Kannada NewsKarnataka NewsLatest

*ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳೇ ಎಚ್ಚರ…!*

ನಿಮ್ಮ ವಿರುದ್ಧ ದಾಖಲಾಗುತ್ತೆ ಕ್ರಿಮಿನಲ್ ಕೇಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ರಾಜಧಾನಿ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತಹ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಸಿದ್ದಾರೆ.

ತಂದೆ-ತಾಯಿಗಳನ್ನು ಅಥವಾ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಟ್ಟಿದ್ದರೆ ಅಂತಹ ಮಕ್ಕಳು ಈ ಕೂಡಲೇ ಪೋಷಕರನ್ನು ಕರೆದುಕೊಂಡು ಹೋಗುವಂತೆ ಖಡಕ್ ಸೂಚನೆ ನೀಡಿದ್ದಾರೆ. ಪೋಷಕರನ್ನು ನೋಡಿಕೊಳ್ಳಲು ಶಕ್ತರಾಗಿದ್ದರು ಕೂಡ ವೃದ್ಧಾಶ್ರಮಕ್ಕೆ ಇಂತಿಷ್ಟು ಎಂದು ಹಣ ಕೊಟ್ಟು ಮಕ್ಕಳು ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ವೃದ್ಧಾಶ್ರಮಗಳ ಮೇಲೆ ಪೊಲೀಸರು ನಿಗಾ ವಹಿಸಲು ಸೂಚಿಸಲಾಗಿದೆ.

ನಿನ್ನೆಯಷ್ಟೇ 80 ವರ್ಷದ ವೃದ್ಧ ತಾಯಿಯನ್ನು ಮಗಳು-ಅಳಿಯ ತಡರಾತ್ರಿ ಕಾರಿನಲ್ಲಿ ತಂದು ರಸ್ತೆ ಬದಿ ಮಲಗಿಸಿ ಹೋಗಿದ್ದ ಘಟನೆ ಬೆಂಗಳೂರಿನ ಆನೇಕಲ್ ಬಳಿ ನಡೆದಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೇ ವೃದ್ಧೆಯನ್ನು ಗಮನಿಸಿದ ಸ್ಥಳೀಯರು ಅವರನ್ನು ರಕ್ಷಿಸಿ ಉಪಹಾರ ನೀಡಿ, ಸ್ಥಳೀಯ ಆಶ್ರಮಕ್ಕೆ ಸೇರಿಸಿದ್ದರು.

ಮಗಳು-ಅಳಿಯ ತನಗೆ ಹೊಡೆದು, ಬಡಿದು ಕಾರಿನಲ್ಲಿ ಕರೆತಂದು ಇಲ್ಲಿ ಬಿಟ್ಟಿದ್ದಾರೆ. ಮತ್ತೆ ತಾನು ಅವರ ಬಳಿ ಹೋಗಲ್ಲ ಎಂದು ವೃದ್ಧೆ ಕಣ್ಣೀರಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಈ ಘಟನೆ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇನ್ಮುಂದೆ ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button