
ಪ್ರಗತಿವಾಹಿನಿ ಸುದ್ದಿ, ಶಿರಸಿ – ಉಗ್ರವಾದಿಗಳ ನೆಲೆಗಳ ಮೇಲೆ ಹಾಗೂ ಅವರ ಚಟುವಟಿಕೆಗಳ ಮೇಲೆ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಕರ್ನಾಟಕದಲ್ಲಿ ಉಗ್ರರ ಯಾವುದೇ ಚಟುಚಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಿಂದ ಉಗ್ರರ ಕುರಿತ ಮಾಹಿತಿ ಬಂದ ತಕ್ಷಣ ಮೂವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರೂ ಸೇರಿದಂತೆ ಅವರ ಎಲ್ಲಾ ಜಾಲಗಳನ್ನು ಭೇಧಿಸುವ ಕಾರ್ಯ ಆಗುತ್ತಿದೆ ಎಂದರು.
ಉಗ್ರರು ನಿರಂತರವಾಗಿ ಒಂದು ಕಡೆ ಇರುವುದಿಲ್ಲ. ತಾಣಗಳನ್ನು ಬದಲಿಸುತ್ತಿರುತ್ತಾರೆ. ಉಗ್ರರ ಹಿಡಿಯಲು ಶೋಧನೆ ಮಾಡಲಾಗುತ್ತಿದೆ. ಅಲ್ಲದೇ ಭಯೋತ್ಪಾದನೆ ಮಾಡುವ ಎಲ್ಲಾ ಶಕ್ತಿಗಳನ್ನು ನಮ್ಮ ಪೊಲೀಸರು ನಿಯಂತ್ರಿಸುತ್ತಾರೆ ಎಂದರು.
ಮಂಗಳೂರು ಗಲಭೆಯ ಕುರಿತು ಕುಮಾರಸ್ವಾಮಿ ಸಿಡಿ ಬಿಡಿಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಕಾಲದಲ್ಲಿ ಪೊಲೀಸರನ್ನು ಯಾವುದಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಕಾಲದಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಆದ ಕಾರಣ ಕುಮಾರಸ್ವಾಮಿ ಅವರು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಖಡಕ್ಕಾಗಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ