Karnataka NewsLatest

*ಪತ್ರಿಕಾ ವಿತರಕರೇ ಪತ್ರಿಕೋದ್ಯಮದ ನರಮಂಡಲ: ಕೆ.ವಿ.ಪ್ರಭಾಕರ್*

ಪ್ರಗತಿವಾಹಿನಿ ಸುದ್ದಿ: ಪತ್ರಿಕಾ ವಿತರಕರೇ ಪತ್ರಿಕೋದ್ಯಮ ನರಮಂಡಲ ಎಂದು ಕೆ.ವಿ.ಪ್ರಭಾಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಪತ್ರಿಕಾ ವಿತರಕರ ನಾಲ್ಕನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹೃದಯಕ್ಕೆ, ಮೆದುಳಿಗೆ ರಕ್ತ ಆಕ್ಸಿಜನ್ ಸಪ್ಲೈ ಮಾಡೋದು ಈ ನರಮಂಡಲವೇ. ಹೀಗೆ ಪತ್ರಿಕೋದ್ಯಮದ ನರಮಂಡಲ ಪತ್ರಿಕಾ ವಿತರಕರು ಎಂದರು.

ನ್ಯೂಸ್ ರೂಮಲ್ಲಿ ಲೇಔಟ್ ಆಗಿ, ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಣವಾಗುವ ಪತ್ರಿಕೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ಓದುಗರ ಮನೆ ಬಾಗಿಲಿಗೆ ತಲುಪಿಸಲು ಪತ್ರಿಕಾ ವಿರತಕರ ನರ ಮಂಡಲ ವ್ಯವಸ್ಥಿತವಾಗಿರಬೇಕು. ನ್ಯೂಸ್ ರೂಮುಗಳು ಎಷ್ಟೇ ಹೈಟೆಕ್ ಆಗಿದ್ದರೂ, ಪ್ರಿಂಟಿಂಗ್ ಪ್ರೆಸ್ ಗಳು ಎಷ್ಟೇ ಅಡ್ವಾನ್ಸ್ ಆಗಿದ್ದರೂ ಪತ್ರಿಕಾ ವಿತರಕರ ನರಮಂಡಲ ಸರಿಯಾಗಿ ಇಲ್ಲ ಅಂದರೆ ಪ್ರಯೋಜನವಿಲ್ಲ ಎಂದು ವಿಶ್ಲೇಷಿಸಿದರು.

ಪತ್ರಿಕಾ ವಿತರಕರು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನಲೆಯುಳ್ಳವರಾಗಿದ್ದು, ವಿದ್ಯಾರ್ಥಿಗಳಿಂದ ವಯಸ್ಕರವರೆಗೂ ಪ್ರತಿನಿತ್ಯ ಸೂರ್ಯ ಉದಯಿಸುವ ಮೊದಲೇ ಚಳಿ, ಮಳೆ ಎನ್ನದೆ ಪತ್ರಿಕೆಯನ್ನು ಮನೆ ಮನೆ ತಲುಪಿಸುತ್ತಾರೆ.

ಪತ್ರಿಕೆ ವಿತರಕ ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿಮೆಯಲ್ಲೂ ತೊಡಗುತ್ತಾರೆ. ಇದು ಅವರ ಕುಟುಂಬಕ್ಕೆ ಮತ್ತು ನಾಡಿನ ಆರ್ಥಿಕತೆಗೂ ಅವರ ಪಾಲಿನ ಕೊಡುಗೆ ಕೊಟ್ಟಂತೆ ಎಂದರು.

ಪತ್ರಿಕೆ ವಿತರಕರ ಸಮಗ್ರ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ ಸ್ಥಾಪನೆ ಮಾಡಬೇಕು. ಉಚಿತ ಪಡಿತರ, ವಿದ್ಯಾರ್ಥಿ ವೇತನ ನೀಡಬೇಕು. ಜೀವವಿಮೆ, ಹೆಲ್ತ್ ಕಾರ್ಡ್ ನೀಡಬೇಕು. ಬೈಕ್/ ಸೈಕಲ್ ಖರೀದಿಸಲು ಶೇ.50 ರಷ್ಟು ರಿಯಾಯ್ತಿ ಒದಗಿಸಬೇಕು, ಜರ್ಕೀನ್ ಗಳನ್ನು ಒದಗಿಸಬೇಕು. ಜೀವ ವಿಮೆ ಮಾಡಿಸಿಕೊಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗಳಿವೆ.

ಎಲ್ಲವನ್ನೂ ಸರ್ಕಾರವೇ ನೇರವಾಗಿ ಒದಗಿಸುವುದು ಕಷ್ಟ. ಹೀಗಾಗಿ ನಾನು ಕೊಡುವ ಸಲಹೆ ಅಂದರೆ…ಮಾಧ್ಯಮ‌ ಸಂಸ್ಥೆಗಳು ಖಾಸಗಿ ಕಂಪನಿಗಳ ಸಹಯೋಗದಲ್ಲಿ CSR fund ಬಳಸಿಕೊಂಡು ಈ ಬೇಡಿಕೆಗಳಲ್ಲಿ ಬಹಳಷ್ಟನ್ನು ಈಡೇರಿಸಬಹುದು.

ನಾನೂ ಕೂಡ ಮಾಧ್ಯಮ ಸಂಸ್ಥೆಗಳು, ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಹಯೋಗದಲ್ಲಿ CSR Fund ನೆರವಿನಿಂದ ಏನೆಲ್ಲಾ ಮಾಡಬಹುದು ಎನ್ನುವ ಬಗ್ಗೆ plan ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇವೆಲ್ಲಾ ಸಾಕಾರಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ ಎನ್ನುವ ಮಾತುಗಳನ್ನಾಡಿದರು.

ತರಳಬಾಳು ಶ್ರೀಗಳಾಗದ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಿಆರ್ ಎಲ್ ಸಮೂಹ ಸಂಸ್ಥೆಗಳ ಮಾಲೀಕರಾದ ವಿಜಯ ಸಂಕೇಶ್ವರರು ಸೇರಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button