
ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಸಿಕ್ಕಿಬಿದ್ದ ವಂಚಕರು
ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಯೊಬ್ಬರನ್ನು ಹೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
24 ಕೋಟಿ ಹಣವನ್ನು ವೃದ್ಧೆಯಿಂದ ದೋಚಿದರೂ ವಂಚಕರ ಹಣದ ಆಸೆ ಕಡಿಮೆಯಾಗಿಲ್ಲ. ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್ನಲ್ಲಿ ಅಡ ಇಟ್ಟು ಹಣ ನೀಡಲೆಂದು ಬ್ಯಾಂಕ್ ಗೆ ಬಂದಿದ್ದ ವೃದ್ಧೆಯನ್ನು ರಕ್ಷಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದಾಗಿ ವೃದ್ಧೆ ಬಚಾವ್ ಆಗಿದ್ದಾರೆ. ಡಿಜಿಟಲ್ ಅರೆಸ್ಟ್ ದರೋಡೆಕೋರರು ಸಿಕ್ಕಿ ಬಿದ್ದಿದಾರೆ.
ಬೆಂಗಳೂರಿನ ಶಿವಾಜಿನಗರದ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ಎಂಬವರಿಗೆ ಆಸ್ತಿ ಮಾರಿದ್ದ ಕೋಟಿ ಕೋಟಿ ಹಣ ಬಂದಿತ್ತು. ಇದನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರು. ಲಕ್ಷ್ಮೀ ಅವರ ಬಳಿ ಹಣ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಸೈಬರ್ ವಂಚಕರು, ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಮಹಿಳೆಗೆ ಕರೆ ಮಾಡಿದ್ದಾರೆ. ನೀವು ಅಕ್ರಮ ಹಣ ವರ್ಗಾವಣೆ ಮಡಿದ್ದೀರಾ ಎಂದು ಹೆದರಿಸಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಲಕ್ಷ್ಮೀ ಅವರಿಗೆ ಭಯ ಹುಟ್ಟಿಸಿದ್ದಾರೆ. ಹೀಗೆ ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 24 ಕೋಟಿ ರೂಪಾಯಿ ಹಣವನ್ನು ಅವರಿಂದ ಪೀಕಿದ್ದಾರೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಲಕ್ಷ್ಮೀ, ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನವನ್ನ ಅಡಿಟ್ಟು ಹಣ ಪಡೆಯಲು ಬ್ಯಾಂಕ್ಗೆ ತೆರಳಿದ್ದರು. ಇದನ್ನು ಗಮನಿಸಿದ ಬ್ರಾಂಚ್ ಮ್ಯಾನೇಜರ್, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಬ್ಯಾಂಕ್ ಗೆ ಬಂದ ಪೊಲೀಸರು ಲಕ್ಷ್ಮೀ ಅವರನ್ನು ವಿಚಾರಿಸಿದ್ದಾರೆ. ಆದರೆ ಆರಂಭದಲ್ಲಿ ಏನನ್ನೂ ಅವರು ಬಾಯಿ ಬಿಡಲು ಒಪ್ಪಲಿಲ್ಲ. ಪೊಲೀಸರು ಮತ್ತಷ್ಟು ಅವರನ್ನು ವಿಚಾರಣೆ ನಡೆಸಿದಾಗ ಡಿಜಿಟಲ್ ಅರೆಸ್ಟ್ ಆಗಿರುವುದನ್ನು ಬಾಯ್ಬಿಟ್ಟಿದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗನ್ನು ಹೆಡೆಮುರಿ ಕಟ್ಟಿದ್ದಾರೆ. ಗೌರವ್ ಕುಮಾರ್ , ಓಂ ಪ್ರಕಾಶ್ ರಾಜ್ ಪುತ್ ಸೇರಿದಂತೆ ಐವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳು ಒಟ್ಟು 22 ಖಾತೆಗಳಿಗೆ ವರ್ಗಾಯಿಸಿದ್ದು, 60 ಲಕ್ಷ ಹಣ ಇರುವ ಅಕೌಂಟ್ ನ್ನು ಪೊಲೀಸರು ಸೀಜ್ ಮಾಡಿದ್ದಾರೆ.



