
“ಅನಗೋಳ” ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಮಳೆಗಾಲದಲ್ಲಿ ಸೋಂಕುಗಳು ಸಾಮಾನ್ಯವಾಗಿದ್ದು ಅವುಗಳಿಗೆ ಅಂಜದೇ, ಅವುಗಳು ಬಾರದೇ ಇರುವಂತೆ ನೋಡಿಕೊಳ್ಳುವುದೇ ಇಂದಿನ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಮಾತನಾಡುತ್ತಿದ್ದರು. ಅವರು ಇಂದು ನಗರದ ಅನಗೋಳದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಅತೀವೃಷ್ಟಿಯಿಂದಾಗಿ ನಗರದ ವಿವಿಧ ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಲ್ಲಿ ನೀರು ಬಂದು ರೋಗಗಳಿಗೆ ದಾರಿಮಾಡಿಕೊಡುತ್ತದೆ. ಆದ್ದರಿಂದ ಮಳೆ ನೀರು ಮನೆಯಿಂದ ಹೊರಹೋದಮೇಲೆ ಮನೆಯನ್ನು ಸ್ವಚ್ಚಮಾಡಿರಿ, ಸೊಳ್ಳೆಗಳು ಅಧಿಕಗೊಳ್ಳದಂತೆ ಎಚ್ಚರಿಕೆ ವಹಿಸಿರಿ ಎಂದು ತಿಳುವಳಿಕೆ ನೀಡಿದರು.
ಶಿಬಿರದಲ್ಲಿ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ , ಡಾ. ಸೌದಾಗರ, ಡಾ. ಸಂತೋಷಕುಮಾರ ಕರಮಸಿ ನಾಗರಿಕರನ್ನು ತಪಾಸಿಸಿ ಔಷಧಿಗಳನ್ನು ವಿತರಿಸಿದರು. ಬೆಳಗಾವಿ ಜಿಲ್ಲಾ ರಿಟ್ಯೇಲ್ ಪಾರ್ಮಸಿ ಅಸೋಸಿಯೇಷನ್, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು. ಶಿಬಿರದಲ್ಲಿ 250 ಕ್ಕೂ ಅಧಿಕ ರೋಗಿಗಳನ್ನು ತಪಾಶಿಸಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ