*ಹೆರಿಗೆ ಆಸ್ಪತ್ರೆಗಳನ್ನು ಬಂದ್ ಮಾಡುವ ನಿರ್ಧಾರ ಕೈಬಿಡಿ: ರಾಜ್ಯ ಸರ್ಕಾರಕ್ಕೆ ಡಾ.ಸೊನಾಲಿ ಸರ್ನೋಬತ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಹೆರಿಗೆ ಆಸ್ಪತ್ರೆಗಳ ಬಂದ್ ಮಾಡುವ ನಿರ್ಧಾರ ಕೈಗೊಂಡಿರುವುದು ಸರ್ಕಾರದ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ 230 ಹೆರಿಗೆ ಆಸ್ಪತ್ರೆಗಳನ್ನು ಮುಚ್ಚಿದರೆ ಸರ್ಕಾರಿ ಆಸ್ಪತ್ರೆಗಳನ್ನು ನಂಬಿಕೊಂಡಿರುವ ಬಡವರ ಮನೆಯ ಹೆಣ್ಣುಮಕ್ಕಳು ಹೆರಿಗೆಗಾಗಿ ಎಲ್ಲಿಗೆ ಹೋಗಬೇಕು? ಬಡಜನರಿಗೆ ಆರೋಗ್ಯ ಮೂಲಸೌಕರ್ಯ ಒದಗಿಸಲಾಗದಿದ್ದರೆ ಇಂತಹಾ ನಿಷ್ಪ್ರಯೋಜಕ ಸರ್ಕಾರ ಇರುವುದಾದರೂ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕಳೆದ ವರ್ಷ ಸಾಲು ಸಾಲಾಗಿ ಬಾಣಂತಿಯರು ಪ್ರಾಣ ಬಿಟ್ಟರು. ಈಗ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಡಲು ಹೆರಿಗೆ ಆಸ್ಪತ್ರೆಗಳಿಗೆ ಬೀಗ ಹಾಕಲು ಹೊರಟಿರುವುದು ಖಂಡನೀಯ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದು ಸರ್ಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸಲಾಗುತ್ತಿದೆಯೇ? ಬಡಜನರ ಮೇಲೆ ಕಿಂಚಿತ್ತೂ ಕರುಣೆಯಿಲ್ಲವೇ? ನೊಂದ ಹೆಣ್ಣುಮಕ್ಕಳ ಶಾಪಕ್ಕೆ ಗುರಿಯಾಗುವ ಮುನ್ನ ಹೆರಿಗೆ ಆಸ್ಪತ್ರೆಗಳನ್ನು ಮುಚ್ಚುವ ಆದೇಶ ಕೈಬಿಡಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.



