Belagavi NewsBelgaum NewsKarnataka NewsLatest

*ಬೆಳಗಾವಿ: ತಮ್ಮನನ್ನೇ ಹತ್ಯೆಗೈದ ಅಣ್ಣ*

ಪ್ರಗತಿವಾಹಿನಿ ಸುದ್ದಿ: ತನ್ನ ಮಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದ ತಮ್ಮನನ್ನು ಅಣ್ಣನೇ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ನಡೆದಿದೆ.

ವಿಠಲ ಚೌವ್ಹಾಣ್ ಕೊಲೆಯಾದ ವ್ಯಕ್ತಿ. ಭೀಮಪ್ಪ ಚೌವ್ಹಾಣ್ ಕೊಲೆ ಮಾಡಿರುವ ಆರೋಪಿ ಅಣ್ಣ. ಭೀಮಪ್ಪ ಚೌವ್ಹಾಣ್ ಮಗಳು ಪಕ್ಕದ ಊರಿನ ಯುವಕನನ್ನು ಪ್ರೀತಿಸಿದ್ದಳು. ಸರ್ಕಾರಿ ನೌಕರಿಯಲ್ಲಿದ್ದಾನೆ ಎಂದು ನಂಬಿ ಓಡಿ ಹೋಗಿ ಮದುವೆಯಾಗಿದ್ದಳು. ಆದರೆ ಮದುವೆಯಾದ ಮೂರು ತಿಂಗಳ ಬಳಿಕ ಪತಿ ಸರ್ಕಾರಿ ನೌಕರಿಯಲ್ಲಿಲ್ಲ. ಸುಳ್ಳು ಹೇಳಿ ಮದುವೆಯಾಗಿದ್ದು ಗೊತ್ತಾಗಿದೆ. ಇದರಿಂದ ನೊಂದು ಪತಿ ಮನೆ ಬಿಟ್ಟು ತವರಿಗೆ ಬಂದಿದ್ದಳು.

ತವರಿಗೆ ಬಂದಿದ್ದ ಮಗಳ ಬಗ್ಗೆ ಆಕೆಯ ಚಿಕ್ಕಪ್ಪ ವಿಠಲ ಚೌವ್ಹಾಣ್, ಊರಲ್ಲೆಲ್ಲ ಆಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ. ತನ್ನ ಅಣ್ಣನ ಮಗಳು ಗರ್ಭಿಣಿಯಾಗಿ ಬಂದಿದ್ದಾಳೆ ಎಂದು ಅಪಪ್ರಚಾರ ಮಾಡಲಾರಂಭಿಸಿದ್ದ. ಇದರಿಂದ ಬೇಸತ್ತ ಭೀಮಪ್ಪ ಚೌವ್ಹಾಣ್ ತಮ್ಮನ ಜೊತೆ ಜಗಳವಾಡಿದ್ದ. ಹಲವುಬಾರಿ ಎಚ್ಚರಿಕೆಯನ್ನೂ ನೀಡಿದ್ದ.

ಆದಾರೂ ವಿಠಲ ಚೌವ್ಹಾಣ್ ಅಪಪ್ರಚಾರ ಮಾಡುವುದು ನಿಲ್ಲಿಸಿರಲಿಲ್ಲ. ಕೆಲ ದಿನಗಳ ಹಿಂದೆ ಭೀಮಪ್ಪ ಚೌವ್ಹಾಣ್ ಗ್ಯಾಂಗ್ ಕಟ್ಟಿಕೊಂಡು ಬಂದು ತಮ್ಮ ವಿಠಲ ಚೌವ್ಹಾಣ್ ನನ್ನು ರಾಡ್ ನಿಂದ ಹೊಡೆದಿದ್ದ. ತೀವ್ರವಾಗಿ ಹಲ್ಲೆಗೊಳಗಾಗಿದ್ದ ವಿಠಲ ಚೌವ್ಹಾಣ್ ನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವಿಠಲ ಚೌವ್ಹಾಣ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಭೀಮಪ್ಪ ಹಾಗೂ ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಭೀಮಪ್ಪ ಚೌವ್ಹಾಣ್ ಹಾಗೂ ಲಕ್ಷ್ಮಣ ಪಡತರೆಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button