Kannada NewsKarnataka News

ಸತೀಶ ಶುಗರ‍್ಸ್ ಕಾರ್ಖಾನೆಯ ಆವರಣದಲ್ಲಿ ವನಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಸತೀಶ ಶುಗರ‍್ಸ್ ಕಾರ್ಖಾನೆಯ ಆವರಣದಲ್ಲಿ ೨೦೨೦ ನೇ ಸಾಲಿನ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ  ಪ್ರದೀಪಕುಮಾರ ಎಂ  ಮಾತನಾಡುತ್ತ, ಸಕಲ ಜೀವರಾಶಿಗಳಿಗೂ ಗಾಳಿ, ನೀರು, ಆಹಾರ ಮುಖ್ಯವಾಗಿದ್ದು, ಗಿಡ ಮರಗಳ ಅಭಾವದಿಂದ ಕಾಲಕಾಲಕ್ಕೆ ಮಳೆಯಾಗದೇ ಪ್ರಕೃತಿ ವಿಕೋಪಗಳು ಉಂಟಾಗಿ ಜನ ಜೀವನವನ್ನು ತೂಂದರೆಗೀಡುಮಾಡುತ್ತಿವೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ ನಮ್ಮ ಕಾರ್ಖಾನೆಯ ಆವರಣದಲ್ಲಿ ಹೆಚ್ಚಿನ ಪ್ರಮಾಣದ ವಿವಿಧ ತಳಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರ್  ಸಿದ್ದಾರ್ಥ ವಾಡೆನ್ನವರ್  ಮಾತನಾಡುತ್ತ, ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸಿದಾಗ ಮಾತ್ರ ನಮ್ಮ ಜೀವನವೂ ನೆಮ್ಮದಿಯಿಂದ ಕೂಡಿರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಸಾಧ್ಯವಾದಷ್ಟು ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ಮತ್ತು ಅರಣ್ಯ ನಾಶವನ್ನು ತಡೆಯುವ ಮೂಲಕ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಬೇಕಾಗಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಂಡವವಾಡುತ್ತಿರುವ ಪಿಡುಗುಗಳು ಮಾನವನ ಬದುಕಿನಲ್ಲಿ ಹಲವಾರು ರೀತಿಯಲ್ಲಿ ಕಷ್ಟನಷ್ಟಗಳನ್ನುಂಟುಮಾಡುತ್ತಿದ್ದು, ಸ್ವಚ್ಚ ಸುಂದರ ಪ್ರಕೃತಿ ನಿರ್ಮಾಣದ ಮೂಲಕ ಇವೆಲ್ಲವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಪಿ.ಡಿ. ಹಿರೇಮಠ, ಉಪಾಧ್ಯಕ್ಷರುಗಳಾದ ವಿ.ಎಮ್.ತಳವಾರ, ಮತ್ತು  ಡಿ.ಆರ್. ಪವಾರ, ಪ್ರಧಾನ ವ್ಯವಸ್ಥಾಪಕ  ಎ.ಪಿ. ಹಲಕರ್ಣಿ,  ಎಸ್.ಬಿ. ಕೋಟಗಿ,  ಎಮ್.ಬಿ.ಸಸಾಲಟ್ಟಿ ಹಾಗೂ ಹಿರಿಯ ವ್ಯವಸ್ಥಾಪಕರುಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಖಾನೆಯ ಕಾರ್ಮಿಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button