*ಬಿಜೆಪಿಯವರು ಬೇಕಾದ ರಾಜಕಾರಣ ಮಾಡಲಿ ಎಂದ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಾನು ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ. ಅವರು ಬೇಕಾದರೆ ರಾಜಕಾರಣ ಮಾಡಿಕೊಳ್ಳಲಿ ಬಿಡಿ ಎಂದು ರಾಜಧಾನಿಯು ಗಾರ್ಬೇಜ್ ಸಿಟಿಯಾಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಸದ ಸಮಸ್ಯೆ ಬಗ್ಗೆ ಅಧ್ಯಯನ ಮಾಡಲು, ಚೆನ್ನೈ, ಹೈದರಾಬಾದ್, ಮುಂಬೈ ನಗರಗಳಿಗೆ ಹೋಗಿ ಬಂದಿದ್ದೇನೆ. ಇನ್ನು ಬೆಂಗಳೂರು ನಗರದ ಹೊರ ಭಾಗದಲ್ಲಿ ಕಸ ವಿಲೇವಾರಿಗೆ 4 ಕಡೆ ಜಾಗ ಗುರುತಿಸಲಾಗಿದೆ. ನಾವು ಸಮಸ್ಯೆಗೆ ಪರಿಹಾರ ಹುಡುಕಿ ಕೆಲಸ ಮಾಡುವವರು. ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಬ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಟೀಕಿಸುವವರು ಟೀಕಿಸಲಿ. ಬ್ಯಾಂಡ್ ಬೆಂಗಳೂರು ಎಂಬುವುದು ಅದು ಪ್ರಚಾರಕ್ಕೆ ಅಲ್ಲ. ನಾನು ಟೀಕೆಗಳಿಗೆ ಉತ್ತರವೂ ಕೊಡಲ್ಲ. ನಮ್ಮ ಕೆಲಸಗಳೇ ಉತ್ತರಿಸಲಿವೆ ಎಂದರು.
ಇದೇ ವೇಳೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಮಹಿಳಾ ಕಲಾವಿದರ ಮೇಲಿನ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚನೆಯಾಗಿರುವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಿ, ನನಗೆ ಮೀಟೂ ವಿಚಾರದ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ತಿಳಿದುಕೊಂಡು ಮಾತನಾಡುವೆ ಎಂದು ಹೇಳಿದರು.


