![](https://pragativahini.com/wp-content/uploads/2020/07/sikh-gurdwara-ap.jpg)
ಪ್ರಗತಿವಾಹಿನಿ ಸುದ್ದಿ; ಲಾಹೋರ್: ಪಾಕಿಸ್ತಾನದ ಲಾಹೋರ್ನ ನೌಲಾಖಾ ಬಜಾರ್ನಲ್ಲಿರುವ ಸಿಖ್ ಸಮುದಾಯದ ಪವಿತ್ರ ಸ್ಥಳ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಪಾಕಿಸ್ತಾನ ಮುಂದಾಗಿದೆ. ಈ ಕುರಿತು ವರದಿಗಳು ಹೊರ ಬೀಳುತ್ತಿದ್ದಂತೆ, ಇದನ್ನು ವಿರೋಧಿಸಿರುವ ಭಾರತ ಸರ್ಕಾರ ಪಾಕಿಸ್ತಾನದ ಹೈಕಮಿಷನ್ ಎದುರು ಪ್ರತಿಭಟನೆಯನ್ನು ದಾಖಲಿಸಿದೆ.
ಪಾಕಿಸ್ತಾನದ ಲಾಹೋರ್ನ ನೌಲಾಖಾ ಬಜಾರ್ನಲ್ಲಿರುವ “ಭಾಯಿ ತರು ಸಿಂಗ್ ಜಿ” ಅವರ ಹುತಾತ್ಮ ಸ್ಥಳವಾದ ಗುರುದ್ವಾರ ಅಲ್ಲಿನ ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರ. ಆದರೆ, ಪಾಕಿಸ್ತಾನ ಈ ಸ್ಥಳವನ್ನು ಇಸ್ಲಾಂ ಧರ್ಮ ಪ್ರವರ್ತಕರಲ್ಲೊಬ್ಬರಾದ “ಶಾಹಿದ್ ಗಂಜ್” ಅವರ ಸ್ಥಳವೆಂದು ಹೇಳಿಕೊಂಡಿದೆ. ಅಲ್ಲದೆ, ಈ ಸ್ಥಳವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ದಾಖಲಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ಈ ಘಟನೆಯ ಬಗ್ಗೆ ಭಾರತ ಸರ್ಕಾರ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಮತ್ತು ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. ತಮ್ಮ ಧಾರ್ಮಿಕ ಹಕ್ಕುಗಳು ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಯೋಗಕ್ಷೇಮವನ್ನು ಕಾಪಾಡುವಂತೆ ಪಾಕಿಸ್ತಾನವನ್ನು ಕೇಳಿಕೊಳ್ಳಲಾಗಿದೆ ಎಂದಿದ್ದಾರೆ.
ಲಾಹೋರ್ನಲ್ಲಿರುವ ಶಾಹಿದಿ ಅಸ್ತಾನ್ ಭಾಯಿ ತರು ಜಿ” ಎಂಬುದು ಐತಿಹಾಸಿಕ ಗುರುದ್ವಾರವಾಗಿದ್ದು, ಭಾಯಿ ತರು ಜಿ 1745 ರಲ್ಲಿ ಇದೇ ಜಾಗದಲ್ಲಿ ಹುತಾತ್ಮರಾಗಿದ್ದರು. ಪರಿಣಾಮ ಈ ಗುರುದ್ವಾರವು ಪೂಜ್ಯ ಸ್ಥಳವಾಗಿದ್ದು, ಸಿಖ್ ಸಮುದಾಯದಿಂದ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ