Kannada NewsKarnataka NewsLatest

*ಫೇಸ್ ಬುಕ್ ನಲ್ಲಿ ಪರಿಚಯಳಾದ ಮಹಿಳೆ; ಮದುವೆಯಾಗಿ 3 ತಿಂಗಳಲ್ಲೇ ಕೈಕೊಟ್ಟು ಪರಾರಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯಳಾದ ಮಹಿಳೆ ಜೊತೆ ಪ್ರೇಮ ಪಾಶಕ್ಕೆ ಸಿಲುಕಿದ ವ್ಯಕ್ತಿ ಮದುವೆಯಾದ ಬಳಿಕ ತಾನು ಮೋಸ ಹೋಗಿದ್ದು ಅರಿವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಫೇಸ್ ಬುಕ್ ನಲ್ಲಿ ಪರಿಚಯಳಾದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ ಸಂತೋಷ್ ಎಂಬ ವ್ಯಕ್ತಿ 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲೇ ಆಕೆಗೂ ಕೆಲಸ ಕೊಡಿಸಿದ್ದ. ಹೀಗೆ ಆರಂಭವಾದ ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿದೆ. ಬಳಿಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದಾರೆ. ಮಹಿಳೆಯ ಅಕ್ಕ-ಭಾವ ಇಬ್ಬರೂ ಮಹಿಳೆ ಮಾಡಿಸಲು ನಿರ್ಧರಿಸಿದ್ದಾರೆ. ಮದುವೆ ಮಾತುಕತೆಯಾಗುತ್ತಿದ್ದಂತೆ ಮಹಿಳೆ ಚಿನ್ನಾಭರಣ, ಮೊಬೈಲ್ ಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಾಳೆ.

ಮಹಿಳೆಯ ಪ್ರೀತಿಗಾಗಿ ಸಂತೋಷ್ ಒಡವೆ, ಎರಡು ಐಫೋನ್ ಗಳನ್ನು ಕೊಡಿಸಿದ್ದರಂತೆ. ಬಳಿಕ 2022ರ ನವೆಂಬರ್ ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಮದುವೆಯಾದ ಮೂರು ತಿಂಗಳಲ್ಲೇ ಹಣ, ಚಿನ್ನಾಭರಣ, ಮೊಬೈಲ್ ಗಳೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ. ಇದೀಗ ಪತಿ ಸಂತೋಷ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮದುವೆಯಾಗಿ ಮೂರು ತಿಂಗಳಾಗಿದ್ದರೂ ತಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವಿರಲಿಲ್ಲ. ಆಕೆಗೆ ಅದಾಗಲೇ ಒಂದು ಮದುವೆಯಾಗಿತ್ತು. ಆದರೆ ಈ ವಿಚಾರ ಮುಚ್ಚಿಟ್ಟು ತನ್ನೊಂದಿಗೆ ವಿವಾಹವಾಗಿದ್ದಳು. ತನಗೆ ಮೋಸ ಮಾಡುವ ಉದ್ದೇಶದಿಂದಲೇ ಮಹಿಳೆ ಮದುವೆಯಾಗಿದ್ದಾಗಿ ದೂರು ನೀಡಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ದೂರು ನೀಡಿದ್ದು, ಪೊಲೀಸರು ಮೂವರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button