
ಯಡಿಯೂರಪ್ಪ ಬಗ್ಗೆ ದೇವೇಗೌಡ ಇಷ್ಟೊಂದು ಸಾಫ್ಟ್ ಆಗಿದ್ಯಾಕೆ?
ಪ್ರಗತಿವಾಹಿನಿ ಸುದ್ದಿ, ಮೈಸೂರು –
ಈ ರಾಜಕಾರಣಿಗಳು ಯಾವಾಗ ಹೇಗ್ಹೇಗೆ ಮಾತನಾಡುತ್ತಾರೆ? ಅದರ ಹಿಂದೆ ಏನೇನು ಆಟಗಳಿರುತ್ತವೆ? – ಏನೂ ಕೆಲವೊಮ್ಮೆ ಅರ್ಥವಾಗುವುದಿಲ್ಲ.
ಈಗ ಮಾಜಿ ಸಚಿವ ಜಿ.ಟಿ.ದೇವೇಗೌಡ ಆಡಿದ ಮಾತುಗಳೂ, ಅದರ ಹಿಂದಿನ ಲೆಕ್ಕಾಚಾರಗಳೂ ಅರ್ಥವಾಗದೆ ಜೆಡಿಎಸ್ ಕಾರ್ಯಕರ್ತರೆೇ ತಲೆ ಕೆರೆದುಕೊಳ್ಳುತ್ತಿದ್ದಾರೆ.
ದೇವೇಗೌಡ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯಾಗಿದ್ದಾಗಲೂ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದುಂಟು. ಆಗಲೇ ಅವರು ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಅಷ್ಟು ದೊಡ್ಡ ಆಪರೇಶನ್ ನಡೆದರೂ ಅವರು ಮಾತ್ರ ಜೆಡಿಎಸ್ ನಲ್ಲೇ ಉಳಿದುಕೊಂಡಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಆರ್ ಎಸ್ ಗೆ ಬಾಗಿನ ಅರ್ಪಿಸಲು ಆಗಮಿಸಿದ್ದರು. ಯಡಿಯೂರಪ್ಪ ಸ್ವಾಗತಿಸಲು ಲಘುಬಗೆಯಿಂದ ಬಂದಿದ್ದ ಜಿ.ಟಿ.ದೇವೇಗೌಡ ಖುಷಿ ಖುಷಿಯಿಂದಲೇ ಯಡಿಯೂರಪ್ಪನವರನ್ನು ಸ್ವಾಗತಿಸಿದರು. ಆಗಲೇ ಜೆಡಿಸ್ ಮುಖಂಡರು, ಕಾರ್ಯಕರ್ತರು ತಲೆ ಕೆರೆದುಕೊಳ್ಳಲು ಆರಂಭಿಸಿದ್ದರು.
ಇದಾಗಿ ಸ್ವಲ್ಪ ಹೊತ್ತಿನ ನಂತರ ಅವರು ಬಹಿರಂಗವಾಗಿಯೇ ಯಡಿಯೂರಪ್ಪನವರನ್ನು ಹಾಡಿ ಹೊಗಳಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಬರಗಾಲ ಹೋಗಿದೆ. ಚೆನ್ನಾಗಿ ಮಳೆ, ಬೆಳೆ ಆಗುತ್ತಿದೆ ಎಂದರು. ಈ ಹಿಂದೆ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಮಳೆ, ಬೆಳೆ ಚೆನ್ನಾಗಿ ಆಗಿತ್ತು ಎಂದು ಪ್ರಶಂಸಿಸಿದರು.
ಅಷ್ಟಕ್ಕೇ ನಿಲ್ಲದೆ, ಪ್ರವಾಹ ಪರಿಸ್ಥಿತಿಯನ್ನು ಯಡಿಯೂರಪ್ಪ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ದೇವೇಗೌಡ ಹೊಗಳಿದ್ದಾರೆ.
ಯಡಿಯೂರಪ್ಪ ಅವಕಾಶ ಕೊಡಲ್ಲ
ದೇವೇಗೌಡ ಯಡಿಯೂರಪ್ಪ ಬಗ್ಗೆ ಸಾಫ್ಟ್ ಆಗಿದ್ದು ಇವಿಷ್ಟರಕ್ಕೇ ಸೀಮಿತವಾಗಿಲ್ಲ. ಗುರುವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಯಡಿಯೂರಪ್ಪ ಅಳಿಯ ರಾಜೇಶ್ ಪೊಲೀಸರ ಮೇಲೆ ರೇಗಾಡಿದ್ದರು. ಬಹಿರಂಗವಾಗಿಯೇ ನಿಮ್ಮನ್ನು ಎತ್ತಂಗಡಿ ಮಾಡಿಸುತ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದರು.
ಈ ಕುರಿತು ಜಿ.ಟಿ.ದೇವೇಗೌಡರ ಪ್ರತಿಕ್ರಿಯೆ ಕೇಳಿದಾಗಲೂ ಬಹಳ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿದರು. ಯಡಿಯೂರಪ್ಪ ಅವರಿಗೆ ಇದೆಲ್ಲ ಗೊತ್ತಿಲ್ಲ ಬಿಡಿ. ಯಡಿಯೂರಪ್ಪ ಇಂತದಕ್ಕೆಲ್ಲ ಅವಕಾಶ ಕೊಡಲ್ಲ ಎಂದುಬಿಟ್ಟರು. ಬಿಜೆಪಿ ವಿರುದ್ಧ, ಯಡಿಯೂರಪ್ಪ ವಿರುದ್ಧ, ಯಡಿಯೂರಪ್ಪ ಅಳಿಯನ ವಿರುದ್ಧ ಹಿಗ್ಗಾಮುಗ್ಗಾ ಜಾಡಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆಲ್ಲ ಶಾಕ್ ನೀಡಿದರು ಜಿ.ಟಿ.ದೇವೇಗೌಡ.
ಜಿ.ಟಿ.ದೇವೇಗೌಡ ಯಡಿಯೂರಪ್ಪ ಬಗೆಗೆ ಇಷ್ಟೊಂದು ಸಾಫ್ಟ್ ಆಗಿದ್ಯಾಕೆ? ಇದರ ಹಿಂದೆ ಬೇರೆ ಏನಾದರೂ ಲೆಕ್ಕಾಚಾರಗಳಿವೆಯೇ ಎಂದು ಜೆಡಿಸ್ ಕಾರ್ಯಕರ್ತರು, ಮುಖಂಡರಷ್ಟೆ ಅಲ್ಲ, ಬಿಜೆಪಿಯವರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. (ಪ್ರಗತಿವಾಹಿನಿ ಸುದ್ದಿ)