
ಪ್ರಗತಿವಾಹಿನಿ ಸುದ್ದಿ: ಮಾರ್ಚ್ 28 ರಂದು ಈ ಬಾರಿಯ ಐಪಿಎಲ್ ಪಂದ್ಯಗಳು ಆರಂಭವಾಗಲಿದೆ. ಆರಂಭಿಕ ಪಂದ್ಯ ಆರ್ ಸಿ ಬಿ ಹಾಗೂ ಹೈದರಾಬಾದ್ ನಡುವೆ ನಡೆಯಲಿದ್ದು, ಕಳೆದ ಬಾರಿ ಆರ್ ಸಿ ಬಿ ನಡೆಸಿದ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಜನರನ್ನು ಸ್ಮರಿಸಲು ಆರ್ ಸಿ ಬಿ ಮುಂದಾಗಿದೆ.
2025ರ ಜೂನ್ 4 ರಂದು ಕ್ರೀಡಾಂಗಣ ಹೊರಭಾಗದಲ್ಲಿ ಆರ್ಸಿಬಿ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆ, ಈಗ ಆರ್ಸಿಬಿ ಮತ್ತು ಕೆಎಸ್ಸಿಎ ಜಂಟಿಯಾಗಿ ಮೃತರನ್ನು ಸ್ಮರಿಸುವ ಕಾರ್ಯಕ್ಕೆ ಮುಂದಾಗಿವೆ.
ಸ್ಟೇಡಿಯಂ ಪ್ರವೇಶದ ಬಳಿ ಒಂದು ಸ್ಮಾರಕ ಫಲಕವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದು ಅಂದು ನಡೆದ ಕಾಲ್ತುಳಿತದಲ್ಲಿ ಮಡಿದವರಿಗಾಗಿ ವಿಶೇಷ ಸಮರ್ಪಣೆಯಾಗಲಿದ್ದು ಘಟನೆಯ ಶಾಶ್ವತ ಸ್ಮರಣೆಯಾಗಿ ಉಳಿಯಲಿದೆ.
ಇದಲ್ಲದೆ, ಸ್ಟೇಡಿಯಂನಲ್ಲಿ 11 ಆಸನಗಳನ್ನು ಶಾಶ್ವತವಾಗಿ ಖಾಲಿಯಾಗಿ ಉಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಆಸನಗಳನ್ನು ಯಾವುದೇ ಪಂದ್ಯಕ್ಕೂ ಮಾರಾಟ ಮಾಡಲಾಗುವುದಿಲ್ಲ. ಈ ಕ್ರಮವು ಮೃತಪಟ್ಟ ಅಭಿಮಾನಿಗಳ ನೆನಪಿನ ಸಂಕೇತವಾಗಿರಲಿದೆ.
ಐಪಿಎಲ್ ಹೊಸ ಸೀಸನ್ ಆರಂಭದ ವೇಳೆ, ಮೊದಲ ಪಂದ್ಯಕ್ಕೂ ಮುನ್ನ ಮೃತರ ಹೆಸರುಗಳನ್ನು ಪ್ರದರ್ಶಿಸಿ, ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಗೌರವ ಸಲ್ಲಿಸುವ ಕಾರ್ಯಕ್ರಮವೂ ನಡೆಯಲಿದೆ.
ಪ್ರತಿಸ್ಪರ್ಧಿ ತಂಡವೂ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟಾರೆ, ಕ್ರೀಡಾಂಗಣದಲ್ಲಿ ನಡೆದ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟ ಘಟನೆಯನ್ನು ಮರೆಯದಂತೆ, ಮೃತರ ಸ್ಮರಣೆ ಶಾಶ್ವತವಾಗಿರಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.



