*ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಕಟ್ಟಿ ಕೆಎಲ್ಇ ಸಂಸ್ಥೆ ಮೌಲಿಕ ಸೇವೆ ಮಾಡಿದೆ: ಕಾಶಿ ಪೀಠದ ಪೂಜ್ಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಮತ*

ಪ್ರಗತಿವಾಹಿನಿ ಸುದ್ದಿ: ಜಾಗತಿಕವಾಗಿ ವಿಸ್ತರಿಸಿರುವ ಗಡಿಭಾಗದಲ್ಲಿ ಹತ್ತು ಹಲವಾರು ಕನ್ನಡ ಮಾಧ್ಯಮ ಶಾಲೆಗಳನ್ನು ಹುಟ್ಟುಹಾಕಿ ಕನ್ನಡ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದೆ. ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಕೆಎಲ್ಇ ಸಂಸ್ಥೆಯ ಕೊಡುಗೆ ಅನನ್ಯ ಎಂದು ಕಾಶಿ ಪೀಠದ ಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಅವರು ಯಡೂರಿನಲ್ಲಿ ಕೆಎಲ್ಇ ಕನ್ನಡ ಮಾಧ್ಯಮ ಶಾಲೆ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಕೆಎಲ್ಇ ಸಂಸ್ಥೆಯು ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಚಿರಸ್ಮರಣೀಯ. ಅದರ ಹಿಂದೆ ಗೌರವ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆಯವರ ಶ್ರಮ ಅಗಾಧವಾದುದು. ಒಂದು ಸಂಸ್ಥೆಯನ್ನು ಅದ್ಭುತವಾಗಿ ಕಟ್ಟುವುದರ ಮೂಲಕ ಅದನ್ನು ಸಮಾಜಮುಖಿಯಾಗಿ ವಿಸ್ತರಿಸಿದ್ದು ಅವರ ಹೆಗ್ಗಳಿಕೆ. ಅದರೊಂದಿಗೆ ಕನ್ನಡವನ್ನು ಈ ನೆಲದಲ್ಲಿ ಜಾಗೃತಿಯಿಂದ ಉಳಿಸಿ ಬೆಳೆಸಿದ್ದಾರೆ. ಇಂದು ಯಡೂರು ವೀರಭದ್ರನ ಸನ್ನಿಧಾನದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಹುಟ್ಟು ಹಾಕುತ್ತಿರುವುದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಪವಿತ್ರ ಭೂಮಿ ಪೂಜೆಗೆ ಪಂಚಪೀಠದ ಶಿವಾಚಾರ್ಯರನ್ನು ಆಹ್ವಾನಿಸಿ ನೆರವೇರಿಸುತ್ತಿರುವುದು ಈಶ್ವರನ ಕೃಪೆಯೆಂದುಕೊಂಡಿದ್ದೇವೆ.
ಸಮಾಜಮುಖಿಯಾದ ಸೇವೆಗೆ ಅಣಿಯಾಗಿರುವ ಕೆಎಲ್ಇ ಸಂಸ್ಥೆಯ ಈ ಶಾಲೆ ಈ ಭಾಗದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ಮಾಡಲಿ ಸಂಸ್ಥೆಯು ವಿಸ್ತಾರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.
ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಸಂಸ್ಥೆಯ ಕಾರ್ಯಗಳಿಗೆ ಪಂಚಪೀಠದ ಜಗದ್ಗುರುಗಳು ಸದಾ ಆಶೀರ್ವದಿಸುತ್ತಾ ಬಂದಿದ್ದಾರೆ. ಇಂದು ಅವರ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿರುವುದು ಬಹಳ ಸಂತೋಷ ತಂದಿದೆ. ಮುಂಬರುವ ದಿನಗಳಲ್ಲಿ ಅತ್ಯುನ್ನತವಾದ ಶಾಲೆಯನ್ನು ಇಲ್ಲಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಶ್ರೀಶೈಲ ಪೀಠದ ಪೂಜ್ಯ ಜಗದ್ಗುರು ಶ್ರೀ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ, ಉಜ್ಜಯಿನಿ ಪೀಠದ ಪೂಜ್ಯ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿ ಮಹಾಪೀಠದ ಪೂಜ್ಯಶ್ರೀ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿ ಭೂಮಿ ಪೂಜೆಯನ್ನು ನೆರವೇರಿಸಿದರು.
ಕೆಎಲ್ಇ ಆಡಳಿತ ಮಂಡಳಿಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಜಯಾನಂದ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಮಂಜುನಾಥ ಮುನವಳ್ಳಿ, ವಿಜಯ ಮೆಟಗುಡ್, ಮಾಜಿ ನಿರ್ದೇಶಕರಾದ ಶಂಕ್ರಣ್ಣ ಮುನವಳ್ಳಿ, ಶಾಸಕರಾದ ಗಣೇಶ ಹುಕ್ಕೇರಿ ಮುಂತಾದವರು ಉಪಸ್ಥಿತರಿದ್ದರು.



