*ಕನ್ನಡ ಮಾತನಾಡದಂತೆ ಹಾಸ್ಟೆಲ್ ವಾರ್ಡನ್ ನಿಂದ ಧಮ್ಕಿ: ವಜಾ ಬೆನ್ನಲ್ಲೇ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ್ದ ಹಾಸ್ಟೆಲ್ ವಾರ್ಡನ್ ನನ್ನು ವಜಾಗೊಳಿಸಿ ಬಂಧಿಸಿರುವ ಘಟನೆ ಬೆಳಕಿಗೆಬಂದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಲ್ಕೆರೆ ಬಳಿಯ ಪ್ರತಿಷ್ಠಿತ ಕಾಲೇಜಿನ ಹಾಸ್ಟೇಲ್ ನಲ್ಲಿ ವಾರ್ಡನ್ ಸುರೇಶ್, ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಮಾತನಾಡದಂತೆ ಧಮ್ಕಿ ಹಾಕಿದ್ದಾರೆ. ವಿದ್ಯಾರ್ಥಿಗಳು ಪರಸ್ಪರ ಮಾತನಾಡುವಾಗಲೂ ಕನ್ನಡದಲ್ಲಿ ಮಾತನಾಡುವಂತಿಲ್ಲ. ಹಿಂದಿಯಲ್ಲಿ ಮಾತನಾಡಿ ಎಂದು ಗದರಿದ್ದಾನೆ.
ನಿಮಗೆ ಕನ್ನಡ ಮಾತನಾಡಬೇಕು ಎಂದರೆ ಹೋಗಿ ನಿಮ್ಮ ಮನೆಗಳಲ್ಲಿ ಮಾತನಾಡಿ. ಇಲ್ಲಿ ಕನ್ನಡ ಮಾತನಾಡುವುದು ಸರಿಯಲ್ಲ. ಹಿಂದಿಯಲ್ಲಿ ಮಾತನಾಡಿ. ಕನ್ನಡದಲ್ಲಿ ಮಾತನಾಡಬಾರದು ಅಂದರೆ ಮಾತನಾಡಬಾರದು ಅಷ್ಟೇ ಎಂದು ಧಮ್ಕಿ ಹಾಕಿದ್ದಾನೆ. ವಾರ್ಡನ್ ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಕಾಲೇಜು ಹಾಸ್ಟೇಲ್ ಬಳಿ ತೆರಳಿ ಪ್ರತಿಭಟನೆ ನಡೆಸಿದ್ದಲ್ಲದೇ, ವಾರ್ಡನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಡಿ. ಹಿಂದಿ ಮಾತನಾಡಿ ಎಂದು ಧಮ್ಕಿ ಹಾಕುವಷ್ಟು ಉದ್ಧಟನದ ಯಕ್ತಿ ಬೇಡ, ಆತನನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಾರ್ಡನ್ ಸುರೇಶ್ ನನ್ನು ವಜಾಗೊಳಿಸಿದೆ. ಅಲ್ಲದೇ ಆನೇಕಲ್ ಪೊಲೀಸರು ವಾರ್ಡನ್ ಸುರೇಶ್ ನನ್ನು ಬಂಧಿಸಿದ್ದಾರೆ.




