Politics

*ಕಾಂಗ್ರೆಸ್ ಪಕ್ಷದಿಂದ ‘ಗಾಂಧಿ ನಡಿಗೆʼ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷತೆ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು 100 ವರ್ಷಗಳಾಗಿವೆ. ಈ ನೆನಪಿಗೆ ರಾಜ್ಯಾದ್ಯಂತ ʼಗಾಂಧಿ ನಡಿಗೆʼ, ʼಸ್ವಚ್ಚತಾ ಪ್ರತಿಜ್ಞಾವಿಧಿʼ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಇಡೀ ವರ್ಷ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಉದ್ದಗಲಕ್ಕೂ ಅಕ್ಟೋಬರ್ 2 ರ ಬೆಳಿಗ್ಗೆ 11 ಗಂಟೆಗೆ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆಯಿಂದ, ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ತನಕ ʼಗಾಂಧಿ ಜ್ಯೋತಿ ಪಾದಯಾತ್ರೆʼ ನಡೆಸಲಾಗುವುದು” ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ

“ಪಾದಯಾತ್ರೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಬ್ಲಾಕ್ ಮಟ್ಟದಲ್ಲಿ ”ಗಾಂಧಿ ನಡಿಗೆ” ಕಾರ್ಯಕ್ರಮ ನಡೆಯುತ್ತದೆ. ಎಲ್ಲಾ ಕೇಂದ್ರಗಳ ಕಾರ್ಯಕ್ರಮ ಜೂಮ್ ಮೂಲಕ ಏಕಕಾಲದಲ್ಲಿ ಬಿತ್ತರಗೊಳ್ಳಲಿದೆ. ನೇರವಾಗಿ ಹಾಗೂ ಜೂಮ್ ಮೂಲಕ ಸ್ವಚ್ಚತೆ ಹಾಗೂ ಗಾಂಧೀಜಿಯವರ ವಿಚಾರಗಳ ಬಗ್ಗೆ ಪ್ರತಿಜ್ಞಾ ವಿಧಿ ಭೋದನೆ ಮಾಡಲಾಗುವುದು” ಎಂದು ಹೇಳಿದರು.

ಜಂಟಿ ಅಧಿವೇಶನ ಹಾಗೂ ಶತಾಬ್ದಿ ಕಾರ್ಯಕ್ರಮ

ಬೆಳಗಾವಿಯಲ್ಲಿ 1924 ರ ಡಿಸೆಂಬರ್ ನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಜವಾಬ್ದಾರಿ ತೆಗದುಕೊಂಡರು. ಆದ ಕಾರಣಕ್ಕೆ ಡಿಸೆಂಬರ್ ಕೊನೆ ವಾರದಲ್ಲಿ ಸರ್ಕಾರದಿಂದ ವಿಧಾನಸಭೆ ಜಂಟಿ ಅಧಿವೇಶನ ನಡೆಸಲಾಗುವುದು. ಬೆಳಗಾವಿ ಕಾಂಗ್ರೆಸ್ ಅಧಿವೇಶನ 100 ವರ್ಷಗಳ ಹಿಂದೆ ನಡೆದ ರೂಪುರೇಷೆಯಲ್ಲೇ ಪಕ್ಷದ ಅಧಿವೇಶನವನ್ನೂ ಪ್ರತ್ಯೇಕವಾಗಿ ನಡೆಸಲಾಗುವುದು. ಗಾಂಧೀಜಿ ಅವರ ತತ್ವ, ಸಿದ್ಧಾಂತ, ಸಂದೇಶ, ಕೊಡುಗೆಗಳನ್ನು ಮೆಲುಕು ಹಾಕುವ ಶತಾಬ್ದಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸಮಿತಿ ಸಲಹೆ ನೀಡಿದೆ” ಎಂದು ಹೇಳಿದರು.

ಆಯಾಯ ಕ್ಷೇತ್ರಗಳ ಶಾಸಕರ ಭಾಗವಹಿಸುವಿಕೆ ಕಡ್ಡಾಯ

136 ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ವಿಧಾನಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಕಾಯಕ್ರಮ ನಡೆಸಿಕೊಡಬೇಕು. ಕೇಂದ್ರ ಕಚೇರಿಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುವುದು” ಎಂದು ಹೇಳಿದರು.

ಸರ್ಕಾರದಿಂದ ‘ಗಾಂಧಿ ನಡಿಗೆ’ ಕಾರ್ಯಕ್ರಮ

ಅಕ್ಟೋಬರ್ 2 ರಂದು ಬೆಳಿಗ್ಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆಯ ತನಕ ಸುಮಾರು 1.5 ಕಿಮೀ ದೂರ ʼಗಾಂಧಿ ನಡಿಗೆʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸುಮಾರು 500 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಜೂಮ್ ಮೂಲಕ ಇತರೇ ವಿದ್ಯಾರ್ಥಿಗಳಿಗೆ ಸ್ವಚ್ಚತಾ ಅಭಿಯಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು” ಎಂದರು.

“ರಾಜ್ಯದ ಉದ್ದಗಲಕ್ಕೂ ಈ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಯಾಯ ಕ್ಷೇತ್ದದ ಶಾಸಕರು ಸ್ಥಳೀಯ ಕಾರ್ಯಕ್ರಮಗಳ ನೇತೃತ್ವವಹಿಸುತ್ತಾರೆ. ಇಲ್ಲಿಯೂ ಸಹ ಒಂದು ಕಿಮೀ ದೂರ ಪಾದಯಾತ್ರೆ ನಡೆಸಲಾಗುವುದು” ಎಂದರು.

ಬಿಳಿ ಟೋಪಿ, ವಸ್ತ್ರ ಬಳಸಲು ಮನವಿ

“ಗಾಂಧಿ ಅವರು ಜವಾಬ್ದಾರಿ ತೆಗೆದುಕೊಂಡ ನಂತರ ದೇಶದ ಸ್ವಾತಂತ್ಯ ಹೋರಾಟಕ್ಕೆ ಹೊಸ ರೂಪುರೇಷೆ, ಹುರುಪು ಬಂದಿತು. ಅವರ ತತ್ವ, ಆದರ್ಶಗಳ ಬಗ್ಗೆ ಅರಿವನ್ನು ಮೂಡಿಸಬೇಕು. ಪಾದಯಾತ್ರೆಯಲ್ಲಿ ಭಾಗವಹಿಸುವವರು ಬಿಳಿ ಟೋಪಿ ಹಾಗೂ ವಸ್ತ್ರವನ್ನು ತೊಟ್ಟು ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಲಾಗಿದೆ.

ರಾಷ್ಟ್ರಧ್ವಜ ಬಳಕೆಗೆ ಸೂಚನೆ

ಸರ್ಕಾರಿ ಕಾರ್ಯಕ್ರಮವಾದ ಕಾರಣಕ್ಕೆ ಚರಕವಿರುವ ಕಾಂಗ್ರೆಸ್ ಧ್ವಜ, ಕನ್ನಡ ಧ್ವಜ, ಇತರೇ ಪಕ್ಷಗಳ ಧ್ವಜಗಳ್ನು ಬಳಸದೆ ರಾಷ್ಟ್ರಧ್ವಜ ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ” ಎಂದು ಹೇಳಿದರು.

“ನಾನು ಕೆಪಿಸಿಸಿ ಅಧ್ಯಕ್ಷನಾದ ನಂತರ ಅನೇಕ ಐತಿಹಾಸಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದೇವೆ. ಚುನಾವಣಾ ಮುಂಚಿತವಾಗಿ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಸಂಘಟಿಸಲಾಯಿತು. ನಂತರ ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ಈ ರಾಜ್ಯಕ್ಕೆ ಅಂಟಿದ್ದ ಕೊಳೆಯನ್ನು ಗುಡಿಸಲಾಯಿತು. ಆ ನಂತರ ಈ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿದ್ದು ಇತಿಹಾಸ” ಎಂದರು.

ಮಹಾತ್ಮ ಗಾಂಧಿ ಅವರು ಈ ದೇಶದ ಆಸ್ತಿ. ಜಾತಿ, ಧರ್ಮ ಬೇದ ಭಾವಗಳನ್ನು ಬಿಟ್ಟು ಒಂದೇ ಭಾರತ ಎನ್ನುವ ಕಲ್ಪನೆಯನ್ನು ಕೊಟ್ಟು ಹೋಗಿದ್ದಾರೆ. ಇಂತಹ ಕಾರ್ಯಕ್ರಮ ರೂಪಿಸುವ ಪುಣ್ಯ ನಮಗೆ ಸಿಕ್ಕಿದೆ. ಗಾಂಧಿ ಅವರ ಚಿಂತನೆಗಳು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಇದರಿಂದ ದೊರೆಯಲಿದೆ” ಎಂದು ತಿಳಿಸಿದರು.

“ನಾನು, ವೀರಪ್ಪ ಮೊಯ್ಲಿ ಅವರು, ಎಚ್.ಕೆ.ಪಾಟೀಲ್ ಅವರು ಹಾಗೂ ಬಿ.ಎಲ್.ಶಂಕರ್ ಅವರನ್ನು ಒಳಗೊಂಡ 60 ಜನ ಸದಸ್ಯರು ಇರುವ ತಂಡವನ್ನು ರಚಿಸಲಾಯಿತು. 100 ವರ್ಷಗಳ ಸಂಭ್ರಮಾಚರಣೆ ರೂಪುರೇಷೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಈ ಸಮಿತಿ ಸಲಹೆ, ಸೂಚನೆಗಳನ್ನು ನೀಡಿದೆ. ಮುಖ್ಯಮಂತ್ರಿಗಳು ಹತ್ತಾರು ಸಭೆ ನಡೆಸಿ ಕಾರ್ಯಕ್ರಮ ರೂಪುರೇಷೆ ತಯಾರಿಸಿದ್ದಾರೆ” ಎಂದು ಹೇಳಿದರು.

“ಪಕ್ಷ ಬೇದ ಮರೆತು ಸರ್ಕಾರದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೆಕು ಎಂದು ಮನವಿ ಮಾಡಲಾಗಿದೆ. ಗ್ರಾಮೀಣಾಭಿವೃದ್ದಿ, ಕನ್ನಡ ಮತ್ತು ಸಂಸ್ಕೃತಿ, ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ಕಾರ್ಯಕ್ರಮ ರೂಪಿಸುತ್ತಾರೆ” ಎಂದು ತಿಳಿಸಿದರು.

ಇಂದಿರಾ ಕಾಂಗ್ರೆಸ್ ಹಾಗೂ ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿಗೆ ಈ ದೇಶದ ಇತಿಹಾಸ ತಿಳಿದಿಲ್ಲ. ನೆಹರು ಅವರ ಕುಟುಂಬ ಸ್ವಾತಂತ್ರಯ ಹೋರಾಟದಲ್ಲಿ ಭಾಗವಹಿಸಿದೆ. ಇಂದಿರಾ ಗಾಂಧಿ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿಗೆ ಹೋರಾಟದ ಮಹತ್ವ ಗೊತ್ತಿಲ್ಲ” ಎಂದು ಕುಟುಕಿದರು.

ಕಾಂಗ್ರೆಸ್ ಅಂದರೆ ಗಾಂಧಿಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದರೆ ಬಿಜೆಪಿ ಎನ್ನುವಂತಾಗಿದೆಯೇ ಎಂದು ಕೇಳಿದಾಗ, “ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಎಲ್ಲರನ್ನೂ ನಾವು ಗೌರವದಿಂದ ಕಾಣುತ್ತೇವೆ. ಕರ್ನಾಟಕದ ನೆಲದಲ್ಲಿ ಗಾಂಧಿ ಅವರು ನೇತೃತ್ವವಹಿಸಿದ ಕಾರಣಕ್ಕೆ ಈ ವಿಶೇಷ ಕಾರ್ಯಕ್ರಮ. ಕರ್ನಾಟಕದವರಾಗಿ ಒಟ್ಟಿಗೆ ಸಂಭ್ರಮಿಸೋಣ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button