*ಲಿಂಗನಮಠದಲ್ಲಿ ಬೆಳವಡಿ ಮಲ್ಲಮ್ಮ ಜ್ಯೋತಿಗೆ ಅದ್ಧೂರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳಾ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆ *ಬೆಳವಡಿ ಮಲ್ಲಮ್ಮ ಜ್ಯೋತಿಗೆ ಲಿಂಗನಮಠದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಉತ್ಸವದ ಜ್ಯೋತಿಯು ಮಲ್ಲಮ್ಮನ ಹುಟ್ಟೂರು ಶಿರಸಿ ತಾಲೂಕಿನ ಸೊಂದಾ ಗ್ರಾಮದಿಂದ ಸೊಂದಾ, ಶಿರಸಿ, ಯಲ್ಲಾಪುರ, ಹಳಿಯಾಳ, ಅಳ್ನಾವರ ಮಾರ್ಗದ ಮೂಲಕ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಡಿಗ್ರಾಮವಾದ *ಲಿಂಗನಮಠಕ್ಕೆ ಬುಧವಾರ ಸಂಜೆ ಆಗಮಿಸಿತು.
ಚನ್ನಬಸವೇಶ್ವರ ದೇವಸ್ಥಾನದ ಎದುರುಗಡೆ ತಾಲೂಕಾಡಳಿತ ಖಾನಾಪುರ, ಗ್ರಾಪಂ ಲಿಂಗನಮಠ, ಕರವೇ ಘಟಕ ಹಾಗೂ ಗ್ರಾಮದ ಕನ್ನಡಾಭಿಮಾನಿಗಳಿಂದ ವೀರಜ್ಯೋತಿಗೆ ಸ್ವಾಗತ ಕೋರಲಾಯಿತು.
ಭಕ್ತಿಗೀತೆಗಳನ್ನು ಹಾಡಿ, ಪೂಜೆ ಸಲ್ಲಿಸಿ, ನಮನ ಸಲ್ಲಿಸಿ ಲಿಂಗನಮಠ ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ ಅವರು ಬರಮಾಡಿಕೊಂಡರು.
ತದನಂತರ ಬೆಳವಡಿ ಮಲ್ಲಮ್ಮನ ಜ್ಯೋತಿಯ ಬಗ್ಗೆ ಗ್ರಾಪಂ ಪರವಾಗಿ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ ಹಾಗೂ ತಾಲೂಕಾಡಳಿತ ವತಿಯಿಂದ ಬೀಡಿ ಕಂದಾಯ ನಿರೀಕ್ಷಕ ಭರಮಾನಿ ಶಿಮಾನಿ ಅವರು ಮಾತನಾಡಿದರು.
ತದನಂತರ ವೀರಜ್ಯೋತಿಯು ಲಿಂಗನಮಠ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂದಿನ ಗ್ರಾಮವಾದ ಕಕ್ಕೇರಿಗೆ ಸಾಗಿತು.
ಈ ಸಂಧರ್ಭದಲ್ಲಿ ಲಿಂಗನಮಠ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ್ ಮಾಟೊಳ್ಳಿ, ಪಿಡಿಒ ಕಾವೇರಿ ಹಿಮಕರ, ಗ್ರಾಮ ಲೆಕ್ಕಾಧಿಕಾರಿ ಪರುಶುರಾಮ ಕೆಸರೊಳ, ಕರವೇ ತಾಲೂಕಾ ಸಂಚಾಲಕ ಪಾಂಡುರಂಗ ಮಿಟಗಾರ, ಗ್ರಾಮದ ಮುಖಂಡರಾದ ಶಿವಾನಂದ ಪಾಟೀಲ, ಅಶೋಕ ಮಾಟೊಳ್ಳಿ, ಬಸನಗೌಡ ಪಾಟೀಲ, ಬಸವರಾಜ ನಾಯಕ, ಈರಣ್ಣ ಮಾಟೊಳ್ಳಿ, ಬಸಪ್ಪಾ ಮೀರಾಶಿ, ಶಿವಾನಂದ ಬಾಗೇವಾಡಿ, ರಾಜು ಸಂಗೊಳ್ಳಿ, ಅರುಣ ಬಿಜಾಪುರ, ಬಸಪ್ಪ ಬೊಗುರ, ಗೋಡಗೇರಿ ಸರ, ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಪ್ರಧಾನಗುರುಗಳು, ಶಿಕ್ಷಕರು ಮತ್ತು ಮುದ್ದುಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಗ್ರಾಮಸ್ಥರ ಆಕ್ರೋಶ:
ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿಯು ಗಡಿ ಜಿಲ್ಲೆ ಬೆಳಗಾವಿಗೆ ಲಿಂಗನಮಠ ಗ್ರಾಮದ ಮೂಲಕ ಪಾದಾರ್ಪಣೆ ಮಾಡಿತು. ಈ ಸಂದರ್ಭದಲ್ಲಿ ತಾಲೂಕಾ ಆಡಳಿತದ ಹಿರಿಯ ಅಧಿಕಾರಿಗಳಾದ ತಹಶೀಲ್ದಾರರು ಸ್ವಾಗತ ಮಾಡಬೇಕಿತ್ತು. ಆದರೆ ಇನ್ನೂ ತಾಲೂಕಿಗೆ ಬಂದು ಅಧಿಕಾರ ಸ್ವೀಕರಿಸದೆ ಇರುವುದರಿಂದ, ಉಪ ತಹಶೀಲ್ದಾರರಾದ ಬಿಡಿ ಹೋಬಳಿಯ ರೋಹಿತ ಬಡಚಿಕರ್ ಅವರು ಬಂದು ಬೆಳವಡಿ ಮಲ್ಲಮ್ಮ ಉತ್ಸವ ಜೊತಿಗೆ ಸ್ವಾಗತ ಮಾಡಬೇಕಿತ್ತು. ಅವರು ಬಾರದೇ ಇದ್ದು ತಮ್ಮ ಕರ್ತವ್ಯ ಲೋಪವೆಸಗಿದ್ದಾರೆಂದು ಲಿಂಗನಮಠ ಗ್ರಾಮದ ಕನ್ನಡ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇದರ ಜೊತೆಗೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ