Latest

ಮಧ್ಯಂತರ ರಜೆ ರದ್ದು: ಶಿಕ್ಷಕರ ಸಂಘಟನೆಗಳ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಾಲೆಗಳಿಗೆ ಪ್ರತಿ ವರ್ಷ ನೀಡಲಾಗುತ್ತಿದ್ದ ಮಧ್ಯಂತರ ರಜೆಯನ್ನು ರದ್ಧುಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅಕ್ಟೋಬರ್ 3ರಿಂದ 26ರ ವರೆಗೆ ಮಧ್ಯಂತರ ರಜೆ ನಿಗದಿಪಡಿಸಿ ಈ ಹಿಂದೆ ವಾರ್ಷಿಕ ಶೈಕ್ಷಣಿಕ ಚಟುವಟಿಕೆ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಶಿಕ್ಷಣ ಇಲಾಖೆ ಆಯುಕ್ತರು ಹೊಸ ಆದೇಶ ಹೊರಡಿಸಿ ಹಳೆಯ ಆದೇಶವನ್ನು ರದ್ಧುಪಡಿಸಿದ್ದಾರೆ.

ಶಿಕ್ಷಕರು ವಿದ್ಯಾಗಮ ಯೋಜನೆಯನ್ನು ಮುಂದಿನ ಆದೇಶದವರೆಗೂ ಮುಂದುವರಿಸುವಂತೆ ಸೂಚಿಸಲಾಗಿದೆ.

ಅಸಮಾಧಾನ: ಶಿಕ್ಷಕರಿಗೆ ಮಧ್ಯಂತರ ಮತ್ತು ಬೇಸಿಗೆ ರಜೆ ಇರುತ್ತದೆ ಎನ್ನುವ ಕಾರಣಕ್ಕೆ ಗಳಿಕೆ ರಜೆಯ ಪ್ರಮಾಣ ಕಡಿಮೆ ನಿಗದಿಪಡಿಸಲಾಗಿದೆ. ಆದರೆ ಈಗ ಏಕಾಏಕಿ ಮಧ್ಯಂತರ ರಜೆಯನ್ನು ಕಡಿತಗೊಳಿಸಿರುವುದು ಶಿಕ್ಷಕರ ಸಂಘಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವರ್ಷ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಶಿಕ್ಷಕರಿಗೆ ಕರ್ತವ್ಯ ತಪ್ಪಿಲ್ಲ. ಶಿಕ್ಷಕರು ಜೂನ್ 8ರಿಂದಲೇ ಶಾಲೆಗೆ ಹೋಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೋನಾದಂತಹ ಸಂಕಷ್ಟ ಮತ್ತು ಆತಂಕದ ಮಧ್ಯೆಯೂ ಶಿಕ್ಷಕರು ಶಾಲೆಗಳಿಗೆ ತೆರಳುತ್ತಿದ್ದಾರೆ. ಅಲ್ಲದೆ ಎಲ್ಲ ರೀತಿಯ ರಿಸ್ಕ್ ತೆಗೆದುಕೊಂಡು ಸಿಕ್ಕ ಸಿಕ್ಕ ಸ್ಥಳಗಳಲ್ಲಿ  ವಿದ್ಯಾಗಮ ಯೋಜನೆಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಆದರೆ ಇದನ್ನೆಲ್ಲ ಪರಿಗಣಿಸದೆ ಶಿಕ್ಷಕರಿಗೆ ಸಿಗುವ ರಜೆಯನ್ನೂ ರದ್ಧುಪಡಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button