
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಿತ್ತೂರು ಉತ್ಸವ ಮಹಿಳೆಯರ ಉತ್ಸವವಾಗಿದೆ. ರಾಣಿ ಚನ್ನಮ್ಮಳ ನಾಡು, ನುಡಿಗಾಗಿ ಮಾಡಿದ ಹೋರಾಟ ತ್ಯಾಗಗಳ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಅ.23) ಜಿಲ್ಲೆಯ ರಾಣಿ ಚನ್ನಮ್ಮಳ ತವರೂರಾದ ಕಾಕತಿ ಗ್ರಾಮದಲ್ಲಿ 201ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮದ ಅಂಗವಾಗಿ ಕಿತ್ತೂರು ರಾಣಿ ಚನ್ನಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಕಿತ್ತೂರು ಉತ್ಸವವು ಪ್ರತಿ ವರ್ಷ ಕಾಕತಿಯಿಂದ ಪ್ರಾರಂಭವಾಗಿ ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಮಾಡುತ್ತಿದ್ದೇವ, ಕೇವಲ ಉತ್ಸವ ಅಷ್ಟೇ ಅಲ್ಲದೆ ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಹಿತ ನಡೆಯುತ್ತಿವೆ ಎಂದರು.
ಕಳೆದ ಕೆಲ ವರ್ಷಗಳಿಂದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ, ಕೋಟೆ ಹಾಗೂ ದ್ವಾರ ಬಾಗಿಲು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆವೆ. ಇನ್ನು ಹಲಾವಾರು ಬೇಡಿಕೆಗಳು ಇವೆ ಅವುಗಳನ್ನೆಲ್ಲಾ ಈಡೆರುಸುತ್ತೇವೆ ಎಂದು ಭರವಸೆ ನೀಡಿದರು.
ಕಿತ್ತೂರು ಚನ್ನಮ್ಮಾರವರ ಹೆಸರು ಜಿಲ್ಲೆಯಿಂದ ದಿಲ್ಲಿಯವರೆಗೆ ಮುಟ್ಟಿಸುವ ಕೆಲಸವನ್ನ ಕಿತ್ತೂರು ಉತ್ಸವ ಮಾಡಿದೆ. ಚೆನ್ನಮ್ಮಾಜಿ ನಮಗೆಲ್ಲಾ ಮಾದರಿ ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಈ ಉತ್ಸವದಿಂದ ಜಿಲ್ಲೆಗೆ ಒಂದು ಒಳ್ಳೆಯ ಹೆಸರು ಬರುವ ಹಾಗೆ ನಾವೆಲ್ಲರು ಸೇರಿಕೊಂಡು ಕೆಲಸ ಮಾಡಬೇಕು. ಉತ್ಸವದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನ ಯಶಸ್ವಿ ಮಾಡಬೇಕು. ಪ್ರತಿ ವರ್ಷ ಕಿತ್ತೂರು ಉತ್ಸವ ಯಶಸ್ವಿಯಾಗಿ ಮುಂದು ವರಿಯಲಿ 201ನೇ ಉತ್ಸವದೊಂದಿಗೆ ಇತಿಹಾಸಗಳನ್ನು ತಿಳಿದುಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕೊಹೊಳಿ ಅವರು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆಯ್.ಎ.ಎಸ್. ಅಕಾಡೆಮಿ ಕನ್ನಡ ಉಪನ್ಯಾಸಕರಾದ ರಾಜೀವ್ ಪಟೇಲ್ ಅವರು ಮಾತನಾಡಿ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕು ಮುಂಚೆ ಇದೆ ನಮ್ಮ ನಾಡಿನಿಂದ ಭವ್ಯ ಭಾರತಕ್ಕೆ ಮಾರ್ಗದರ್ಶಿಯಾದಂತಹ ಕ್ರಾಂತಿಯ ಕಿಡಿ ಎಂದರೆ ಅದು ತಾಯಿ ಚೆನ್ನಮ್ಮಾಜಿ, ಕನ್ನಡ ನಾಡಿಯಲ್ಲಿ ಅನೇಕ ವಿಚಾರಗಳಿಗೆ ನೆನಪಾಗುತ್ತಾರೆ, ತ್ಯಾಗದ ಪ್ರತೀಕ, ಬಲಿದಾನದ ಪ್ರತೀಕವಾಗಿ, ದೇಶ ಪ್ರೇಮದ, ಆದರ್ಶಗಳ, ಸಾಹಸದ ಪ್ರತೀಕವಾಗಿ ಚೆನ್ನಮ್ಮಾಜಿ ನಮಗೆ ನೆನಪಾಗುತ್ತಾರೆ ಎಂದರು.
ಹದಿನೆಂಟನೆ ಶತಮಾನದಲ್ಲಿ ಬ್ರಿಟಿಷರು ಬಹಳಷ್ಟು ವಿಚಾರಗಳನ್ನು ಇಟ್ಟುಕೊಂಡು ದಾಳಿಮಾಡಿದರು, ಆದರೆ ತನ್ನ ನೆಲಕ್ಕೆ ತನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಸಿಡಿದೇಳಬೇಕು ಎಂಬುದನ್ನ ಒಬ್ಬ ಸ್ತ್ರೀ ಆಗಿ, ಒಬ್ಬ ದೇಶ ಪ್ರೇಮಿಯನ್ನಾಗಿ ಮಾಡಿ ಇಡಿ ನಾಡಿಗೆ ಒಂದು ಕ್ರಾಂತಿಯ ಸಂದೇಶವನ್ನು ಮೊಳಗಿಸಿದ್ದು ತಾಯಿ ಚೆನ್ನಮ್ಮಾಜಿ. ಬ್ರಿಟಿಷರು ಹಲವಾರು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು ಎದೆಗುಂದದೆ ಒಬ್ಬ ಮಹಿಳೆಯಾಗಿ ಧೈರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ತಾಯಿ ಚೆನ್ನಮ್ಮಾಜಿ ಎಂದು ಒರ್ವ ಮಹಿಳೆಯಾಗಿದ್ದರು ತನ್ನ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಸಿಡಿದೆದ್ದು ನಿಂತತಹ ಮಹಿಳೆ ರಾಣಿ ಚನ್ನಮ್ಮ, ಅವರ ಶಕ್ತಿ, ಅವರ ಶೌರ್ಯ, ಸಾಮ್ರಾಜ್ಯದ ಧ್ವನಿ, ಶಕ್ತಿಯಾಗಿದನ್ನು ನಾವು ಇತಿಹಾಸದಲ್ಲಿ ನೋಡಬಹುದು.
ತಾಯಿ ಚನ್ನಮ್ಮಾಜಿ ಇಡಿ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾರೆ. ದೇಶಭಕ್ತಿಗೆ ಒಂದು ಹೆಸರು ಚೆನ್ನಮ್ಮಾಜಿ ಎಂದು ಉಪನ್ಯಾಸಕ ರಾಜು ಪಟೇಲ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಆಸೀಫ (ರಾಜು) ಸೇಠ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ನಗರ ಪೊಲೀಸ ಆಯುಕ್ತ ಭೂಷನ ಬೋರಸೆ ಗುಲಾಬರಾವ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕಾಕತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ, ಉಪಾಧ್ಯಕ್ಷರಾದ ರೇಣುಕಾ ಕೋಳಿ, ಸಿದ್ದು ಸುಣಗಾರ, ಯಲ್ಲಪ್ಪ ಕೋಳೆಕಾರ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತಿತರಿದ್ದರು.