*ಪಾಲಿಕೆಯಿಂದ ಭರದಿಂದ ಸಾಗಿದ ನಾಲಾ ಹೂಳೆತ್ತುವ ಕಾರ್ಯ: ಖುದ್ದು ಪರಿಶೀಲಿಸಿದ ಆಯುಕ್ತರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಳೆಗಾಲದಲ್ಲಿ ನಾಲಾಗಳು, ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುವುದು ಸೇರಿದಂತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ನಾಲಾ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಮುಂಜಾಗೃತಾಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಹಲವಾರು ಬಡಾವಣೆಗಳ ಸಾರ್ವಜನಿಕರಿಂದ ದೂರುಗಳು ಸಹ ಬಂದಿವೆ. ವಿವಿಧ ವಾರ್ಡ್ ಗಳ ನಗರ ಸೇವಕರೂ ಸಹ ಮಳೆಗಾಲದಿಂದಾಗುವ ಅನಾನುಕೂಲತೆಗಳನ್ನು ಮುಂಚಿತವಾಗಿ ಸರಿಪಡಿಸಬೇಕೆಂಬ ಸಲಹೆಯನ್ನು ಸಹ ನೀಡಿದ್ದರು.
ಈ ಹಿನ್ನಲೆಯಲ್ಲಿ ಸ್ವಚ್ಛತೆಯ ಕಡೆಗೆ ಗಮನಹರಿಸಿರುವ ಪಾಲಿಕೆಯು ಶೀಘ್ರದಲ್ಲೇ ಮಳೆಗಾಲ ಆರಂಭವಾಗುತ್ತಿರುವುದರಿಂದ ಮಹಾನಗರದ ವಿವಿಧ ಭಾಗಗಳಲ್ಲಿರುವ ನಾಲಾಗಳ ಹೂಳೆತ್ತುವ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಕಸ ವಿಲೇವಾರಿ ಮಾಡುವ ಕಾರ್ಯ, ಗಾಳಿ ಮಳೆಯಿಂದ ಬೀಳುವ ಹಂತದಲ್ಲಿರುವ ಹಾಗೂ ಚರಂಡಿ ನೀರು ಹರಿಯಲು ಅಡ್ಡಲಾಗಿರುವ ಹಾಗೂ ವಿದ್ಯುತ್ ತಂತಿಗಳ ಮೇಲೆ ಬಿದ್ದು ಅಪಾಯ ತಂದೊಡ್ಡಲಿರುವ ಗಿಡ ಮರಗಳನ್ನು ತೆಗೆದುಹಾಕುವ ಕಾರ್ಯ ಸಹ ಭರದಿಂದ ಸಾಗಿದೆ. ಖುದ್ದು ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ ಅವರೇ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸಹ ಸ್ವೀಕರಿಸಿದ್ದಾರೆ. ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ. ವಿಭಾಗದ ಅಭಿಯಂತರ ಅಂಕಿತ ಸೇರಿದಂತೆ ಇತರ ಅಧಿಕಾರಿಗಳು, ವಾರ್ಡನ ನಗರ ಸೇವಕರು ಹಾಗೂ ಸಿಬ್ಬಂದಿ ಆಯುಕ್ತರಿಗೆ ಸಾತ್ ನೀಡಿದ್ದಾರೆ.




