Belagavi NewsBelgaum News

*ಅತಿವೃಷ್ಟಿಯಿಂದ ಮನೆಹಾನಿ: ತ್ವರಿತ ಪರಿಹಾರ ವಿತರಿಸಲು ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿ ವಿಪುಲ್‌‌ ಬನ್ಸಾಲ್ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ‌ ಹಾನಿಗೊಳಗಾದ‌ ಮನೆಗಳಿಗೆ ಪರಿಹಾರ‌ ವಿತರಣಾ‌ ಕಾರ್ಯದಲ್ಲಿ  ಯಾವುದೇ ಕಾರಣಕ್ಕೂ ವಿಳಂಬವಾಗದಂತೆ‌ ನಿಗಾವಹಿಸಬೇಕು. ಜೊತೆಗೆ ಜನ-ಜಾನುವಾರುಗಳ ಪ್ರಾಣ ಹಾನಿಗೆ ಸಂಬಧಿಸಿದಂತೆ ತ್ವರಿತ ಪರಿಹಾರ ವಿತರಣೆಗೆ ಕ್ರಮ‌ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾ‌ ಉಸ್ತುವಾರಿ ಕಾರ್ಯದರ್ಶಿಗಳಾದ ವಿಪುಲ್ ಬನ್ಸಾಲ್ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ (ಅ.19) ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ‌ ಮಟ್ಟದ ಪ್ರಗತಿ ಪರಿಶೀಲನಾ‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತೀವೃಷ್ಠಿಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದ ಇಲಾಖೆಗಳು ಜಂಟಿ‌ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಪರಿಹಾರ ವಿತರಣೆಗೆ ಕ್ರಮ‌ಕೈಗೊಳ್ಳಬೇಕು ಎಂದರು.

ಪ್ರತಿ ಗ್ರಾಮ ಪಂಚಾಯತಗಳಲ್ಲಿ  ಕಡ್ಡಾಯವಾಗಿ ಗ್ರಾಮ ಸಭೆಗಳನ್ನು ಆಯೋಜಿಸ ಬೇಕು. ಗ್ರಾಮ ಸಭೆಗಳ ಬೇಡಿಕೆ‌ ಅನುಸಾರ  ತಯಾರಿಸಲಾದ ಕ್ರಿಯಾ ಯೋಜನೆಗಳನ್ನು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಾಮಗಾರಿಗಳನ್ನು  ಪೂರ್ಣಗೊಳಿಸಿ ಅನುದಾನ ವ್ಯಪಗತವಾಗದಂತೆ ನಿಗಾವಹಿಸಲು ತಿಳಿಸಿದರು.

ಜಿಲ್ಲಾ ಪಂಚಾಯತ ಅಡಿಯಲ್ಲಿ‌ ಬರುವಂತಹ ವಿವಿಧ ವಸತಿ ಯೋಜನೆಗಳಡಿ ನಿಗದಿ ಪಡಿಸಲಾದ‌ ಗು‌ರಿ‌ ಸಾಧಿಸಬೇಕು. ಅಲ್ಲದೇ‌ ಈಗಾಗಲೇ ಬಾಕಿ‌ ಇರುವ‌ ಮನೆಗಳ ನಿರ್ಮಾಣ‌ ಕಾರ್ಯ ತ್ವರಿತವಾಗಿ ಪ್ರಾರಂಭಿಸಬೇಕು. 

ಪ್ರತಿ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವಂತಹ ಘನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ‌‌ ನಿರ್ವಹಿಸಬೇಕು. ಪ್ರತಿ ಗ್ರಾಮ‌ ಪಂಚಾಯತಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಬೇಕು. ಗ್ರಾಮ‌ ಪಂಚಾಯತಗಳಲ್ಲಿ  ಗ್ರಾಮಗಳಲ್ಲಿ ಸ್ವಚ್ಛತರ ಕಾಪಾಡಿಕೊಳ್ಲುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು‌. 

ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ‌ ಪೂರ್ಣ ಗೊಳಿಸಬೇಕು. ಈಗಾಗಲೇ ನಿಗದಿ‌ಪಡಿಸಿದ ಗುರಿಗಳನ್ನು ಪೂರ್ಣಗೊಳಿಸುವದರ ಜೊತೆಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ‌ ವಹಿಸಬೇಕು. 

ಪ್ರಸಕ್ತ ಸಾಲಿನ ಚಳಿಗಾಲ ಅಧಿವೇಶನ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಉತ್ಸವದ ಮಾಹಿತಿ ಪಡೆದ ಅವರು ಸದರಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ‌ ಇಲಾಖೆಗಳು ಸಮನ್ವಯದೊಂದಿಗೆ ‌ಕಾರ್ಯ ನಿರ್ವಹಿಸುವಂತೆ ಜಿಲ್ಲಾ‌ ಉಸ್ತುವಾರಿ  ಕಾರ್ಯದರ್ಶಿಗಳಾದ ವಿಪುಲ್‌ ಬನ್ಸಾಲ್ ಅವರು ತಿಳಿಸಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೋನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ನಗರಾಭಿವೃದ್ದಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೂಲೇರ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button