Kannada NewsLatest

ದೇವದಾಸಿ ಪದ್ಧತಿ ನಿವಾರಣೆಗೆ ಪಣ ತೊಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಏಡ್ಸ್‌ ಸೋಂಕಿತರನ್ನು ಮನೆ, ಸಮಾಜದಲ್ಲಿ ಕೀಳಾಗಿ ಕಾಣುವ ಪ್ರವೃತ್ತಿ ಇಂದು ನಾವು ಕಾಣುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿದ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ ಅವರ ವಿಧಾನ ಪರಿಷತ್‌ನ ನಿಧಿಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ಕಟ್ಟಡ ಏಡ್ಸ್‌ ಸೋಂಕಿತ ಮಹಿಳೆಯರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚೆಸಲು ಮತ್ತು ವಾಸ್ತವ್ಯ ಇರಲು ಅನುಕೂಲವಾಗಿದೆ. ಇದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ರೋಗ ಮೊದಲು 1981 ರಲ್ಲಿ ಅಮೇರಿಕಾದಲ್ಲಿ ಪತ್ತೆಯಾಯಿತು. ಭಾರತದಲ್ಲಿ 1986ರಲ್ಲಿ ತಮಿಳನಾಡಿನಲ್ಲಿ ಪತ್ತೆಯಾಯಿತು. ನಂತರ ನಮ್ಮ ಕರ್ನಾಟಕದಲ್ಲಿ 1988 ರಲ್ಲಿ ಸವದತ್ತಿಯಲ್ಲಿ ಮೊದಲ ಬಾರಿಗೆ ಹೆಚ್.ಐ.ವಿ ಪತ್ತೆಯಾದ ಪ್ರಕರಣ ವರದಿಯಾಗಿದೆ. ಆ ಸಂದರ್ಭದಲ್ಲಿ ಮಾಧ್ಯಮಗಳ ಸಂಖ್ಯೆ ಕಡಿಮೆಯಾಗಿತ್ತು ಎಂದು ತಿಳಿಸಿದರು.

ಏಡ್ಸ್‌ ರೋಗಕ್ಕೆ ಸೋಂಕಿತರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು, ಈ ರೋಗ ನಿವಾರಣೆಗೆ ವಿಶ್ವಸಂಸ್ಥೆ ಕೂಡ ಪ್ರಯತ್ನ ನಡೆಸಿದೆ ಎಂದು ತಿಳಿಸಿದ ಅವರು, ಅಥಣಿ ತಾಲೂಕಿನಲ್ಲಿ ಬಿ.ಎಲ್.‌ ಪಾಟೀಲ ಅವರ ವಿಮೋಚನಾ ಸಂಸ್ಥೆ ದೇವದಾಸಿಯರ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ದೇವದಾಸಿಯರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ದೇವದಾಸಿ ಪದ್ಧತಿ ತಡೆಯಲು ಮೊದಲು ವಿರೋಧವಾಗುತ್ತಿತ್ತು. ಆದರೆ ಇವತ್ತು ಕಾನೂನಿನ ಪ್ರಕಾರ ದೇವದಾಸಿ ಪದ್ದತಿ ತಡೆಯಲು ಸಾಕಷ್ಟು ಅವಕಾಶಗಳಿದ್ದು, ಈ ಪದ್ದತಿ ಹೋಗಲಾಡಿಸಿ ಎಂದು ಸಲಹೆ ನೀಡಿದರು.

ಅನಿಷ್ಟ ಪದ್ದತಿ ಬಿಟ್ಟು ದೇವದಾಸಿಯರು ಒಂದಾದರೆ ಮುಂದಿನ ದಿನಗಳಲ್ಲಿ ನಿಮಗೆ (ಎನ್‌ ಜಿ ಓ)ಗಳ ಮೂಲಕ ಉದ್ಯೋಗ ಕಲ್ಪಿಸಲಾಗುವುದು ಎಂದ ಅವರು, ಮೂಢನಂಬಿಕೆಗಳನ್ನು ಬಿಟ್ಟು ನೀವು ಬದುಕಬೇಕು. ಆಗ ಮಾತ್ರ ಆರ್ಥಿಕ ಪ್ರಗತಿ ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.

ಶಕ್ತಿ ಏಡ್ಸ್‌ ಸಂಘದ ಸದಸ್ಯರು ಈಗಾಗಲೇ ನಮ್ಮ ಮಾನವ ಬಂಧುತ್ವ ವೇದಿಕೆ ಜತೆ ಗೂಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ. ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅನಾಥ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚತ್ತಿಸಘಡ ರಾಜ್ಯದಲ್ಲಿ 15 ವರ್ಷದಲ್ಲಿ ಹನ್ನೊಂದು ಸಾವಿರ ಜನ ಮಹಿಳೆಯರು, ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಜಾರ್ಜಂಡದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಮಹಿಳೆಯರು ಈಗಿನ ಪರಿಸ್ಥಿತಿಯಲ್ಲಿ ಜಾಗೃತಿಯಿಂದ ಬದುಕುವ ಅವಶ್ಯಕತೆಯಿದೆ ಎಂದರು.

ಸಾವಿತ್ರಿಬಾಯಿ ಫುಲೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಬೇಕು ಎಂದು ನಿರ್ಧಾರ ಮಾಡಿದಾಗ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಕೇಳಿ ಬಂದವು. ಆ ಆರೋಪ, ದಬ್ಬಾಳಿಕೆಗೆ ಹೆದರದೆ ಅವರು ಮಹಿಳರಯರಿಗೆ ಶಿಕ್ಷಣ ನೀಡಿ ಸಮಾಜಕ್ಕೆ ಆದರ್ಶವಾದರು ಎಂದು ಸ್ಮರಿಸಿದರು.

ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ಅವುಗಳಿಗೆ ಸ್ಪಂದಿಸದೆ ಬಿಜೆಪಿ ಸರ್ಕಾರ ಗೋ ಹತ್ಯೆ ಮಾಡಬೇಡಿ, ಮಾಂಸ ತಿನ್ನಬೇಡಿ, ಮತಾಂತರ ಮಾಡಬೇಡಿ ಎಂದು ಹೇಳುತ್ತಿದೆ. ಆದರೆ ಯುವಕರಿಗೆ ಉದ್ಯೋಗ ನೀಡಲು ಆಸಕ್ತಿ ತೊರುತ್ತಿಲ್ಲ ಎಂದು ಆರೋಪಿಸಿದರು.

ಕೋಲ್ಕತ್ತಾದಲ್ಲಿ 27 ಸಾವಿರ ಜನಕ್ಕೆ ಉದ್ಯೋಗ ನೀಡುತ್ತಿದ್ದ ಕ್ರೈಸ್ತ ಮಿಶನರಿ ಮೇಲೆ ಕೇಂದ್ರ ಸರ್ಕಾರ ಐಟಿ ದಾಳಿ ಮಾಡಿ ಹಣ ತಡೆ ಹಿಡಿದೆ. ಕರ್ನಾಟಕದಲ್ಲೂ ಮತಾಂತರ ಕಾಯ್ದೆ ಜಾರಿ ಮಾಡುವ ಮೂಲಕ ಕ್ರೈಸ್ತ ಸಮುದಾಯವನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರಂತಹ ನಾಯಕ ನಿಮಗೆ ಸಿಕ್ಕಿದ್ದು, ನಿಮ್ಮ ಅದೃಷ್ಟ ಅವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಜರುಗಲಿದ್ದು, ಅವುಗಳಲ್ಲಿ ತಪ್ಪದೇ ಭಾಗಿಯಾಗಬೇಕು ಎಂದು ಸಲಹೆ ನೀಡಿದ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಆಸ್ಕರ್ ಫರ್ನಾಂಡಿಸ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರಸ್‌ ನಿಂದ ಕಮಿಟಿ ರಚಿಸಿ, ದೊಡ್ಡ ಮಟ್ಟದ ಸಮ್ಮೇಳನ ಮಾಡಿ ಜಾಗೃತಿ ಮೂಡಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.‌ಎಂ. ಪಾಟೀಲ್‌ , ಶಕ್ತಿ ಏಡ್ಸ್‌ ನ ಮಹಿಳಾ ಸಂಸ್ಥೆ ಅಧ್ಯಕ್ಷೆ ಲಲಿತಾ ಹೊಸಮನಿ, ಲೀಲಾ ಸಂಪಗಿ ಸೇರಿದಂತೆ ಶಕ್ತಿ ಏಡ್ಸ್‌ ತಡೆಗಟ್ಟುವ ಮಹಿಳಾ ಸಂಸ್ಥೆಸದಸ್ಯರು ಇದ್ದರು. ಜಯರಾಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button