Latest

*ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದಿಂದಲೇ ಜಿಗಿದು ಯುವತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರಿನ ದೇವರ ಕಾಲೋನಿಯಲ್ಲಿ ನಡೆದಿದೆ.

19 ವರ್ಷದ ಅನುರಾಧಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಅನುರಾಧಾ, ವಿನಯ್ ರೆಡ್ಡಿ ಎಂಬುವವನನ್ನು ಪ್ರೀತಿಸಿದ್ದಳು. ಜೂನ್ 20ರಂದು ಇಬ್ಬರೂ ಮಾರ್ಕೆಟ್ ಯಾರ್ಡ್ ಠಾಣೆಗೆ ಬಂದು ತಮಗೆ ರಕ್ಷಣೆ ನೀಡುವಂತೆ ಕೋರಿದ್ದರು. ಈ ವೇಳೆ ಯುವಕ ವಿನಯ್ ರೆಡ್ಡಿ ಯುವತಿಯನ್ನು ವಿವಾಹವಾಗುವುದಾಗಿ ಒಪ್ಪಿದ್ದ. ಯುವಕನ ಮಾತು ನಂಬಿದ ಯುವತಿ, ಪೋಷಕರ ಜೊತೆ ಹೋಗುವುದಿಲ್ಲ ಎಂದು ಪೊಲೀಸರಿಗೆ ಹೇಳಿದ್ದಳು. ಹಾಗಾಗಿ ಪೊಲೀಸರು ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು.

ಆದರೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದ ಯುವಕ ವಿನಯ್ ರೆಡ್ದಿ, ಯುವತಿಗೆ ತಾನು ಮದುವೆಯಾಗಲ್ಲ ಎಂದು ಹೇಳಿದ್ದಾನೆ. ಇದರಿಂದ ಯುವತಿ ಆಘಾತಕ್ಕೊಳಗಾಗಿದ್ದಾಳೆ. ಯುವಕನ ಮಾತು ನಂಬಿ ಪೋಷಕರಿಂದಲೂ ದೂರಾಗಿದ್ದಾಳೆ. ಯುವಕ ಪ್ರೀತಿಸಿ ಕೈಕೊಟ್ಟ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದ ಯುವತಿ ಅನುರಾಧಾ, ಮಹಿಳಾ ಸಾಂತ್ವನ ಕೇಂದ್ರದ ಮೊದಲ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯುವತಿ ಕಟ್ಟಡದಿಂದ ಜಿಗದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಟ್ಟಡದಿಂದ ಜಿಗಿದ ಯುವತಿಯ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಯುವತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಯುವತಿಗೆ ಕೈಕೊಟ್ಟ ಆರೋಪಿ ವಿನಯ್ ರೆಡ್ದಿಗಾಗಿ ಪಶ್ಚಿಮ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button