Kannada NewsKarnataka NewsNationalPolitics

*ಸರಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ*

ಪ್ರಗತಿವಾಹಿನಿ ಸುದ್ದಿ : ಆರ್ ಸಿಬಿ 18 ವರ್ಷಗಳ ಬಳಿಕ ಟ್ರೋಫಿ ಗೆದ್ದ ಬಳಿಕ ಬೆಂಗಳೂರಲ್ಲಿ  ವಿಜಯೋತ್ಸವ ನಡೆಸುವ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಕಾರಿದ್ದಾರೆ. 

ದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತಾಡಿರುವ ಅವರು, ಡಿ.ಕೆ.ಶಿವಕುಮಾ‌ರ್ ಅವರ ಅಚಾತುರ್ಯ, ಆತುರ ಹಾಗೂ ಅವಿವೇಕಿತನದಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಕಾರಣನಾದ ಅವಿವೇಕಿ ಡಿಸಿಎಂ ಡಿಕೆಶಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಇರುವುದು ಕಟುಕರ ಸರ್ಕಾರ. ಸಿಎಂ ಸಿದ್ದರಾಮಯ್ಯ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ. ಸರ್ಕಾರದ ದುರಾಡಳಿತವೇ ಇದಕ್ಕೆ ಪ್ರಮುಖ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಡಿಸಿಎಂ ಡಿಕೆಶಿಯೇ ಹೊಣೆ ಎಂದ ಹೆಚ್.ಡಿ.ಕುಮಾರಸ್ವಾಮಿ

ಡಿಸಿಎಂ ಅವಿವೇಕದಿಂದಲೇ ಈ ದುರಂತ ಸಂಭವಿಸಿದೆ

ಈ ಅವಿವೇಕಿಯನ್ನು ಸಂಪುಟದಿಂದ ಕಿತ್ತೆಸೆಯಲು ಸಿಎಂಗೆ ಕೇಂದ್ರ ಸಚಿವರ ಆಗ್ರಹ

ಡಿಸಿಎಂ ವೈಭವೀಕರಣಕ್ಕೆ ಆರ್ ಸಿಬಿ ಗೆಲುವು ಬಳಕೆ ಎಂದು ಆಕ್ರೋಶ

: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಚಾತುರ್ಯ, ಆತುರ, ಅಪರಿಪಕ್ವ ವರ್ತನೆ ಹಾಗೂ ಅವಿವೇಕಿತನದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಹನ್ನೊಂದು ಜನ ಕ್ರಿಕೆಟ್ ಪ್ರೇಮಿಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ತಡರಾತ್ರಿ ಕರೆದಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡಿ; ಈ ದುರಂತಕ್ಕೆ ಕಾರಣನಾದ ಅವಿವೇಕಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಒತ್ತಾಯ ಮಾಡಿದರು.

ಕರ್ನಾಟಕದಲ್ಲಿ ಇರುವುದು ಕಟುಕರ ಸರಕಾರ. ಈ ಸರಕಾರದ ಮುಖ್ಯಮಂತ್ರಿಯ ಬಗ್ಗೆ ಈ ಪದ ಹೇಳಲು ನನಗೆ ಬೇಸರವಾಗುತ್ತದೆ. ಅವರೊಬ್ಬ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ ನಡೆಯುತ್ತಿರಬೇಕಾದರೆ ಅಗ್ಗೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಾಲ್ವರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದು ಗೊತ್ತಾದ ಮೇಲೆಯೂ ಇವರು ಸನ್ಮಾನ ಕಾರ್ಯಕ್ರಮ ಮುಂದುವರಿಸಿದ್ದಾರೆ. ಇನ್ನು ಇವರನ್ನು ಕಟುಕರು ಎಂದು ಕರೆಯದೇ ಇನ್ನೇನೆಂದು ಕರೆಯಬೇಕು ಎಂದು ಸಚಿವರು ಕಿಡಿಕಾರಿದರು.

ವಿರಾಟ್ ಕೊಹ್ಲಿ ಹದಿನೆಂಟು ವರ್ಷಗಳ ಕಾಲ ತಂಡವನ್ನು ಗೆಲ್ಲಿಸಲು ಅವಿರತವಾಗಿ ಶ್ರಮಿಸಿದರು. ಆರ್ ಸಿಬಿ ಅದೊಂದು ಪ್ರಾಂಚೈಸಿ ಅಲ್ಲ, ಅದೊಂದು ಕರ್ನಾಟಕದ ಕ್ರಿಕೆಟ್ ತಂಡ ಎನ್ನುವ ನಂಬಿಕೆ ಕನ್ನಡಿಗರಲ್ಲಿದೆ. ಈ ಸಲ ಕಪ್ ನಮ್ದು ಎಂದು ಎಲ್ಲರೂ ಹೇಳುತ್ತಿದ್ದರು. ಆರ್ ಸಿಬಿ ಗೆಲ್ಲಲಿ ಎಂದು ಜನರು ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಜನರ ನಂಬಿಕೆಗೆ ಈ ಸರಕಾರ ಘಾಸಿ ಉಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ರಾತ್ರಿ ಕುತೂಹಲ ಘಟ್ಟಕ್ಕೆ ತಲುಪಿ ಅಂತಿಮವಾಗಿ ಆರ್ ಸಿಬಿ ತಂಡ ಕಪ್ ಗೆದ್ದಿತು. ತರಾತುರಿಯಾಗಿ ಇಷ್ಟು ಬೇಗ ಅವರಿಗೆ ಅಭಿನಂದನೆ, ಸನ್ಮಾನ ಹಮ್ಮಿಕೊಂಡಿದ್ದು ಯಾಕೆ? ಆ ತಂಡಕ್ಕೆ ಆಹ್ವಾನ ಕೊಟ್ಟವರು ಯಾರು? ಇಷ್ಟು ಆತುರ ಯಾಕೆ? ಇಲ್ಲಿ ಡಿಸಿಎಂ ಅವರು ನಿರ್ವಹಿಸಿದ ಪಾತ್ರ ಏನು ಎಂಬುದು ಎಲ್ಲರೂ ಬಲ್ಲರು ಎಂದು ಅವರು ಕಟುವಾಗಿ ಟೀಕಿಸಿದರು.

ಬುಧವಾರ ಬೆಳಗ್ಗೆ ತಂಡವನ್ನು ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಹೋದವರು ಯಾರು? ಅದನ್ನು ಇವೆಂಟ್ ರೀತಿಯಲ್ಲಿ ವೈಭವೀಕರಿಸಿದ್ದು ಯಾರು? ಡಿಸಿಎಂ ಅವರು ತಮ್ಮನ್ನು ತಾವು ವೈಭವೀಕರಿಸಿಕೊಳ್ಳಲು ಇಷ್ಟೆಲ್ಲಾ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯಾರಿದ್ದರು? ಡಿಸಿಎಂ ಮತ್ತವರ ಪಟಾಲಂ ಮಾತ್ರ ಇತ್ತು. ಇದೇನು ಡಿಕೆಶಿ ಆರ್ ಸಿಬಿ ತಂಡವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಎರಡು ಕಡೆ ಕಾರ್ಯಕ್ರಮ ಮಾಡುವ ಅಗತ್ಯ ಏನಿತ್ತು? ಒಂದು ಕಡೆ ಮಾಡಿದ್ದರೆ ಸಾಕಿತ್ತು. ಅದಕ್ಕೆ ಸೂಕ್ತ ಕಾಲಾವಕಾಶ ತೆಗೆದುಕೊಂಡು ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಗತ್ಯ ಭದ್ರತೆ, ಮುನ್ನೆಚ್ಚರಿಕೆ ವಹಿಸಬೇಕಿತ್ತು. ಅದು ಯಾವುದನ್ನು ಮಾಡದೆ ಕೇವಲ ತಮ್ಮ ವೈಭವೀಕರಣಕ್ಕೆ ಡಿಸಿಎಂ ಇಷ್ಟೆಲ್ಲಾ ಮಾಡಿದರು. ಅವರ ಅವಿವೇಕಿತನದಿಂದ ಕ್ರೀಡಾಭಿಮಾನಿಗಳು ಜೀವ ಕಳೆದುಕೊಂಡರು ಎಂದು ಅವರು ಆರೋಪಿಸಿದರು.

ವಿಧಾನಸೌಧದ ಮುಂದೆ ಡಿಸಿಎಂ ಶೋ ಮುಗಿದ ಮೇಲೆ ಅವರು ಕ್ರೀಡಾಂಗಣಕ್ಕೆ ಬರುತ್ತಾರೆ. ಅಲ್ಲಿ ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದಿವೆ. ಈ ಡಿಸಿಎಂ ಎನ್ನುವ ವ್ಯಕ್ತಿ ಮೈದಾನಕ್ಕೆ ಬಂದು ಸನ್ಮಾನ ಕಾರ್ಯಕ್ರಮ ನಿಲ್ಲಿಸುವ ಬದಲು ಅಲ್ಲಿಯು ಟ್ರೋಫಿ ಹಿಡಿದು ಮೇಲಕ್ಕೆ ಎತ್ತಿ ಮುತ್ತು ಕೊಡುತ್ತಾರೆ. ಇವರು ಏನು ಮೈದಾನದಲ್ಲಿ ಆಟವಾಡಿ ಕಪ್ ಗೆದ್ದಿದ್ದಾರೆಯೇ? ಬಹುಶಃ ಆಟಗಾರರಿಗೂ ಕಪ್ ಗೆ ಮುತ್ತಿಕ್ಕಲು ಸಾಧ್ಯವಾಗಲಿಲ್ಲವೇನೋ? ಅಂತಹದ್ದರಲ್ಲಿ ಈ ವ್ಯಕ್ತಿ ಸಾವುಗಳ ನಡುವೆಯೂ ಪ್ರಚಾರ ಗಿಟ್ಟಿಸಲು, ಸ್ವಯಂ ವೈಭವೀಕರಿಸಿಕೊಳ್ಳಲು ಆರ್ ಸಿಬಿ ಗೆಲುವನ್ನು ಬಳಸಿಕೊಂಡರು ಎಂದು ಕುಮಾರಸ್ವಾಮಿ ಕೆಂಡ ಕಾರಿದರು.

ಇಂಥ ಅವಿವೇಕಿಯನ್ನು ಕೂಡಲೇ ಸಂಪುಟದಿಂದ ಹೊರಕ್ಕೆ ಹಾಕಬೇಕು. ಈ ಮುಖ್ಯಮಂತ್ರಿಗೆ ನಿಜಕ್ಕೂ ಶಕ್ತಿ, ದಮ್ಮು ತಾಕತ್ತು ಎನ್ನುವುದು ಇದ್ದರೆ ಮೊದಲು ಇಂಥಹ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರ ಹಾಕಲಿ ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

Related Articles

Back to top button