*ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ: ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ*

ಬಾಕನೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಸಚಿವರು
ಪ್ರಗತಿವಾಹಿನಿ ಸುದ್ದಿ: ಮಾರ್ಚ್ ತಿಂಗಳ ಗೃಹಲಕ್ಷ್ಮಿ ಇನ್ನು 4 -5 ದಿನದಲ್ಲಿ ಹಾಗೂ ಏಪ್ರಿಲ್ ತಿಂಗಳ ಹಣ ಇನ್ನು 8 -10 ದಿನದಲ್ಲಿ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಕನೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೆಲಸ ಮಾಡುವುದೆಂದರೆ ನನಗೆ ಹುಚ್ಚು. 2013ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಕೂಡ ಕೆಲಸ ಮಾಡುತ್ತಲೇ ಇದ್ದೆ. ಬೇರೆಯವರಂತೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ, ಕೆಲಸ ಮಾಡುವುದೊಂದೇ ನನಗೆ ಗೊತ್ತು. ಹಿಂದೆ ಆಯ್ಕೆಯಾದವರು ಬರೇ ಹಿಂದುತ್ವ ಎಂದುಕೊಂಡು ಓಡಾಡಿದ್ದನ್ನು ಬಿಟ್ಟು ಬೇರೇನೂ ಮಾಡಿಲ್ಲ. ನಾನು ಹೇಳುವುದಿಲ್ಲ, ಮಾಡಿ ತೋರಿಸುತ್ತಿದ್ದೇನೆ. ಪ್ರತಿಯೊಂದು ಸಮಾಜಕ್ಕೆ ಸಹಾಯವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ವ ಭಾಷಿಕ, ಸರ್ವ ಜಾತಿಯ ಜನರ ಕೆಲಸ ಮಾಡುತ್ತಿದ್ದೇನೆ. ಸರ್ವ ಕ್ಷೇತ್ರದಲ್ಲೂ ನಂಬರ್ ಒನ್ ಮಾಡುವ ಮೂಲಕ ಬಾರಾಮತಿಯಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾನು ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಅಲ್ಲದೆ ಶಿಕ್ಷಣ, ಆರೋಗ್ಯ ಕ್ಷೇತ್ರದ ಔನ್ನತ್ಯಕ್ಕೂ ಕೆಲಸ ಮಾಡುತ್ತಿದ್ದೇನೆ. ರೈತರು ವರ್ಷಕ್ಕೆ 2 -3 ಬೆಳೆ ಬೆಳೆಯುವಂತೆ ನೀರಾವರಿ ಸೌಲಭ್ಯ ಮಾಡಿಕೊಡುವ ಕನಸು ಹೊಂದಿದ್ದೇನೆ. ನಿಮ್ಮೆಲ್ಲರ ನಿರಂತರ ಬೆಂಬಲವಿರಲಿ ಎಂದೂ ಅವರು ತಿಳಿಸಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವಾರು ಮುಖಂಡರು, ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


