Kannada NewsKarnataka NewsPolitics

*ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಮಹತ್ವದ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಗಾಳಿ, ಮಳೆಗೆ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿ ಆಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ವೃಕ್ಷ ಗುರುತಿಸಿ ಕೊಂಬೆಗಳನ್ನು ಕತ್ತರಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.


ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಇಂದು ರಸ್ತೆ ಬದಿಯ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ 29 ವರ್ಷದ ಅಕ್ಷಯ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದರು.


ಮಳೆ, ಗಾಳಿಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಧರಾಶಾಯಿ ಆಗುತ್ತವೆ. ಇದಕ್ಕೆ ಕಾರಣ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನೇ ಹೊರಡಿಸಿದೆ ಎಂದರು.


ನಿನ್ನೆ ಬಿಬಿಎಂಪಿ ವಿಶೇಷ ಆಯುಕ್ತರು ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಆದೇಶ ಮಾಡಿದ್ದು, ಇನ್ನು ಮುಂದೆ ರಸ್ತೆ ಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.

Home add -Advt


ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ತಾನು ಈಗಾಗಲೇ ನೆಟ್ಟಿರುವ ಗಿಡ ಮರಗಳ ಸುತ್ತ ಇರುವ ಕಾಂಕ್ರೀಟ್, ಡಾಂಬರು ತೆರವಿಗೆ ಕ್ರಮ ವಹಿಸಬೇಕು ಎಂದರು.


ವೃಕ್ಷ ಪ್ರಾಧಿಕಾರ (ಟ್ರಿ ಅಥಾರಿಟಿ) ಸಭೆಗಳನ್ನು ನಿಯಮಿತವಾಗಿ ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳ ರೆಂಬೆ, ಕೊಂಬೆ ತೆರವಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದೂ ಸಚಿವರು ಸೂಚಿಸಿದರು.


ಒಬ್ಬ ಮನುಷ್ಯ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂದು ಬೆಂಗಳೂರು ಕಾಂಕ್ರೀಟ್ ಕಾಡಾಗಿದ್ದು, ಇಲ್ಲಿ 7 ಜನರಿಗೆ 1 ಮರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಗೆ ಮುಂದಾಗಬೇಕು ಎಂದರು.


ಪ್ರತಿಯೊಬ್ಬರಿಗೂ ಆಮ್ಲ ಜನಕ ಬೇಕು, ಆದರೆ ತಮ್ಮ ಮನೆಯ ಮುಂದೆ ಗಿಡ ಇರಬಾರದು. ಇದರ ಎಲೆ ಉದುರಿದರೆ ಮನೆ ಮುಂದೆ ಕಸ ಆಗುತ್ತದೆ ಎನ್ನುತ್ತಾರೆ. ಇನ್ನು ಮನೆಯ ಸೌಂದರ್ಯಕ್ಕೆ ಅಥವಾ ಅಂಗಡಿಗಳ ಫಲಕ ಕಾಣುವುದಿಲ್ಲ ಎಂದು ಮರ ಕಡಿಯುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ವಿಷಾದಿಸಿದ ಅವರು, ಮನೆಗಳ ಮುಂದೆ ಇರುವ ಗಿಡಗಳ ಸುತ್ತ ಕಾಂಕ್ರೀಟ್ ಹಾಕದಂತೆ, ಮರಗಳನ್ನು ಅಕ್ರಮವಾಗಿ ಕಡಿಯದಂತೆ ಮನವಿ ಮಾಡಿದರು.


ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಉದ್ಯಾನ ನಗರ ಎಂದು ಖ್ಯಾತವಾಗಿತ್ತು. ಆದರೆ ಇಂದು ಎಲ್ಲಿ ನೋಡಿದರೂ ಮುಗಿಲೆತ್ತರ ಕಟ್ಟಡಗಳೇ ಕಾಣುತ್ತವೆ. ನಾವು ಹಸಿರು ಸಂರಕ್ಷಣೆಗೆ ಕ್ರಮ ವಹಿಸಲೇಬೇಕು. ಇದು ನಮ್ಮೆಲ್ಲರ ಹೊಣೆ. ವೃಕ್ಷ ಅಂದರೆ ಮರ ಯಾರು ವೃಕ್ಷವನ್ನು ಸಂರಕ್ಷಿಸುತ್ತಾರೋ, ವೃಕ್ಷ ಅವರನ್ನು ರಕ್ಷಿಸುತ್ತದೆ. ವೃಕ್ಷೋ… ರಕ್ಷತಿ ರಕ್ಷಿತಃ ಎಂದು ಹೇಳಬಹುದು. ನಾನು ಅರಣ್ಯ ಸಚಿವನಾಗಿ ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಮತ್ತು ವೃಕ್ಷ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದೇನೆ ಎಂದರು.


4000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ತೆರವು:
ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2041 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ ಕಳೆದ 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಬೆಲೆ ಬಾಳುವ 128 ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದು ವಿವರಿಸಿದರು.
ಇದೆ ಸಂದರ್ಭದಲ್ಲಿ ಅಪಾಯಕಾರಿ ಮರಗಳ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ವೀಕ್ಷಿಸಿದರು.

Related Articles

Back to top button