Karnataka NewsLatest

*ಪತ್ನಿ ಕಪ್ಪಗಿದ್ದಾಳೆಂದು ಪತಿಯಿಂದ ಅವಮಾನ: ಮನನೊಂದು ನವವಿವಾಹಿತೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಕಪ್ಪಗಿದ್ದಾಳೆ, ವರದಕ್ಷಿಣೆ ತರಬೇಕು ಎಂದು ಪತಿಮಹಾಶಯ ಹಾಗೂ ಮನೆಯವರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.

ಮದುವೆಯಾದ 7 ತಿಂಗಳಲ್ಲೇ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 22 ವರ್ಷದ ಬಿಂದುಶ್ರೀ ಆತ್ಮಹತ್ಯೆಗೆ ಶರಣಾದವಳು. 7 ತಿಂಗಳ ಹಿಂದಷ್ಟೇ ಬಿಂದುಶ್ರೀಯನ್ನು ರಾಘವೇಂದ್ರ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಪತ್ನಿ ಕಪ್ಪಗಿದ್ದಾಳೆ ಎಂದು ಸದಾ ಅವಮಾನ ಮಾಡುತ್ತ, ಹಂಗಿಸುತ್ತಿದ್ದ ಪತಿ ಮಹಾಶಯ, ಬರಬರುತ್ತಾ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಸಾಲದ್ದಕ್ಕೆ ಆತನ ತಂದೆ-ತಾಯಿಯೂ ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರು ಎನ್ನಲಾಗಿದೆ.

ಬಿಂದುಶ್ರೀ ಪತಿ ರಾಘವೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದಾಗ್ಯೂ ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪ ಕೇಳಿಬಂದಿದೆ. ಕಿರುಕುಳ, ಅವಮಾನಕ್ಕೆ ನೊಂದು ತವರಿಗೆ ಹೋಗಿದ್ದ ಬಿಂದುಶ್ರೀ ಅಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ. ಮಗಳ ಆತ್ಮಹತ್ಯೆ ಸುದ್ದಿ ಕೇಳಿ ನೊಂದ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಂತಾಮಣಿ ನಗರ ಠಾಣೆಯಲ್ಲಿ ಬಿಂದುಶ್ರೀ ಪತಿ ರಾಘವೇಂದ್ರ ಹಗೂ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button