*ಒಂದು ವಾರದ ಒಳಗಾಗಿ ಖಾನಾಪುರ ತಹಸೀಲ್ದಾರ್ ವರ್ಗಾವಣೆ ಮಾಡುವಂತೆ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಮಂತುರ್ಗಾ ಗ್ರಾಮದ ಜಮೀನಿನ ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾಗಿರುವ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರನ್ನು ಒಂದು ವಾರದ ಒಳಗೆ ಖಾನಾಪುರ ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಬೇಕು. ಅವರ ಜಾಗಕ್ಕೆ ಬೇರೆ ತಹಸೀಲ್ದಾರರನ್ನು ನೇಮಕಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ಎಸ್.ಜಿ ಪಂಡಿತ ಮತ್ತು ನ್ಯಾ. ಗೀತಾ ಕೆ.ಬಿ ಅವರಿದ್ದ ಉಚ್ಛ ನ್ಯಾಯಾಲಯದ ಧಾರವಾಡದ ವಿಭಾಗೀಯ ಪೀಠ ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದೆ.
ಮಂತುರ್ಗಾ ಗ್ರಾಮದ ರಿ.ಸ.ನಂ.108ಲ್ಲಿರುವ ಒಟ್ಟು 174 ಎಕರೆ 25 ಗುಂಟೆ ಜಮೀನಿನ ಪೈಕಿ 2 ಎಕರೆ 20 ಗುಂಟೆ ಜಮೀನಿನ ಬಹುಮಾಲಿಕತ್ವ, ನಕ್ಷೆ ಧೃಡೀಕರಣ, ಗಡಿ ಗುರುತಿಸವಿಕೆ, ಫೋಡಿ, ದುರಸ್ತಿ ಮತ್ತು ಪಹಣಿ ಪತ್ರಿಕೆಯ ಕಾಲಂ 9ರಲ್ಲಿ ಅಗತ್ಯ ಮಾರ್ಪಾಡು ಮಾಡುವಲ್ಲಿ ನ್ಯಾಯಾಲಯ ಪ್ರಕರಣ ಸಂಖ್ಯೆ 114086/2019ರಲ್ಲಿ ನೀಡಿರುವ ಆದೇಶವನ್ನು ಪಾಲಿಸುವಲ್ಲಿ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಉಲ್ಲೇಖಿಸಿರುವ ನ್ಯಾಯಾಲಯ ಈ ಆದೇಶ ನೀಡಿದೆ.
ಕೂಡಲೇ ತಹಸೀಲ್ದಾರ್ ಕೋಮಾರ ಅವರರನ್ನು ಖಾನಾಪುರದಿಂದ ಬೇರೆಡೆ ವರ್ಗಾವಣೆ ಮಾಡಬೇಕು, ನಾಲ್ಕು ವಾರದ ಒಳಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ಸದರಿ ಜಮೀನಿನ ಸರ್ವೇ ಮಾಡಿ ಮುಗಿಸಬೇಕು, ನಂತರದ 10 ದಿನಗಳ ಒಳಗೆ ತಹಸೀಲ್ದಾರ್-ಖಾನಾಪುರ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಈ ಪ್ರಕರಣದ ಆಪಾದಿತ ನಂ.1 ದುಂಡಪ್ಪ ಕೋಮಾರ ಅವರು ಡಿ.10ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ನೀಡಿರುವ ಆದೇಶದಲ್ಲಿ ವಿವರಿಸಿದೆ.

