯಾ ನಾಯ್ಕ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಗುತ್ತಿಗೆದಾರರಿಗೆ ವಿಳಂಬವಾಗಿ ಹಣ ಪಾವತಿ, ಸದಸ್ಯರ ಗಮನಕ್ಕೆ ತರದೇ ಹಣ ಡ್ರಾ ಮಾಡಿರುವುದು ಸೇರಿದಂತೆ ಹಲವು ಆರೋಪಗಳು ಅವರ ಮೇಲಿತ್ತು ಎನ್ನಲಾಗಿದೆ.
ಕಳೆದ ಹಲವಾರು ದಿನಗಳಿಂದ ಪಂಚಾಯತ ಸದಸ್ಯರ ಮತ್ತು ಅಧ್ಯಕ್ಷರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ತೆರೆಬಿದ್ದಿದ್ದು, ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಭೆಗೆ ಹಾಜರಿದ್ದ 8 ಸದಸ್ಯರಲ್ಲಿ ಉಪಾಧ್ಯಕ್ಷರೂ ಸೇರಿ 6 ಜನರು ಅವಿಶ್ವಾಸ ನಿರ್ಣಯ ಬೆಂಬಲಿಸಿದ್ದು, ಕೇವಲ 2 ಮತಗಳನ್ನು ಪಡೆದ ಕಾರಣ ಅಧ್ಯಕ್ಷರು ಮುಖಭಂಗ ಅನುಭವಿಸಿದರು. ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಅರಿವಿದ್ದ ಕಾರಣ ಎರಡು ದಿನಗಳ ಹಿಂದೆ ಅಧ್ಯಕ್ಷೆ ರಾಜೀನಾಮೆ ನೀಡಿದ್ದರೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.