
ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸಾವಿನ ಸರಣಿ ಮುಂದುವರೆದಿದೆ. ಇಂದು ಒಂದೇ ದಿನ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಆಟೋ ಚಾಲಕರೊಬ್ಬರು ಇಂದು ಬೆಳಿಗ್ಗೆಯಷ್ಟೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಸಂಜೆ ವೇಳೆಗೆ ಬಿಎಂಟಿಸಿ ಬಸ್ ಕಂಡಕ್ಟರ್ ಓರ್ವರು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
37 ವರ್ಷದ ಆಟೋ ಚಾಲಕ ಗೋವಿಂದ ಹಾಗೂ ಬಿಎಂಟಿಸಿ ಬಸ್ ಕಂಡಕ್ಟರ್ 41 ವರ್ಷದ ಗಿರೀಶ್ ಮೃತರು. ಆಟೋ ಚಾಲಕ ಗೋವಿಂದ ಅವರಿಗೆ ಆಟೋ ಚಲಾಯಿಸುತ್ತಿದ್ದಗಲೇ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ತಾವೇ ಆಟೋ ಓಡಿಸಿಕೊಂಡು ಹಾಸನ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ಬಂದವರೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ಗಿರೀಶ್ ಇಂದು ರಜೆ ಇದ್ದ ಕಾರಣಕ್ಕೆ ತಮ್ಮ ಊರಾದ ಹಾಸನದ ತಮ್ಮ ಊರಾದ ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮಕ್ಕೆ ತೆರಳಿದ್ದರು. ಹೊಲದಲ್ಲಿ ಜೋಳದ ಬೆಳೆಗೆ ಗೊಬ್ಬರ ಹಾಕಿ ಮನೆಗೆ ಬಂದಿದ್ದರು. ಏಕಾಏಕಿ ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.