*ಬೆಳಗಾವಿಯಲ್ಲಿ ನ.30 ರಿಂದ ಮೊದಲ ಬಾರಿಗೆ ಮೈಸೂರು ದಸರಾ ವಸ್ತು ಪ್ರದರ್ಶನ ಮಾದರಿಯಲ್ಲಿ ವಸ್ತು ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೈಸೂರು ದಸರಾ ಸಂದರ್ಭದಲ್ಲಿ ಆಯೋಜಿಸಲಾಗುವ ವಸ್ತು ಪ್ರದರ್ಶನದಂತೆ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯೂಬ್ ಖಾನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ (ನ.24) ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸುವ ಉದ್ದೇಶದೊಂದಿಗೆ ಈ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರಕಾರ ಜನಸಾಮಾನ್ಯರ ಅಭ್ಯುಧೈಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಇವುಗಳ ಪರಿಣಾಮಕಾರಿಯಾಗಿ ಪ್ರಚಾರ ನೀಡುವದರ ಮೂಲಕ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವುದು ಈ ವಸ್ತು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದರು.
ಬೆಳಗಾವಿಯಲ್ಲಿ ನವೆಂಬರ 30 ರಿಂದ ಜನೇವರಿ 11 ರ ವರೆಗೆ ನಗರದ ಸಿ.ಪಿ.ಎಡ್. ಮೈದಾನದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ತಿಂಡಿ ತಿನಿಸು ಮಳಿಗೆಗಳು, ಮಕ್ಕಳಿಗೆ ಆಟಿಕೆಗಳು, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಸರ್ಕಾರದ ಹಲವು ಇಲಾಖೆಯ ಯೋಜನೆಗಳು, ಕಾರ್ಯಕ್ರಮಗಳು ಸಾಧನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳನ್ನು ಪ್ರಚುರ ಪಡಿಸುವ ಸಂಬಂಧ ಸಹಕಾರಿ ಹಾಲು ಒಕ್ಕೂಟ ಬೆಳಗಾವಿ ಜಿಲ್ಲೆ ಬೆಳಗಾವಿ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ, ಇಲಾಖೆಗಳು ಸೇರಿ ಒಂದು ಮಳಿಗೆ, ಆಡಕರ್ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL), ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆ,ಕಾರ್ಮಿಕ ಇಲಾಖೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, (HESCOM),ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಗಳ ವತಿಯಿಂದ 13 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.
ಮುಖ್ಯದ್ವಾರದಿಂದ ಮೈದಾನದ ಸುತ್ತಲು ವಿಶೇಷ ಮಾದರಿಯ ವಿದ್ಯುತ್ ದೀಪ, ಬಣ್ಣ ಬಣ್ಣದ ದೀಪಾಲಂಕಾರಗಳು ಹಾಗೂ ಪ್ರಾಣಿಯ ಮಾದರಿಯಲ್ಲಿ ದೀಪಾಲಂಕಾರಗಳನ್ನು ಹಾಕಲಾಗುತ್ತಿದೆ. ಮಕ್ಕಳಿಗೆ ಕಿನ್ನರ ಪ್ರದರ್ಶನ, ವಿಶೇಷ ಕಾರ್ಯಕ್ರಮ ಇಂಟರಾಕ್ಟಿವ್ ಪಾರ್ಕ್ ಮಕ್ಕಳ ಮನಸೂರೆ ಗೊಳಿಸುವ ಮನೋರಂಜನಾತ್ಮಕ ಅತ್ಯದ್ಭುತ ತಂತ್ರಜ್ಞಾನವನ್ನು ಒಳಗೊಂಡಿರು. 3ಡಿ ಹಾಗೂ ಇಂಟರಾಕ್ಟಿವ್ ಪಾರ್ಕ್ ಹಾಗೂ ಮಕ್ಕಳಿಗೆ ಹೊಸ ಸಂವೇದನಾಶೀಲ 3ಡಿ ತಂತ್ರಜ್ಞಾನ ಒಳಗೊಂಡಿರುವ ವರ್ಚುವಲ್ ಪಾರ್ಕ್ ನಿರ್ಮಿಸಲಾಗುವದು. ಈ ಕಾರ್ಯಕ್ರಮದ ಮೂಲ ಉದ್ದೇಶ ನಲವಿನೊಂದಿಗೆ ಕಲಿಕೆಯ ಪ್ರಯತ್ನ ಮಾಡಲಾಗಿದೆ ಹಾಗೂ ಮೇರ ಮೇಡ್ ಶೋ (Mermaid show) ಪ್ರದರ್ಶಿಸಲಾಗುವುದು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ರವಿ ಬಂಗಾರಪ್ಪನವರ, ವಾರ್ತಾ ಮತ್ತು ಸಾವನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಸಿ.ಇ.ಓ ರುದ್ರೇಶ್, ರಘುರಾಜ್ ಅರಸ ಉಪಸ್ಥಿತರಿದ್ದರು.



