*ನಮ್ಮ ಪ್ಯಾನೆಲ್ ಅಭ್ಯರ್ಥಿಗಳ ಪ್ರಾಮಾಣಿಕತೆಯ ಬಗ್ಗೆ ಸಂಶಯ ಬೇಡ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಮ್ಮ ಪ್ಯಾನೆಲ್ ನ ಎಲ್ಲ 15 ಅಭ್ಯರ್ಥಿಗಳೂ ಅತ್ಯಂತ ಪ್ರಾಮಾಣಿಕತೆಯಿಂದ ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಪಣತೊಟ್ಟಿದ್ದೇವೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಖಾನಾಪುರ ತಾಲೂಕಿನ ಹಿರೇಮುನವಳ್ಳಿ, ತೋಲಗಿ, ಚಾಪಗಾಂವ್ ಗ್ರಾಮಗಳಲ್ಲಿ ಪ್ಯಾನಲ್ ನ ಸರ್ವ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಚನ್ನರಾಜ, ಶ್ರೀ ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ನ್ನು ಬೆಂಬಲಿಸುವಂತೆ ಕಾರ್ಖಾನೆಯ ಷೇರುದಾರರಲ್ಲಿ ವಿನಂತಿಸಿದರು.
ನಮ್ಮಲ್ಲಿ ಯಾವುದೇ ಸ್ವಾರ್ಥವಿಲ್ಲ. ರೈತರು ಹಾಗೂ ಕಾರ್ಮಿಕರ ಹಿತವೇ ನಮ್ಮ ಉದ್ದೇಶ. ಕಾರ್ಖಾನೆ ಮತ್ತೆ ಮೊದಲಿನಂತೆ ಉಚ್ಱಾಯ ಸ್ಥಿತಿ ತಲುಪಬೇಕು. ರೈತರಿಗೆ ಸರಿಯಾದ ಸಮಯಕ್ಕೆ ಬಿಲ್ ಪಾವತಿಯಾಗಬೇಕು. ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗಬೇಕು. ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಬೇಕು. ಈ ಬಗ್ಗೆ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಈ ವೇಳೆ ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್, ಸ್ಥಳೀಯ ಮುಖಂಡರು, ಪ್ಯಾನಲ್ ಅಭ್ಯರ್ಥಿಗಳು ಉಪಸ್ಥಿತರಿದ್ದರು.