Karnataka NewsPolitics

*ಪ್ರಣಾಳಿಕೆ- ಈಡೇರಿಕೆ: ಲೆಕ್ಕ ಕೊಟ್ಟ ಸಿದ್ದರಾಮಯ್ಯ* *2 ದಿನಗಳ ಸಭೆ ಬಳಿಕ ಡಿಸಿ, ಸಿಇಒಗಳಿಗೆ ಸಿಎಂ ನಿರ್ದೇಶನ ಏನು ಕೊಟ್ರು ನೋಡಿ*

ದ್ವೇಷ ಭಾಷಣದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ

ಪ್ರಗತಿವಾಹಿನಿ ಸುದ್ದಿ: ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಪ್ರಶ್ನಿಸಿದ್ದಾರೆ.

ಡಿಸಿ, ಸಿಇಒ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದ್ವೇಷ ಭಾಷನದ ಬಗ್ಗೆ ತಕ್ಷಣ ದೂರು ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಇದೇ ರೀತಿ ಸರ್ಕಾರದ ಯೋಜನೆಗಳ ಬಗ್ಗೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಸುಳ್ಳು ಸುದ್ದಿಗಳನ್ನು, ಮಾಹಿತಿಗಳನ್ನು ಹರಡುವ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Home add -Advt

ನಾವು ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು.

ಮಾದಕ ವಸ್ತು ಮಾರಾಟ ಮಾಡುವವರ ಅಂಗಡಿ ಮತ್ತಿತರ ಕೇಂದ್ರಗಳ ಪರವಾನಗಿ ರದ್ದುಗೊಳಿಸುವ ಸಂಬಂಧ ಕಾನೂನು ತಿದ್ದುಪಡಿ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

2023ರಲ್ಲಿ 6767 ಪ್ರಕರಣಗಳು, 2024ರಲ್ಲಿ 4188 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಇದುವರೆಗೆ 1793 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಗಳಲ್ಲಿ ಮಾದಕ ದ್ರವ್ಯ ದಂಧೆಯನ್ನು ಮಟ್ಟ ಹಾಕಲು ಡಿಸಿ ಹಾಗೂ ಎಸ್ಪಿ ಅವರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯಬಿದ್ದರೆ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು.

ಜಿಲ್ಲಾಧಿಕಾರಿಗಳು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲಾ ಸಹಕಾರ ಪೊಲೀಸ್ ಇಲಾಖೆಗೆ ನೀಡಬೇಕು. ಗೂಂಡಾ ಕಾಯ್ದೆಯಡಿ ಬಾಕಿಯಿರುವ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಮೇ 30 ಮತ್ತು 31ರ ಎರಡು ದಿನಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ 18 ಗಂಟೆಗಳ DC, CEO ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸೂಚನೆಗಳು…

• ಜಿಲ್ಲೆಯ ಅಭಿವೃದ್ಧಿ ಕಾರ್ಯ, ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಡಿಸಿ, ಎಸ್ಪಿ, ಸಿಇಒಗಳ ಜವಾಬ್ದಾರಿ. ಮೂರೂ ಅಧಿಕಾರಿಗಳು ಸಮನ್ವಯದಿಂದ ಯಾವುದೇ ಇಗೋ ಇಲ್ಲದೆ ಕಾರ್ಯನಿರ್ವಹಿಸಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿ, ಕಾರ್ಯದರ್ಶಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ.

• ನಾವು ಏನು ಬದಲಾವಣೆ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೇವೆಯೋ ಅದನ್ನು ಜಾರಿಗೊಳಿಸುವುದು ನಿಮ್ಮ ಹೊಣೆ. ನಿಮ್ಮ ಹೆಜ್ಜೆ ಗುರುತು ಜಿಲ್ಲೆಯಲ್ಲಿ ಮೂಡುವಂತಹ ಕಾರ್ಯವನ್ನು ನೀವು ಮಾಡಬೇಕು. ಬಾಬಾ ಸಾಹೇಬ್ ಅವರು ಹೇಳಿದ ಹಾಗೆ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗುವುದು ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ, ಇದನ್ನು ಸಾಧ್ಯವಾಗಿಸಬೇಕಾದುದು ನಿಮ್ಮ ಕರ್ತವ್ಯ.

• ಪ್ರಣಾಳಿಕೆಯಲ್ಲಿನ ನಮ್ಮ 533 ಭರವಸೆಗಳ ಪೈಕಿ 242 ಭರವಸೆಗಳನ್ನು ನಾವು ಈಗಾಗಲೇ ಈಡೇರಿಸಿದ್ದೇವೆ. ಇದರ ಸಮರ್ಪಕ ಅನುಷ್ಠಾನ ನಿಮ್ಮೆಲ್ಲರ ಹೊಣೆಗಾರಿಕೆ.

• ಅಸ್ಪಷ್ಯತೆ ಇನ್ನೂ ಹಲವು ಭಾಗಗಳಲ್ಲಿ ಜೀವಂತವಾಗಿದೆ; ಇದೇ ರೀತಿ ಬಾಲ್ಯ ವಿವಾಹದಂತಹ ಪಿಡುಗುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.

• ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಬಗ್ಗೆ ಕೇವಲ ಸಿಂಪಥಿ (sympathy)ಯಲ್ಲ, ಬಗ್ಗೆ ಎಂಪಥಿ(Empathy) ಬೆಳೆಸಿಕೊಳ್ಳಬೇಕು.

• ಪತ್ರಿಕೆಗಳಲ್ಲಿ ಬರುವ ಟೀಕೆಗಳು, ವರದಿಗಳಿಗೆ ತಕ್ಷಣ ಸ್ಪಂದಿಸಬೇಕು. ಇದರಿಂದ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

• ನೀವು ಸರ್ಕಾರ ಮತ್ತು ಜನಸಾಮಾನ್ಯರಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು.

• ತಂತ್ರಜ್ಞಾನ ಜನಸಾಮಾನ್ಯರ ಗರಿಷ್ಠ ಹಿತಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು.


Related Articles

Back to top button